ADVERTISEMENT

`ಪ್ರಬೀರ್ ಬಗ್ಗೆ ಗೌರವವಿದೆ'

ಪಿಚ್ ಪರಿಶೀಲಿಸಲು ಬಿಸಿಸಿಐ ನನ್ನನ್ನು ಇಲ್ಲಿಗೆ ಕಳುಹಿಸಿದೆ: ಭೌಮಿಕ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಪಿಚ್‌ಗೆ ಖುಷಿಯಿಂದಲೇ ಅಂತಿಮ ಸ್ಪರ್ಶ ನೀಡುತ್ತಿದ್ದ ಕ್ಯೂರೇಟರ್ ಪ್ರಬೀರ್ ಮುಖರ್ಜಿ (ಬಲಬದಿ) ಅವರು ಪಿಚ್ ಪರಿಶೀಲನೆ ನಡೆಸಲು ಬಂದಿರುವ ಆಶಿಶ್ ಭೌಮಿಕ್ ಜೊತೆ ಪೋಸ್ ನೀಡಿದರು
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಪಿಚ್‌ಗೆ ಖುಷಿಯಿಂದಲೇ ಅಂತಿಮ ಸ್ಪರ್ಶ ನೀಡುತ್ತಿದ್ದ ಕ್ಯೂರೇಟರ್ ಪ್ರಬೀರ್ ಮುಖರ್ಜಿ (ಬಲಬದಿ) ಅವರು ಪಿಚ್ ಪರಿಶೀಲನೆ ನಡೆಸಲು ಬಂದಿರುವ ಆಶಿಶ್ ಭೌಮಿಕ್ ಜೊತೆ ಪೋಸ್ ನೀಡಿದರು   

ಕೋಲ್ಕತ್ತ: `ಪ್ರಬೀರ್ ಮುಖರ್ಜಿ ಹಿರಿಯ ಕ್ಯೂರೇಟರ್. ನನಗಿಂತ ಹೆಚ್ಚು ಅನುಭವ ಅವರಿಗಿದೆ. ಅವರ ಬಗ್ಗೆ ನನಗೆ ಗೌರವವಿದೆ. ಆದರೆ ಬಿಸಿಸಿಐ ಸೂಚನೆ ಮೇರೆಗೆ ಪಿಚ್ ಪರಿಶೀಲನೆ ನಡೆಸಲು ನಾನಿಲ್ಲಿಗೆ ಬಂದಿದ್ದೇನೆ. ಪ್ರಬೀರ್ ಜೊತೆ ಸೇರಿ ಉತ್ತಮ ಪಿಚ್ ತಯಾರಿಸುವುದು ನನ್ನ ಉ್ದ್ದದೇಶ'

-ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ಸಂಬಂಧ ಎದ್ದಿರುವ ವಿವಾದದ ಬಗ್ಗೆ ಪೂರ್ವ ವಲಯದ ಪಿಚ್ ಕ್ಯೂರೇಟರ್ ಆಶಿಶ್ ಭೌಮಿಕ್ `ಪ್ರಜಾವಾಣಿ'ಗೆ ಈ ರೀತಿ ಪ್ರತಿಕ್ರಿಯೆ ನೀಡ್ದ್ದಿದಾರೆ.

ಭಾರತ ತಂಡ ಮುಂಬೈ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಸೋತಾಗಿನಿಂದ ವಿವಾದದ ಕೇಂದ್ರ ಬಿಂದುವಾಗಿರುವುದು ಪಿಚ್. `ಮೊದಲ ದಿನದಿಂದಲೇ ತಿರುವು ನೀಡುವ ಪಿಚ್ ಬೇಕು' ಎಂಬ ದೋನಿ ಹೇಳಿಕೆಯನ್ನು 83 ವರ್ಷ ವಯಸ್ಸಿನ ಪ್ರಬೀರ್ ಟೀಕಿಸಿದ್ದು ಇದಕ್ಕೆ ಕಾರಣ. ಹಾಗಾಗಿ ಬಿಸಿಸಿಐ ಪಿಚ್ ಸಮಿತಿ ಸದಸ್ಯರೂ ಆಗಿರುವ ತ್ರಿಪುರದ ಕ್ಯೂರೇಟರ್ ಭೌಮಿಕ್ ಅವರಿಗೆ ಕೋಲ್ಕತ್ತಕ್ಕೆ ಬರುವಂತೆ ಸೂಚಿಸಲಾಗಿತ್ತು. ಇದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

ADVERTISEMENT

ಈ ವಿವಾದದ ಸಂಬಂಧ ಭೌಮಿಕ್ ಸೋಮವಾರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೆಲ ವಿಷಯಗಳನ್ನು ಹಂಚಿಕೊಂಡರು.

