ನವದೆಹಲಿ (ಪಿಟಿಐ/ಐಎಎನ್ಎಸ್): ದೇಶದ ಅಗ್ರ ಕ್ರಮಾಂಕದ ಆಟಗಾರ ಲಿಯಾಂಡರ್ ಪೇಸ್ ಅವರು ಲಂಡನ್ ಒಲಿಂಪಿಕ್ಸ್ನಲ್ಲಿ ಆಡಲು ಇನ್ನೂ ಸಮ್ಮತಿ ಸೂಚಿಸದೇ ಇರುವುದು ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ಚಿಂತೆಗೆ ಕಾರಣವಾಗಿದೆ.
ಅಷ್ಟು ಮಾತ್ರವಲ್ಲದೇ, `ನೂತನ ಜೊತೆಗಾರನೊಂದಿಗೆ ಆಡಲು ಲಿಯಾಂಡರ್ ಒಪ್ಪುವುದು ಅನುಮಾನ~ ಎಂದು ಅವರ ತಂದೆ ಡಾ.ವೇಸ್ ಪೇಸ್ ಕೂಡ ಹೇಳಿದ್ದಾರೆ. ಹಾಗಾಗಿ ಪೇಸ್ ಮನವೊಲಿಸಲು ಎಐಟಿಎ ಆಯ್ಕೆ ಸಮಿತಿ ಮುಂದಾಗಿದೆ.
ಎಐಟಿಎ ಕೈಗೊಂಡಿರುವ ಪರಿಷ್ಕೃತ ಆಯ್ಕೆ ಬಗ್ಗೆ ಪೇಸ್ ಇದುವರೆಗೆ ಪ್ರತಿಕ್ರಿಯಿಸಿಲ್ಲ. ಈ ಕಾರಣ ಆಯ್ಕೆ ಸಮಿತಿ ಸದಸ್ಯ ರೋಹಿತ್ ರಾಜ್ಪಾಲ್ ಅವರು ಲಂಡನ್ನಲ್ಲಿ ಪೇಸ್ ಅವರ ಮನವೊಲಿಸಲು ಪ್ರಯತ್ನಿಸಲಿದ್ದಾರೆ.
ಆದರೆ `ತಂಡದ ಆಯ್ಕೆ ಬಗ್ಗೆ ಪೇಸ್ ಅಸಮಾಧಾನಗೊಂಡಿದ್ದಾರೆ.
ಹಾಗಾಗಿ ಇದಕ್ಕೆ ಅವರು ಒಪ್ಪುವ ಸಾಧ್ಯತೆ ಕಡಿಮೆ~ ಎಂದು ವೇಸ್ ಪೇಸ್ ತಿಳಿಸಿದ್ದಾರೆ. ಜೊತೆಗೂಡಿ ಆಡಲು ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಒಪ್ಪದ ಕಾರಣ ಪೇಸ್ ಹಾಗೂ ಯುವಆಟಗಾರ ವಿಷ್ಣುವರ್ಧನ್ ಅವರನ್ನು ಕಣಕ್ಕಿಳಿಸಲು ಎಐಟಿಎ ಗುರುವಾರ ನಿರ್ಧಾರ ತೆಗೆದುಕೊಂಡಿತ್ತು. ಅಷ್ಟು ಮಾತ್ರವಲ್ಲದೇ, ಮಿಶ್ರ ಡಬಲ್ಸ್ನಲ್ಲಿ ಸಾನಿಯಾ ಮಿರ್ಜಾ-ಪೇಸ್ ಅವರನ್ನು ಆಡಿಸಲು ತೀರ್ಮಾನಿಸಿತ್ತು.
ಆದರೆ ಸಾನಿಯಾ ತಮ್ಮ ಜೊತೆ ಆಡುತ್ತಾರೆ ಎಂಬುದಕ್ಕೆ ಲಿಖಿತ ಭರವಸೆಯನ್ನು ಸಂಸ್ಥೆಯಿಂದ ಪೇಸ್ ಕೋರಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅವರು ಕೂಟದಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಟೆನಿಸ್ ಸಂಸ್ಥೆ ಈಗ ಪ್ರಯತ್ನಿಸುತ್ತಿದೆ.
`ಪ್ರಸಕ್ತ ಖಾಸಗಿ ಭೇಟಿಯ ಮೇರೆಗೆ ಲಂಡನ್ನಲ್ಲಿರುವ ಎಐಟಿಎ ಆಯ್ಕೆ ಸಮಿತಿಯ ಹಿರಿಯ ಸದಸ್ಯ ರೋಹಿತ್ ರಾಜ್ಪಾಲ್, ಪೇಸ್ ಮನವೊಲಿಸಲು ಪ್ರಯತ್ನಿಸಲಿದ್ದಾರೆ~ ಎಂದು ಎಐಟಿಎ ಮೂಲಗಳು ಹೇಳಿವೆ.
ವೈಯಕ್ತಿಕ ಅಹಂ ಬದಿಗಿಡಿ: ಕೃಷ್ಣ
ಬೆಂಗಳೂರು: `ನಿಮ್ಮ ವೈಯಕ್ತಿಕ ಅಹಂ ಬದಿಗಿಟ್ಟು ಲಂಡನ್ ಒಲಿಂಪಿಕ್ಸ್ನಲ್ಲಿ ದೇಶಕ್ಕೆ ಗೌರವ ತರಲು ಪ್ರಯತ್ನಿಸಿ~ ಎಂದು ಎಐಟಿಎ ಗೌರವ ಅಧ್ಯಕ್ಷರೂ ಆಗಿರುವ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಟೆನಿಸ್ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.