ADVERTISEMENT

ಟೆನಿಸ್ ದಿಗ್ಗಜರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST

ಬೆಂಗಳೂರು: ಹಿರಿಯ ಆಟಗಾರ ರಮಾನಾಥನ್ ಕೃಷ್ಣನ್ ಸೇರಿದಂತೆ ನಾಲ್ವರು ಟೆನಿಸ್ ದಿಗ್ಗಜರನ್ನು ಡೇವಿಸ್ ಕಪ್ ಪಂದ್ಯಗಳು ನಡೆಯುವ ಎರಡನೇ ದಿನ (ಶನಿವಾರ) ಸನ್ಮಾನಿಸಲು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ತೀರ್ಮಾನಿಸಿದೆ.

ರಾಮನಾಥನ್ ಪುತ್ರ ರಮೇಶ್ ಕೃಷ್ಣನ್, ಮಹೇಶ ಭೂಪತಿ  ಹಾಗೂ 1985ರಲ್ಲಿ ಬೆಂಗಳೂರಿನಲ್ಲಿ ನಡೆದ ಡೇವಿಸ್ ಕಪ್‌ನಲ್ಲಿ ಆಡಿದ್ದ ವಿಜಯ್ ಅಮೃತ್‌ರಾಜ್ ಅವರನ್ನು ಸನ್ಮಾನಿಸುವ ಬಗ್ಗೆ ಕೆಎಸ್‌ಎಲ್‌ಟಿಎ ಬುಧವಾರ ನಿರ್ಧಾರ ಕೈಗೊಂಡಿದೆ. ಶನಿವಾರ ಡಬಲ್ಸ್ ಪಂದ್ಯಗಳು ಆರಂಭವಾಗುವ ಮುನ್ನ ಈ ಸಮಾರಂಭ ಜರುಗಲಿದೆ.

`ರಾಮನಾಥನ್, ಅಮೃತರಾಜ್, ಭೂಪತಿ ಅವರ ಜೊತೆಗೆ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ)ಯ ಆಜೀವ ಅಧ್ಯಕ್ಷ ಯಶವಂತ ಸಿನ್ಹಾ ಅವರನ್ನೂ ಸನ್ಮಾನಿಸಲಾಗುವುದು' ಎಂದು ಕೆಎಸ್‌ಎಲ್‌ಟಿಎ ಕಾರ್ಯದರ್ಶಿ ಸಿ.ಎಸ್. ಸುಂದರರಾಜು ಬುಧವಾರ ತಿಳಿಸಿದರು.

`ಈ ಕ್ರೀಡಾಂಗಣದಲ್ಲಿ ಮೂರು ಸಾವಿರ ಪ್ರೇಕ್ಷಕರು ಪಂದ್ಯವನ್ನು ನೋಡಬಹುದು. ಅದರಲ್ಲಿ 1000 ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ. ಬೆಂಗಳೂರಿನಲ್ಲಿ ಡೇವಿಸ್ ಕಪ್ ಪಂದ್ಯಗಳು ನಡೆದು 28 ವರ್ಷಗಳು ಉರುಳಿದವು. ಆದಷ್ಟು ಬೇಗ ಮತ್ತೊಮ್ಮೆ ಈ ಕಪ್‌ಗೆ ಮತ್ತೊಮ್ಮೆ ಆತಿಥ್ಯ ವಹಿಸುವ ಅವಕಾಶ ಸಿಗಲಿ' ಎಂದೂ ಅವರು ವಿವರಿಸಿದರು.

ಐಪಿಎಸ್ ಅಧಿಕಾರಿ ಹಾಗೂ ಟೂರ್ನಿಯ ಸಂಘಟನಾ ಕಾಯದರ್ಶಿ ಕೆ.ವಿ. ಗಗನ್‌ದೀಪ್, ಕೆಎಸ್‌ಎಲ್‌ಟಿಎ ಜಂಟಿ ಕಾರ್ಯದರ್ಶಿ ರಾಮಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.