*ಹಿರಿಯ ಕ್ಯೂರೇಟರ್ ಇ್ದ್ದದರೂ ನೀವು ಇಲ್ಲಿಗೆ ಬಂದ ಉದ್ದೇಶ?
ನಾನು ಪೂರ್ವ ವಲಯ ಪಿಚ್ ಕ್ಯೂರೇಟರ್. ಈ ವಲಯದಲ್ಲಿ ಎಲ್ಲಿಯೇ ಪಂದ್ಯ ನಡೆದರೂ ನಾನು ಹೋಗುತ್ತೇನೆ. ಈ ಪಂದ್ಯಕ್ಕೆ ಸಿದ್ಧಪಡಿಸಲಾಗುತ್ತಿರುವ ಪಿಚ್ ಪರಿಶೀಲಿಸಲು ನನ್ನನ್ನು ಬಿಸಿಸಿಐ ನಿಯೋಜಿಸಿದೆ ಅಷ್ಟೆ. ನಾನೇನು ಹೊಸದಾಗಿ ಪಿಚ್ ರೂಪಿಸಲು ಇಲ್ಲಿಗೆ ಬಂದಿಲ್ಲ. ಒಂದೂವರೆ ತಿಂಗಳಿನಿಂದ ಮನೆಗೆ ಹೋಗಲು ನನಗೆ ಸಾಧ್ಯವಾಗಿಲ್ಲ. ರಣಜಿ ಟೂರ್ನಿಯ ಪಂದ್ಯಗಳಿಗೆ ರೂಪಿಸಲಾಗಿರುವ ಪಿಚ್‌ಗಳನ್ನು ಕೂಡ ನಾನು ಪರಿಶೀಲಿಸುತ್ತಿದ್ದೇನೆ. ಗುವಾಹಟಿ, ಜೆಮ್‌ಶೆಡ್‌ಪುರ, ರಾಂಚಿ... ಹೀಗೆ ವಲಯದ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ.

*ಪ್ರಬೀರ್ ಮುಖರ್ಜಿ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾಯಕ ದೋನಿ ಅವರ ಅಗತ್ಯಕ್ಕೆ ತಕ್ಕಂತೆ ಪಿಚ್ ರೂಪಿಸಲು ಸಾಧ್ಯವಿಲ್ಲ ಎಂದು ಪ್ರಬೀರ್ ಹೇಳಿದ್ದಕ್ಕೆ ಈ ವಿವಾದ ಹುಟ್ಟಿಕೊಂಡಿದೆ. ಪ್ರಬೀರ್ ನೀಡಿರುವ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ. ಏಕೆಂದರೆ ಅವರು ನನಗಿಂತ ಹೆಚ್ಚಿನ ಅನುಭವ ಹೊಂದಿದ್ದಾರೆ. ನಾವಿಬ್ಬರು ಒಟ್ಟಿಗೆ ಸೇರಿ ಈಗ ಕೆಲಸ ಮಾಡುತ್ತಿದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಭಾರತದ ಕ್ರಿಕೆಟ್‌ನಲ್ಲಿ ಪಿಚ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಷ್ಟೊಂದು ದೊಡ್ಡ ವಿವಾದವನ್ನು ನಾನು ಈ ಹಿಂದೆ ಕೇಳಿರಲಿಲ್ಲ.

*ಈ ಪಂದ್ಯಕ್ಕೆ ಪಿಚ್ ಯಾವ ರೀತಿ ಇದೆ?
ಈ ಪಿಚ್ ಸ್ಪಿನ್ನರ್ ಹಾಗೂ ವೇಗಿಗಳಿಗೆ ಸಮನಾದ ನೆರವು ನೀಡಲಿದೆ. ಪಶ್ಚಿಮ ಬಂಗಾಳ ಹಾಗೂ ಗುಜರಾತ್ ನಡುವೆ ನವೆಂಬರ್‌ನಲ್ಲಿ ನಡೆದ ರಣಜಿ ಕ್ರಿಕೆಟ್ ಪಂದ್ಯದ ಪಿಚ್‌ನ್ಲ್ಲಲಿಯೇ ಈ ಪಂದ್ಯ ಕೂಡ ನಡೆಯಲಿದೆ.

