ADVERTISEMENT

ಟೆನಿಸ್: ಭಾರತದ ಸವಾಲು ಅಂತ್ಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ತಾಷ್ಕೆಂಟ್ (ಪಿಟಿಐ): ಯೂಕಿ ಭಾಂಬ್ರಿ, ವಿಷ್ಣುವರ್ಧನ್ ಮತ್ತು ಸನಮ್ ಸಿಂಗ್ ಅವರು ಇಲ್ಲಿ ನಡೆಯುತ್ತಿರುವ ತಾಷ್ಕೆಂಟ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆಬಿದ್ದಿದೆ.

ಯೂಕಿ ಅವರು ಇಲ್ಲಿ ನೇರವಾಗಿ ಪ್ರಧಾನ ಸುತ್ತಿನಲ್ಲಿ ಆಡಲು ಅರ್ಹತೆ ಪಡೆದಿದ್ದರೆ, ಸನಮ್ ಮತ್ತು ವಿಷ್ಣು ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದಿದ್ದರು. ಆದರೆ ಎರಡನೇ ಸುತ್ತು ಪ್ರವೇಶಿಲು ಮೂವರೂ ವಿಫಲರಾದರು.

ಯೂಕಿ 1-6, 3-6 ರಲ್ಲಿ ಸ್ಲೊವೇಕಿಯದ ಕರೊಲ್ ಬೆಕ್ ಎದುರು ಪರಾಭವಗೊಂಡರೆ, ವಿಷ್ಣು 3-6, 4-6 ರಲ್ಲಿ ರಷ್ಯಾದ ಇಗೋರ್ ಕುನಿಸ್ತಿನ್ ಕೈಯಲ್ಲಿ ಸೋಲು ಅನುಭವಿಸಿದರು. ಒಲೆಕ್ಸಾಂಡರ್ ನೆದೊವೆಸೋವ್ 6-0, 6-4 ರಲ್ಲಿ ಸನಮ್ ವಿರುದ್ಧ ಗೆಲುವು ಪಡೆದರು.

ಡಬಲ್ಸ್ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಏಕೈಕ ಜೋಡಿ ಯೂಕಿ ಮತ್ತು ದಿವಿಜ್ ಶರಣ್ ಮೊದಲ ಸುತ್ತಿನಲ್ಲೇ ಎಡವಿತು. ಜರ್ಮನಿಯ ಆಂಡ್ರೆ ಬೆಗೆಮನ್ ಮತ್ತು ಮಾರ್ಟಿನ್ ಎಮ್ರಿಚ್ 6-4, 6-4 ರಲ್ಲಿ ಭಾರತದ ಆಟಗಾರರನ್ನು ಮಣಿಸಿ ಎರಡನೇ ಸುತ್ತಿಗೆ ಮುನ್ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.