ಬೆಂಗಳೂರು: ಕರ್ನಾಟಕ ನೀಡಿದ್ದ ಅಲ್ಪ ಮೊತ್ತದ ಗುರಿಯನ್ನು ಸುಲಭವಾಗಿ ಮುಟ್ಟಿದ ತಮಿಳುನಾಡು ತಂಡ ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು. ಜೊತೆಗೆ ಈ ಋತುವಿನ ದೇಶಿಯ ಟೂರ್ನಿಯಲ್ಲಿ ಆತಿಥೇಯರ ಗೆಲುವಿನ ಓಟಕ್ಕೆ ಕಡಿವಾಣ ಹಾಕಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ತಮಿಳುನಾಡು ಫೀಲ್ಡಿಂಗ್ ಆರಿಸಿಕೊಂಡಿತು. ನಾಯಕ ಎಸ್. ಬದರೀನಾಥ್ ಅವರ ನಿರ್ಧಾರವನ್ನು ಸಮರ್ಥಿಸುವಂತೆ ಬೌಲ್ ಮಾಡಿದ ತಮಿಳುನಾಡು ವಿನಯ್ ಬಳಗವನ್ನು 168 ರನ್ಗೆ ಕಟ್ಟಿ ಹಾಕಿತು.
ಮೊದಲ ಓವರ್ನ ಮೊದಲ ಎಸೆತದಲ್ಲಿಯೇ ಅನುಭವಿ ಮುರಳಿ ವಿಜಯ್ ವಿಕೆಟ್ ಕಳೆದುಕೊಂಡರೂ ಒತ್ತಡಕ್ಕೆ ಒಳಗಾಗದ ತಮಿಳುನಾಡು 38.9 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಗೆಲುವಿನ ಓಟಕ್ಕೆ ತಡೆ: ಈ ಸಲದ ರಣಜಿ, ಇರಾನಿ ಮತ್ತು ಸುಬ್ಬಯ್ಯ ಪಿಳ್ಳೈ ಟ್ರೋಫಿಯ ಹಿಂದಿನ ನಾಲ್ಕು ಪಂದ್ಯಗಳು ಸೇರಿದಂತೆ ಕರ್ನಾಟಕ ಒಟ್ಟು 15 ಪಂದ್ಯಗಳಲ್ಲಿ ಒಮ್ಮೆಯೂ ನಿರಾಸೆ ಕಂಡಿರಲಿಲ್ಲ. ದಕ್ಷಿಣದ ರಾಜ್ಯಗಳಲ್ಲಿ ಪ್ರಬಲ ತಂಡವೆನಿಸಿರುವ ತಮಿಳುನಾಡು ಆತಿಥೇಯರಿಗೆ ಸೋಲಿನ ರುಚಿ ತೋರಿಸಿತು.
ರಣಜಿಯಲ್ಲಿ ಆಡಿದ ಒಟ್ಟು 11 ಪಂದ್ಯಗಳಲ್ಲಿ ಕರ್ನಾಟಕ 7ರಲ್ಲಿ ಗೆಲುವು ಸಾಧಿಸಿತ್ತು. ಜಾರ್ಖಂಡ್್, ಗುಜರಾತ್, ವಿದರ್ಭ ಮತ್ತು ಪಂಜಾಬ್ (ಸೆಮಿಫೈನಲ್) ಎದುರಿನ ಪಂದ್ಯಗಳು ಡ್ರಾ ಆಗಿದ್ದವು. ಇರಾನಿ ಕಪ್ನಲ್ಲೂ ಪ್ರಶಸ್ತಿ ಗೆದ್ದಿತ್ತು. ಸುಬ್ಬಯ್ಯ ಪಿಳ್ಳೈ ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಆಂಧ್ರ, ಕೇರಳ ಮತ್ತು ಗೋವಾ ವಿರುದ್ಧ ಗೆಲುವು ಪಡೆದಿತ್ತು. ಹೈದರಾಬಾದ್ ಎದುರಿನ ಪಂದ್ಯ ‘ಟೈ’ ಆಗಿತ್ತು.
ವಿಜಯ್ ಹಜಾರೆಗೆ ಅರ್ಹತೆ: ಆತಿಥೇಯರು ಕೊನೆಯ ಲೀಗ್ ಪಂದ್ಯದಲ್ಲಿ ಸೋಲು ಕಂಡರೂ ವಿಜಯ್ ಹಜಾರೆ ಟ್ರೋಫಿಗೆ ಅರ್ಹತೆ ಪಡೆದುಕೊಂಡರು. ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳಿಗೆ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಲು ಅರ್ಹತೆ ಲಭಿಸುತ್ತದೆ. ದಕ್ಷಿಣ ವಲಯದಿಂದ ತಮಿಳುನಾಡು (18 ಪಾಯಿಂಟ್ಸ್) ಮತ್ತು ಕರ್ನಾಟಕ (14 ಪಾಯಿಂಟ್ಸ್) ಕ್ರಮವಾಗಿ ಮೊದಲ ಎರಡು ಸ್ಥಾನ ಗಳಿಸಿದವು.
