ಹುಬ್ಬಳ್ಳಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಚೆಗೆ ನಡೆಸಿದ ಲೆವೆಲ್-2 ಅಂಪೈರಿಂಗ್ ಪರೀಕ್ಷೆಯಲ್ಲಿ ನಗರದ ಅಂಪೈರ್ ಅಭಿಜಿತ್ ಬೆಂಗೇರಿ ತೇರ್ಗಡೆಯಾಗಿದ್ದು, ಮಂಡಳಿ ಸಂಘಟಿಸುವ ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸುವ ಅರ್ಹತೆ ಪಡೆದಿದ್ದಾರೆ.
ನಾಗಪುರದ ರಾಷ್ಟ್ರೀಯ ಅಂಪೈರಿಂಗ್ ಅಕಾಡೆಮಿಯಲ್ಲಿ ಕಳೆದ ಜುಲೈನಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. ನೂರಕ್ಕೆ 98 ಅಂಕ ಪಡೆದಿರುವ ಅಭಿಜಿತ್ ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಉತ್ತರ ಕರ್ನಾಟಕದಿಂದ ಬಿಸಿಸಿಐ ಅಂಪೈರ್ ಆಗಿ ಆಯ್ಕೆಯಾದ ಮೊದಲ ವ್ಯಕ್ತಿ ಎಂಬ ಹಿರಿಮೆಗೂ ಅವರು ಒಳಗಾಗಿದ್ದಾರೆ.
ಬೆಂಗಳೂರಿನ ವಿ.ಎನ್. ಕುಲಕರ್ಣಿ ಅವರನ್ನು ಹೊರತುಪಡಿಸಿದರೆ ಕರ್ನಾಟಕದ ಯಾವೊಬ್ಬ ಅಂಪೈರ್ ಕೂಡ ಈ ಸಾಧನೆ ಮಾಡಿಲ್ಲ. ರಾಜ್ಯ 14 ಮತ್ತು 16 ವರ್ಷದೊಳಗಿನ ತಂಡದಲ್ಲಿ ಆಡಿದ್ದ ಅಭಿಜಿತ್, ಕರ್ನಾಟಕ ವಿಶ್ವವಿದ್ಯಾಲಯ ತಂಡದ ಆಟಗಾರರೂ ಆಗಿದ್ದರು. ಹಿರಿಯ ಆಟಗಾರ ವಿಜಯ್ ಕಾಮತ್ ಮತ್ತು ವಿ.ಎನ್. ಕುಲಕರ್ಣಿ ಅವರ ಗರಡಿಯಲ್ಲಿ ಈ ಯುವ ಅಂಪೈರ್ ಪಳಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.