ADVERTISEMENT

`ತಂಡದಲ್ಲಿ ಯಾವುದೇ ಒಡಕಿಲ್ಲ'

`ಗಂಭೀರ್ ವಿರುದ್ಧ ದೋನಿ ದೂರು ನೀಡಿಲ್ಲ'

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ನಾಗಪುರ: ಭಾರತ ಕ್ರಿಕೆಟ್ ತಂಡದ ಕೆಲ ಆಟಗಾರರ ನಡುವೆ ಒಡಕಿದೆ ಎಂಬ ದೂರು ಇವತ್ತಿನದ್ದಲ್ಲ. ತಂಡ ಸೋತಾಗಲ್ಲ್ಲೆಲಾ ಇಂತಹ ವಿವಾದಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಈಗಲೂ ಅಂತಹ ಒಂದು ವಿವಾದ ಹೊಗೆಯಾಡುತ್ತಿದೆ.

ಅದೆಂದರೆ ಗಂಭೀರ್ ವರ್ತನೆ ಬಗ್ಗೆ ನಾಯಕ ದೋನಿ ಬಿಸಿಸಿಐಗೆ ದೂರು ನೀಡಿದ್ದಾರೆ ಎಂದು ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಆದರೆ ಈ ಆರೋಪವನ್ನು ಭಾರತ ತಂಡದ ಆಡಳಿತ ತಳ್ಳಿ ಹಾಕಿದೆ.

`ತಂಡವೀಗ ಕಷ್ಟದ ಪರಿಸ್ಥಿತಿಯಲ್ಲಿದೆ. ವದಂತಿ ಹಬ್ಬಿಸಲು ಇದು ಸೂಕ್ತ ಸಮಯ ಎಂದು ಕೆಲವರು ಭಾವಿಸಿರಬಹುದು. ಆದರೆ ತಂಡದಲ್ಲಿ ಯಾವುದೇ ಒಡಕಿಲ್ಲ. ಗುರುವಾರ ಪಂದ್ಯ ಆರಂಭವಾಗುತ್ತಿರುವ ಈ ಸಮಯದಲ್ಲಿ ಸಹ ಆಟಗಾರನ ಬಗ್ಗೆ ದೋನಿ ಪತ್ರ ಬರೆದ್ದ್ದಿದಾರೆ ಎಂದು ವರದಿಯಾಗಿರುವುದು ಹಾಸ್ಯಾಸ್ಪದ ವಿಷಯ. ಇಂತಹ ಸಂದರ್ಭದಲ್ಲಿ ದೋನಿ ಹೀಗೆ ಮಾಡುತ್ತಾರೆಯೇ?' ಎಂದು ತಂಡದ ಸಹಾಯಕ ಸಿಬ್ಬಂದಿಯೊಬ್ಬರು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.

`ಇತ್ತೀಚಿನ ದಿನಗಳಲ್ಲಿ ಗಂಭೀರ್ ಅವರಿಂದ ದೋನಿ ಹೆಚ್ಚಿನ ಸಲಹೆ ಪಡೆಯುತ್ತಿದ್ದಾರೆ. ಮುಂಬೈ ಪಂದ್ಯದ ವೇಳೆ ದೋನಿ ಪತ್ನಿ ಹಾಗೂ ಗಂಭೀರ್ ಪತ್ನಿ ಒಟ್ಟಿಗೆ ಭೋಜನಕ್ಕೆ ತೆರಳುತ್ತಿದ್ದರು' ಎಂದು ಆ ಸಿಬ್ಬಂದಿ ಹೇಳಿದ್ದಾರೆ.

`ದೋನಿ ಹಾಗೂ ಸೆಹ್ವಾಗ್ ನಡುವೆ ಕೂಡ ಮನಸ್ತಾಪವಿದೆ ಎಂದು ವರದಿಯಾಗುತ್ತಿರುತ್ತದೆ. ಆದರೆ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾಗ ಇಂತಹ ಊಹಾಪೋಹಗಳು ತಣ್ಣಗಾಗುತ್ತವೆ' ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಬುಧವಾರ ಅಭ್ಯಾಸದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೂಡ ಗಂಭೀರ್ ಬಗ್ಗೆ ದೋನಿ ಪ್ರಶಂಸೆ ವ್ಯಕ್ತಪಡಿಸಿದರು. `ಗಂಭೀರ್ ಒಬ್ಬ ಆಕ್ರಮಣಕಾರಿ ಆಟಗಾರ. ಕಳೆದ ಎರಡು ಪಂದ್ಯಗಳಲ್ಲಿ ಚೆನ್ನಾಗಿಯೇ ಆಡಿದ್ದಾರೆ. ಆದರೆ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ ಅಷ್ಟೆ' ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.