ADVERTISEMENT

`ಟೆಸ್ಟ್‌ಗೆ ಆದ್ಯತೆಯಿರಲಿ'

ರಣತುಂಗಾ ನಿಲುವಿಗೆ ಸಂಗಕ್ಕಾರ ಬೆಂಬಲ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2013, 19:40 IST
Last Updated 23 ಫೆಬ್ರುವರಿ 2013, 19:40 IST
ಶ್ರೀಲಂಕಾ ಪ್ರವಾಸೋದ್ಯಮವನ್ನು ಉತ್ತೇಜಿಸಲು ಉದ್ಯಾನನಗರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಬೆಂಗಳೂರಿನಲ್ಲಿ ನೆಲೆಸಿರುವ ಲಂಕಾ ಮೂಲದ ಅಶ್ವಿನಿ, ಕ್ರಿಕೆಟಿಗ ಕುಮಾರ ಸಂಗಕ್ಕಾರ ಅವರಿಗೆ ಅಭಿನಂದನೆ ಸಲ್ಲಿಸಿದ ಪರಿ 	-ಪ್ರಜಾವಾಣಿ ಚಿತ್ರ
ಶ್ರೀಲಂಕಾ ಪ್ರವಾಸೋದ್ಯಮವನ್ನು ಉತ್ತೇಜಿಸಲು ಉದ್ಯಾನನಗರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಬೆಂಗಳೂರಿನಲ್ಲಿ ನೆಲೆಸಿರುವ ಲಂಕಾ ಮೂಲದ ಅಶ್ವಿನಿ, ಕ್ರಿಕೆಟಿಗ ಕುಮಾರ ಸಂಗಕ್ಕಾರ ಅವರಿಗೆ ಅಭಿನಂದನೆ ಸಲ್ಲಿಸಿದ ಪರಿ -ಪ್ರಜಾವಾಣಿ ಚಿತ್ರ   

ಬೆಂಗಳೂರು: `ಪರಿಪೂರ್ಣ ಕ್ರಿಕೆಟಿಗರಾಗಬೇಕಾದರೆ ಯುವ ಆಟಗಾರರು ಟೆಸ್ಟ್ ಮಾದರಿಯ ಆಟಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ವೃತ್ತಿಪರ ಆಟಗಾರನಾಗಲು ಸಾಧ್ಯ' ಎಂದು ಶ್ರೀಲಂಕಾದ ಕ್ರಿಕೆಟಿಗ ಕುಮಾರ ಸಂಗಕ್ಕಾರ ಹೇಳಿದರು.

ಶ್ರೀಲಂಕಾ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉದ್ಯಾನನಗರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶನಿವಾರ ಅವರು ಇಲ್ಲಿಗೆ ಆಗಮಿಸಿದ್ದರು. ಲಂಕಾದ ಮಾಜಿ ನಾಯಕ ಅರ್ಜುನ್ ರಣತುಂಗಾ ಹಾಗೂ ಸನತ್ ಜಯಸೂರ್ಯ ಶುಕ್ರವಾರ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು.

`ಹಣದ ಹೊಳೆ ಹರಿಸುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮನರಂಜನೆಗೆ ಮಾತ್ರ ಸೀಮಿತ. ಇದರಿಂದ ವೃತ್ತಿಪರತೆ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಮೋಜು ಮಸ್ತಿಗೆ ಮಾತ್ರ ಚುಟುಕು ಆಟ' ಎಂದು ವಿಕೆಟ್ ಕೀಪರ್ ಸಂಗಕ್ಕಾರ ಹೇಳಿದರು. ಈ ಮೂಲಕ ಅವರು ರಣತುಂಗಾ ಹಾಗೂ ಜಯಸೂರ್ಯ ನಿಲುವಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

`ಜಯಸೂರ್ಯ ಅವರು ಹೇಳಿ ದಂತೆ ಯುವ ಕ್ರಿಕೆಟಿಗರು ಐಪಿಎಲ್‌ನತ್ತ ಮುಖ ಮಾಡುವುದನ್ನು ನಮ್ಮ ದೇಶದ ಕ್ರಿಕೆಟ್ ಪ್ರಿಯರು ಒಪ್ಪುವುದಿಲ್ಲ. ಯುವ ಆಟಗಾರರಲ್ಲಿ ನಾಯಕತ್ವ ಗುಣ ಮೈಗೂಡಿಸುವ ಸಲುವಾಗಿ ಲಂಕಾ ತಂಡದ ಯುವಕರಿಗೆ ಮಹತ್ವದ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ' ಎಂದರು.

ಖುಷಿ ನೀಡುವ ಆತಿಥ್ಯ: ಭಾರತಕ್ಕೆ ಅನೇಕ ಸಲ ಬಂದಿದ್ದೇನೆ. ವಿವಿಧ ರಾಜ್ಯಗಳಿಗೂ ತೆರಳಿದ್ದೇನೆ. ಇಲ್ಲಿನ ಜನ ನೀಡುವ ಆತಿಥ್ಯದಿಂದ ತುಂಬಾ ಖುಷಿಯಾಗುತ್ತದೆ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.