ಗೌತಮ್ಗೆ ಗಾಯ: ವಿಕೆಟ್ ಕೀಪರ್ ಸಿ.ಎಂ. ಗೌತಮ್ (ಗಾಯಗೊಂಡು ನಿವೃತ್ತಿ 17) ರನ್ ಗಳಿಸಲು ಓಡುವ ವೇಳೆ ಬಿದ್ದು ಗಾಯಗೊಂಡಿದ್ದಾರೆ.
ಬಲವಾಗಿ ಪೆಟ್ಟು ಬಿದ್ದ ಕಾರಣ ಅವರಿಗೆ ನಂತರ ಬ್ಯಾಟ್ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಫೀಲ್ಡಿಂಗ್ ಮಾಡಲು ಬರಲಿಲ್ಲ. ಆರಂಭದಲ್ಲಿ ರಾಬಿನ್ ಉತ್ತಪ್ಪ ಮತ್ತು ಕೊನೆಯಲ್ಲಿ ಕೆ.ಎಲ್. ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಿದರು.
ತಪ್ಪಿದ ಮತ್ತೊಂದು ಪ್ರಶಸ್ತಿ: ಮೂರು ವರ್ಷಗಳಿಂದ ಸತತ ಚಾಂಪಿಯನ್ ಆಗಿದ್ದ ಕರ್ನಾಟಕ ತಂಡ ಈ ಸಲ ಪ್ರಶಸ್ತಿಯ ಹೊಸ್ತಿಲಲ್ಲಿ ಎಡವಿತು. ಹೋದ ವರ್ಷ ಗೋವಾದಲ್ಲಿ ನಡೆದ ಟೂರ್ನಿಯಲ್ಲಿ ಕರ್ನಾಟಕ ಆಡಿದ ಐದೂ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿತ್ತು.
9ನೇ ಗೆಲುವು: ಸುಬ್ಬಯ್ಯ ಪಿಳ್ಳೈ ಟೂರ್ನಿಯಲ್ಲಿ ತಮಿಳುನಾಡು ಗೆದ್ದ 9ನೇ ಪ್ರಶಸ್ತಿ ಇದಾಗಿದೆ. ಕರ್ನಾಟಕ ಒಟ್ಟು 11 ಸಲ ಮತ್ತು ಹೈದರಾಬಾದ್ ಒಂದು ಬಾರಿ ಈ ಹಿಂದೆ ಚಾಂಪಿಯನ್ ಆಗಿತ್ತು.
ಸಂಕ್ಷಿಪ್ತ ಸ್ಕೋರು:
ಕರ್ನಾಟಕ: 40.3 ಓವರ್ಗಳಲ್ಲಿ 168. (ರಾಬಿನ್ ಉತ್ತಪ್ಪ 33, ಮಯಂಕ್ ಅಗರವಾಲ್ 16, ಕೆ.ಎಲ್. ರಾಹುಲ್ 11, ಮನೀಷ್ ಪಾಂಡೆ 7, ಅಮಿತ್ ವರ್ಮ 7, ಸಿ.ಎಂ. ಗೌತಮ್ (ಗಾಯಗೊಂಡು ನಿವೃತ್ತಿ) 17, ವಿನಯ್ ಕುಮಾರ್ 14, ಅಬ್ರಾರ್ ಖಾಜಿ 14, ಅಭಿಮನ್ಯು ಮಿಥುನ್ 20; ಲಕ್ಷ್ಮಿಪತಿ ಬಾಲಾಜಿ 39ಕ್ಕೆ3, ರಾಹಿಲ್ ಷಾ 28ಕ್ಕೆ3, ಬಾಬಾ ಅಪರಾಜಿತ್ 16ಕ್ಕೆ1).
ತಮಿಳುನಾಡು: 38.5 ಓವರ್ಗಳಲ್ಲಿ 3 ವಿಕೆಟ್ಗೆ 169. (ಸುಶೀಲ್ ಉಮಾಶಂಕರ್ 73, ಬಾಬಾ ಅಪರಾಜಿತ್ 6, ಎಸ್. ಬದರೀನಾಥ್ ಔಟಾಗದೆ 81, ಅನಿರುದ್ಧ್ ಶ್ರೀಕಾಂತ್ ಔಟಾಗದೆ 3; ವಿನಯ್ ಕುಮಾರ್ 20ಕ್ಕೆ2, ಅಬ್ರಾರ್ ಖಾಜಿ 27ಕ್ಕೆ1). ಫಲಿತಾಂಶ: ತಮಿಳುನಾಡಿಗೆ 7 ವಿಕೆಟ್ ಜಯ ಹಾಗೂ ನಾಲ್ಕು ಪಾಯಿಂಟ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.