ಮುಂಬೈ (ಪಿಟಿಐ): ಬಿಸಿಸಿಐನಲ್ಲಿ ಲೋಧಾ ಸಮಿತಿಯ ಶಿಫಾರಸ್ಸುಗಳ ಅನುಷ್ಠಾನಕ್ಕಾಗಿ ರಚಿಸಲಾಗಿರುವ ನಾಲ್ವರ ಸದಸ್ಯರ ಕಾನೂನು ಸಮಿತಿಯ ಮುಖ್ಯಸ್ಥರನ್ನಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂ ಡೇಯ ಕಟ್ಜು ಅವರನ್ನು ನೇಮಕ ಮಾಡಲಾಗಿದೆ.
ಈಚೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಲ್ಲಿ ದೇಶದ ಕ್ರಿಕೆಟ್ ಸುಧಾರಣೆಗಾಗಿ ಲೋಧಾ ಸಮಿತಿ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿ ಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಶಿಫಾರಸ್ಸುಗಳ ಅನುಷ್ಠಾನವನ್ನು ಕಾನೂನು ಚೌಕಟ್ಟಿನಲ್ಲಿ ಮಾಡಲು ಸಲಹೆ ಮತ್ತು ಸೂಚನೆಗಳಿಗಾಗಿ ಸಮಿತಿ ರಚಿಸಲಾಗಿದೆ.
2006 ರಿಂದ 2011ರವರೆಗೆ ಕಟ್ಜು ಅವರು ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಯಾಗಿದ್ದರು. ನಂತರ ಅವರು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ದೆಹಲಿ, ಮದ್ರಾಸ್ ಮತ್ತು ಅಲಹಾಬಾದ್ ಹೈಕೋರ್ಟ್ಗಳಲ್ಲಿ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು.
ಶ್ರೀಮಂತ ಕ್ರೀಡಾ ಸಂಸ್ಥೆಯಾಗಿರುವ ಬಿಸಿಸಿಐ ಅಧೀನದಲ್ಲಿರುವ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ), ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಐ)ಗಳ ಚುನಾವಣೆಗಳನ್ನು ತಡೆ ಹಿಡಿಯಲಾಗಿದೆ. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಚುನಾವಣೆಯನ್ನು ನಡೆಸಲು ಯಾವುದೇ ತಡೆ ನೀಡಿಲ್ಲ.
70 ವರ್ಷ ಮೀರಿದವರು ಪದಾಧಿಕಾರಿಗಳಾಗುವಂತಿಲ್ಲ. ಮೂರು ವರ್ಷ ಆಡಳಿತ ನಡೆಸಿದವರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ಮೂರು ವರ್ಷಗಳ ಅಂತರ ಇರಬೇಕು ಎಂಬ ನಿಯಮಗಳ ಕುರಿತು ಇರುವ ಗೊಂದಲ ಗಳನ್ನು ನಿವಾರಿಸಲು ಸಮಿತಿಯು ಆದ್ಯತೆ ನೀಡಲಿದೆ.
ಕಾನೂನು ತಜ್ಞ ಅಭಿನವ್ ಮುಖರ್ಜಿ ಅವರೂ ಈ ಸಮಿತಿ ಯಲ್ಲಿದ್ದಾರೆ.
‘ವರದಿಯಲ್ಲಿರುವ ಶಿಫಾರಸ್ಸುಗಳು ಕಾನೂನಿನ ಭಾಷೆಯಲ್ಲಿವೆ. ಅವುಗಳನ್ನು ಸರಳೀಕರಣಗೊಳಿಸಿ ಅನುಷ್ಟಾನಕ್ಕೆ ತರಲು ಕಾನೂನು ಪಂಡಿತರ ಸಲಹೆ ಅತಿ ಮುಖ್ಯ. ಅನುಭವಿ ಮತ್ತು ಹಿರಿಯ ನ್ಯಾಯಮೂರ್ತಿಗಳಾಗಿರುವ ಕಟ್ಜು ಅವರ ನೇತೃತ್ವದ ಸಮಿತಿಯು ಸಂಸ್ಥೆಗೆ ಮಾರ್ಗದರ್ಶನ ನೀಡಲಿದೆ’ ಎಂದು ಬಿಸಿಸಿಐ ಉನ್ನತ ಮೂಲಗಳು ತಿಳಿಸಿವೆ. ಕಾನೂನು ಸಲಹಾ ಸಮಿತಿ ಮತ್ತು ಬಿಸಿಸಿಐ ಪದಾಧಿಕಾರಿಗಳ ಸಭೆಯು ಆಗಸ್ಟ್ 5ರಂದು ನವದೆಹಲಿಯಲ್ಲಿ ನಡೆಯಲಿದೆ.
ಬಿಸಿಸಿಐ ನಿರ್ಣಯಕ್ಕೆ ನಾವು ಬದ್ಧ: ಗಂಗೂಲಿ: ‘ಲೋಧಾ ಸಮಿತಿ ಶಿಫಾರಸ್ಸುಗಳ ಅನುಷ್ಠಾನದಲ್ಲಿ ಬಿಸಿಸಿಐ ಕೈಗೊಳ್ಳುವ ನಿರ್ಣಯಗಳಿಗೆ ನಾವು ಬದ್ಧ. ಸೂಕ್ತ ನಿರ್ಣಯ ಕೈಗೊಳ್ಳಲು ಇನ್ನೂ ಸ್ವಲ್ಪ ಕಾಲಾವಕಾಶದ ಅವಶ್ಯಕತೆ ಇದೆ’ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.