*ಬುಧವಾರ ಆರಂಭವಾಗಲಿರುವ ಪಂದ್ಯದಲ್ಲಿ ಭಾರತದ ಬೌಲಿಂಗ್ ಯೋಜನೆ ಹೇಗಿರಬೇಕು?
ಈ ವಿಷಯವನ್ನು ನೀವು ನಾಯಕ ದೋನಿ ಬಳಿ ಕೇಳಿದರೆ ಒಳ್ಳೆಯದು. ನನ್ನ ಪ್ರಕಾರ ಇಬ್ಬರಿಗಿಂತ ಹೆಚ್ಚು ಸ್ಪಿನ್ನರ್‌ಗಳ ಅಗತ್ಯವಿಲ್ಲ.

*ಸ್ವದೇಶದಲ್ಲಿ ಆಡುವ ತಂಡಗಳಿಗೆ ಪಿಚ್ ಸ್ವರೂಪ ಹೇಗಿರಬೇಕು?
ಸ್ವದೇಶದ ತಂಡಗಳಿಗೆ ನೆರವಾಗುವಂತಿರಬೇಕು. ಸ್ವದೇಶದಲ್ಲಿ ಸರಣಿ ಆಯೋಜಿಸುವ ಉದ್ದೇಶಗಳಲ್ಲಿ ಇದು ಕೂಡ ಒಂದು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಲ್ಲಿ ಅವರಿಗೆ ಬೇಕಾದಂತೆ ಪಿಚ್ ರೂಪಿಸಿಕೊಳ್ಳುವುದಿಲ್ಲವೇ?


ಪರಸ್ಪರ ಮುಖ ನೋಡದ ದೋನಿ- ಪ್ರಬೀರ್
ಈಡನ್ ಗಾರ್ಡನ್ಸ್ ಪಿಚ್ ಕ್ಯೂರೇಟರ್ ಪ್ರಬೀರ್ ಮುಖರ್ಜಿ ಹಾಗೂ ನಾಯಕ ದೋನಿ ಸೋಮವಾರ ಕ್ರೀಡಾಂಗಣದಲ್ಲಿ ನಾಲ್ಕು ಗಂಟೆ ಸಮಯ ಒಟ್ಟಿಗೆ ಇದ್ದರೂ ಪರಸ್ಪರ ಮುಖ ನೋಡಲಿಲ್ಲ, ಮಾತೂ ಆಡಲಿಲ್ಲ.
ನಾಯಕರಾದವರು ಪಿಚ್ ಹೇಗಿದೆ ಎಂಬುದರ ಬಗ್ಗೆ ಕ್ಯೂರೇಟರ್ ಬಳಿ ಮಾಹಿತಿ ಪಡೆಯುವುದು ಸಹಜ. ಆದರೆ ಪಕ್ಕದಲ್ಲೇ ಅಭ್ಯಾಸ ನಡೆಸುತ್ತಿದ್ದ ದೋನಿ            ಕ್ಯೂರೇಟರ್ ಪ್ರಬೀರ್ ಬಳಿಗೆ ಸುಳಿಯಲೇ ಇಲ್ಲ.

ಇತ್ತ ಅಭ್ಯಾಸದತ್ತ ಕಣ್ಣು ಹರಿಸದ ಪ್ರಬೀರ್ ಸಹಾಯಕ ಸಿಬ್ಬಂದಿ ಜೊತೆ ಪಿಚ್‌ಗೆ ಅಂತಿಮ ಸ್ಪರ್ಶ ನೀಡುವುದರಲ್ಲಿ ನಿರತರಾಗಿದ್ದರು.ಮೊದಲ ದಿನದಿಂದಲೇ ತಿರುವು ನೀಡುವ ಪಿಚ್ ಬೇಕು' ಎಂಬ ದೋನಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಪ್ರಬೀರ್ `ಮುಖ್ಯೋಪಾಧ್ಯಾಯನ್ನೊಬ್ಬ ಕಾಪಿ ಹೊಡೆಯಲು ಮಕ್ಕಳಿಗೆ ಹೇಳಿದಂತೆ' ಎಂದು ತಿರುಗೇಟು ನೀಡಿದ್ದರು. ಪಿಚ್ ರೂಪಿಸಲು ಮತ್ತೊಬ್ಬ ಕ್ಯೂರೇಟರ್ ನೇಮಿಸಿದ ಕಾರಣ ರಜೆ ಹೋಗುವುದಾಗಿ ಹೇಳಿದ್ದ ಮುಖರ್ಜಿ ಬಳಿಕ ತಮ್ಮ ಮನಸ್ಸು ಬದಲಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.