ಕರಾಚಿ (ಪಿಟಿಐ): ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವನ್ನು ಎದುರಿಸಲು ಸಜ್ಜಾಗುತ್ತಿರುವ ಪಾಕಿಸ್ತಾನ ತಂಡದಲ್ಲಿ ಒಡಕು ಉಂಟಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ನಾಯಕ ಮೊಹಮ್ಮದ್ ಹಫೀಜ್ ಹಾಗೂ ತಂಡದ ಆಡಳಿತ ಮಂಡಳಿ ನಡುವೆ ವಿವಿಧ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂದು ವರದಿಯಾಗಿದೆ.
ಮುಖ್ಯ ಕೋಚ್ ಮೊಯಿನ್ ಖಾನ್, ಕ್ರಿಕೆಟ್ ಸಲಹೆಗಾರ ಜಹೀರ್ ಅಬ್ಬಾಸ್ ಮತ್ತು ಮ್ಯಾನೇಜರ್ ಜಾಕಿರ್ ಖಾನ್ ಅವರನ್ನೊಳಗೊಂಡ ಪಾಕ್ ತಂಡದ ಆಡಳಿತ ಮಂಡಳಿಯ ಮಾತುಗಳನ್ನು ಹಫೀಜ್ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಮೂಲವೊಂದು ಹೇಳಿದೆ.
ತಂಡದ ಆಯ್ಕೆಯ ವಿಷಯದಲ್ಲಿ ಹಫೀಜ್ ಅವರು ಆಡಳಿತ ಮಂಡಳಿಯ ಸಲಹೆಗಳನ್ನು ಕಡೆಗಣಿಸುತ್ತಿದ್ದಾರೆ. ‘ವಿಶ್ವಕಪ್ನಂತೆ ಪ್ರಮುಖ ಟೂರ್ನಿಯ ವೇಳೆ ಪಾಕ್ ತಂಡದ ಕುರಿತು ಈ ರೀತಿಯ ವರದಿಗಳು ಕೇಳಿಬರುತ್ತಿರುವುದು ಒಳ್ಳೆಯದಲ್ಲ. ಈ ವರದಿ ಸುಳ್ಳು ಎಂಬುದು ನನ್ನ ವಿಶ್ವಾಸ. ತಂಡದಲ್ಲಿ ಏನಾದರೂ ಭಿನ್ನಾಭಿಪ್ರಾಯ ಇದ್ದರೆ, ಪಾಕ್ ಕ್ರಿಕೆಟ್ ಮಂಡಳಿ ಮಧ್ಯಪ್ರವೇಶಿಸಬೇಕು. ಹಾಗಾದಲ್ಲಿ ಆಟಗಾರರಿಗೆ ಟೂರ್ನಿಯ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ’ ಎಂದು ಪಿಸಿಬಿ ಆಯ್ಕೆ ಸಮಿತಿ ಮುಖ್ಯಸ್ಥ ಮೊಹ್ಸಿನ್ ಖಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.