ADVERTISEMENT

ಟೆನಿಸ್: ಶ್ವೇತಾಗೆ ಸಿಂಗಲ್ಸ್‌ನಲ್ಲಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 17:15 IST
Last Updated 6 ಮಾರ್ಚ್ 2011, 17:15 IST

ಧಾರವಾಡ: ಸುಜಿತ್ ಸಚ್ಚಿದಾನಂದ ಮತ್ತು  ಜಿ.ಕೆ. ಶ್ವೇತಾ ಭಾನುವಾರ ಇಲ್ಲಿ  ಮುಕ್ತಾಯವಾದ ಧ್ರುವ ಗಾಂವ್ಕರ್ ಸ್ಮರಣಾರ್ಥ ‘ಧಾರವಾಡ ಓಪನ್-2011’ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಸುವಿಧಾ ಇವೆಂಟ್ ಮ್ಯಾನೇಜರ್ಸ್‌ ಆಶ್ರಯದಲ್ಲಿ ಧಾರವಾಡ ಜಿಲ್ಲಾ ಲಾನ್ ಟೆನಿಸ್ ಕೋರ್ಟ್‌ನಲ್ಲಿ ನಡೆದ ಪುರುಷರ ಫೈನಲ್‌ನಲ್ಲಿ ಸುಜೀತ್ ಸಚ್ಚಿದಾನಂದ 6-2, 6-2ರಿಂದ ಮೊಹ್ಮದ್ ಶಹಭಾಜ್ ವಿರುದ್ಧ ಜಯಿಸಿದರು.

ಸೆಮಿಫೈನಲ್‌ನಲ್ಲಿ ಸುಜಿತ್ 9-1 ರಿಂದ ರಾಹುಲ್ ಭಿಲ್ಲೆ ವಿರುದ್ಧ ಗೆಲುವು ಸಾಧಿಸಿದ್ದರು. ಇನ್ನೊಂದು  ರೋಚಕ ಸೆಮಿಫೈನಲ್‌ನಲ್ಲಿ  ಮೊಹ್ಮದ್ ಶಾಹಭಾಜ್  9-5ರಿಂದ ಪೀಟರ್ ವಿಜಯಕುಮಾರ ಅವರನ್ನು ಪರಾಭವಗೊಳಿಸಿದರು.
ಎಂಟರ ಘಟ್ಟದ ಪಂದ್ಯಗಳಲ್ಲಿ ರಾಹುಲ್ ಭಿಲ್ಲೆ 8-4ರಿಂದ ನಿಸಾರ್ ಜೇವೂರ್ ವಿರುದ್ಧ, ಸುಜೀತ್ 8-3ರಿಂದ ವಿಕಾಸ ಹನಸೋಗಿ ವಿರುದ್ಧ, ಮೊಹ್ಮದ್ ಶಾಹಬಾಜ್ 8-5ರಿಂದ ಹರ್ಷ ಮಂಜುನಾಥ ವಿರುದ್ಧ ಗೆದ್ದರು.

ಶ್ವೇತಾಗೆ ಪ್ರಶಸ್ತಿ: 19 ವರ್ಷದೊಳಗಿನವರ ವಿಭಾಗದಲ್ಲಿ ಅಂತರರಾಷ್ಟ್ರೀಯ  ಆಟಗಾರ್ತಿ ಜಿ.ಕೆ. ಶ್ವೇತಾ 6-0, 6-0ಯಿಂದ ಧಾರವಾಡದ ಪ್ರೇರಣಾ ಕಳವಾರ ಅವರನ್ನು ಹಣಿದರು. ಫೈನಲ್ ಪಂದ್ಯದಲ್ಲಿ ಉತ್ತಮ ಬ್ಯಾಕ್‌ಹ್ಯಾಂಡ್, ಫೋರ್‌ಹ್ಯಾಂಡ್ ಹೊಡೆತಗಳನ್ನು ಪ್ರದರ್ಶಿಶಿದ ಶ್ವೇತಾ,  ಪ್ರೇರಣಾ ಅವರಿಗೆ ಪಾಯಿಂಟ್ ಗಳಿಸಲು ಅವಕಾಶವನ್ನೇ ಕೊಡಲಿಲ್ಲ.

ಸುಜಿತ್‌ಗೆ ಡಬಲ್ಸ್  ಪ್ರಶಸ್ತಿ: ಪುರುಷರ ಸಿಂಗಲ್ಸ್  ಪ್ರಶಸ್ತಿ ಗೆದ್ದ ಸುಜೀತ್ ಸಚ್ಚಿದಾನಂದ ಅವರು ಹರ್ಷ ಮಂಜುನಾಥ ಅವರೊಂದಿಗೆ ಸೇರಿ ಡಬಲ್ಸ್  ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.  ಫೈನಲ್‌ನಲ್ಲಿ ಸುಜೀತ್ ಮತ್ತು ಹರ್ಷ ಜೋಡಿಯು 6-0, 6-0ಯಿಂದ ಪೀಟರ್ ವಿಜಯಕುಮಾರ ಮತ್ತು ಎಲ್. ಹರ್ಷ ಅವರನ್ನು ಮಣಿಸಿದರು.

ಸೆಮಿಫೈನಲ್‌ನಲ್ಲಿ ಸುಜೀತ್ ಮತ್ತು ಹರ್ಷ ಜೋಡಿಯು 9-0ಯಿಂದ ರಾಹುಲ್ ಭಿೆ ಮತ್ತು ವಿಕಾಶ ಅನಸೋಗಿ ವಿರುದ್ಧವೂ, ಪೀಟರ್ ಮತ್ತು ಹರ್ಷ ಜೋಡಿಯು 9-3ರಿಂದ ಎಡ್ವಿನ್ ಮೆಂಡೋನ್ಸಾ ಮತ್ತು ಅನಿಲ್ ಸಿಂಧಗಿ ವಿರುದ್ಧ ಜಯ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.