ADVERTISEMENT

ಟೆನಿಸ್: ಪ್ರಕಾಶ್‌ಗೆ ಸೋಲು

​ಪ್ರಜಾವಾಣಿ ವಾರ್ತೆ
Published 2 ಜನವರಿ 2013, 19:59 IST
Last Updated 2 ಜನವರಿ 2013, 19:59 IST
ಜಪಾನ್‌ನ ಗೋ ಸೊಯೇದಾ ವಿರುದ್ಧದ ಪಂದ್ಯದಲ್ಲಿ ಭಾರತದ ಪ್ರಕಾಶ್ ಅಮೃತ್‌ರಾಜ್ ಆಟದ ವೈಖರಿ -	ಪಿಟಿಐ ಚಿತ್ರ
ಜಪಾನ್‌ನ ಗೋ ಸೊಯೇದಾ ವಿರುದ್ಧದ ಪಂದ್ಯದಲ್ಲಿ ಭಾರತದ ಪ್ರಕಾಶ್ ಅಮೃತ್‌ರಾಜ್ ಆಟದ ವೈಖರಿ - ಪಿಟಿಐ ಚಿತ್ರ   

ಚೆನ್ನೈ (ಪಿಟಿಐ): ಪ್ರಕಾಶ್ ಅಮೃತ್‌ರಾಜ್ ಇಲ್ಲಿ ನಡೆಯುತ್ತಿರುವ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ನಲ್ಲಿ ಸೋಲು ಕಂಡಿದ್ದಾರೆ.

ನುಂಗುಬಾಕ್ಕಂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪ್ರಕಾಶ್ 6-7, 6-3, 4-6ರಲ್ಲಿ ಜಪಾನ್‌ನ ಗೋ ಸೊಯೇದಾ ಎದುರು ಪರಾಭವಗೊಂಡರು.

ಅರ್ಹತಾ ಸುತ್ತಿನಲ್ಲಿ ಆಡಿ ಪ್ರಧಾನ ಹಂತದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದ 515ನೇ ರ‌್ಯಾಂಕ್‌ನ ಆಟಗಾರ ಅಮೃತ್‌ರಾಜ್ ಮಂಗಳವಾರ 90ನೇ ರ‌್ಯಾಂಕ್‌ನ ಆಟಗಾರ ಫ್ರಾನ್ಸ್‌ನ ಗಿಲಾಮ್ ರುಫಿನ್‌ಗೆ ಆಘಾತ ನೀಡಿದ್ದರು.

ಆದರೆ ಎರಡನೇ ಸುತ್ತಿನ ಪಂದ್ಯದಲ್ಲಿ ಪ್ರಕಾಶ್ ಆಟ ನಡೆಯಲಿಲ್ಲ. ಈ ಪಂದ್ಯದಲ್ಲಿ ಗೆದ್ದ ಎಂಟನೇ ಶ್ರೇಯಾಂಕದ ಆಟಗಾರ ಸೊಯೇದಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಈ ಪಂದ್ಯ ಎರಡು ಗಂಟೆ 29 ನಿಮಿಷ ನಡೆಯಿತು. ಅಮೃತ್‌ರಾಜ್ ಎರಡನೇ ಸೆಟ್ ಗೆದ್ದು ತಿರುಗೇಟು ನೀಡಲು ಪ್ರಯತ್ನಿಸಿದರು. ಆದರೆ ಸೊಯೇದಾ ನಿರ್ಣಾಯಕ ಸೆಟ್ ಗೆದ್ದು ಮುನ್ನಡೆದರು.

ಮೊದಲ ಸೆಟ್‌ನಲ್ಲಿಯೇ ಗೆಲ್ಲಲು ಭಾರತದ ಆಟಗಾರನಿಗೆ ಹಲವು ಅವಕಾಶಗಳಿದ್ದವು. ಆದರೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ.

ಮತ್ತೊಂದು ಪಂದ್ಯದಲ್ಲಿ ಸೊವೇನಿಯಾದ ಐಜಾಜ್ ಬೆಡೆನೆ 7-5, 6-3ರಲ್ಲಿ ಹಾಲೆಂಡ್‌ನ ರಾಬಿನ್ ಹಾಸ್ ಅವರನ್ನು ಮಣಿಸಿದರು. ಇಸ್ರೇಲ್‌ನ ಡುದಿ ಸೆಲಾ 6-4, 6-1ರಲ್ಲಿ ಅಮೆರಿಕದ ರಾಜೀವ್ ರಾಮ್ ಎದುರು ಗೆದ್ದು ಎಂಟರ ಘಟ್ಟದಲ್ಲಿ ಆಡಲು ಅವಕಾಶ ಪಡೆದುಕೊಂಡರು. ಉಕ್ರೇನ್‌ನ ಸರ್ಜಿ ಸ್ಟಾಖೋವ್‌ಸ್ಕಿ 7-6, 7-6ರಲ್ಲಿ ಬೆಲ್ಜಿಯಂನ ರುಬೆನ್ ಬೆಮೆಲಮನ್ಸ್ ಎದುರು ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.