ADVERTISEMENT

ಡಿ.9ರಿಂದ ಎಐಟಿಎ ರಾಷ್ಟ್ರೀಯ ಟೆನಿಸ್‌

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ಬೆಂಗಳೂರು: ಕರ್ನಾಟಕ ರಾಜ್ಯ ಲಾನ್ ಟೆನಿಸ್‌ ಸಂಸ್ಥೆ (ಕೆಎಸ್‌ಎಲ್‌ಟಿಎ) ಹಾಗೂ ಆರ್‌.ಟಿ ನಾರಾಯಣ್ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಬೆಂಗಳೂರಿನಲ್ಲಿ  ಡಿಸೆಂಬರ್ 9 ರಿಂದ 15 ರವರೆಗೆ ‘ಆರ್‌.ಟಿ ನಾರಾಯಣ್ ಸ್ಮರಣಾರ್ಥ’ ಎಐಟಿಎ ರಾಷ್ಟ್ರೀಯ ಟೆನಿಸ್ ಟೂರ್ನಿ ನಡೆಯಲಿದೆ.

ಇದೇ ಮೊದಲ ಬಾರಿಗೆ ನಡೆಯುತ್ತಿ ರುವ 16 ವರ್ಷದೊಳಗಿನವರ  ಈ ಟೂರ್ನಿಯ ಟ್ರೋಫಿಯನ್ನು ನಟಿ ಹಾಗೂ ಸಂಸದೆ ರಮ್ಯಾ ಬುಧವಾರ ಇಲ್ಲಿ ನಡೆದ ಸಮಾರಂಭದಲ್ಲಿ ಅನಾವರಣ ಗೊಳಿಸಿದರು.

ಸಮಾರಂಭದಲ್ಲಿ   ಮಾತನಾಡಿದ ರಮ್ಯಾ, ‘ನನ್ನ ಸಾಕು ತಂದೆ ಆರ್.ಟಿ ನಾರಾಯಣ್ ಅವರು ಉತ್ತಮ ಟೆನಿಸ್ ಆಟಗಾರರಾಗಿದ್ದು, ಟೆನಿಸ್‌ ಆಟದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು. ಅವರ  ಹೆಸರಿನಲ್ಲಿ ಈ ಟೂರ್ನಿ ಪ್ರಾಯೋಜಿಸುವ ಮೂಲಕ ಅವರನ್ನು ಸ್ಮರಿಸುತ್ತಿದ್ದೇವೆ’ ಎಂದರು.

ಬಾಲಕರ ವಿಭಾಗದಲ್ಲಿ 128 ಮತ್ತು ಬಾಲಕಿಯರ ವಿಭಾಗದಲ್ಲಿ 70 ಮಂದಿ ಸೇರಿದಂತೆ ಒಟ್ಟು 198 ಸ್ಪರ್ಧಿಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಷ್ಟ್ರೀಯ ಚಾಂಪಿಯನ್ ಹಾಗೂ ಅಗ್ರ ರ್‍ಯಾಂಕಿಂಗ್ನ ಆಟಗಾರ ಬಿ.ಆರ್ ನಿಕ್ಷೇಪ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಬಾಲಕರ ವಿಭಾಗದ ಪಂದ್ಯಗಳು ಕೆಎಸ್‌ಎಲ್‌ಟಿಎ ಅಂಗಳದಲ್ಲಿ ನಡೆದರೆ, ಬಾಲಕಿಯರ ವಿಭಾಗದ ಪ್ರಾಥಮಿಕ ಸುತ್ತಿನ ಪಂದ್ಯಗಳು ಮಹಿಳಾ ಸೇವಾ ಸಮಾಜ ಅಂಗಳದಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.