ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸದಸ್ಯತ್ವ ಮತ್ತು ಮಾನ್ಯತೆಯನ್ನು ನೀಡಬೇಕು ಎಂದು ತೆಲಂಗಾಣ ಕ್ರಿಕೆಟ್ ಸಂಸ್ಥೆ (ಟಿಸಿಎ)ಯು ಸಿಒಎಗೆ ಅರ್ಜಿ ಸಲ್ಲಿಸಿದೆ.
‘ಟಿಸಿಎಯು ಮಾನ್ಯತೆ ಕೋರಿ ನೀಡುವ ಅರ್ಜಿಯನ್ನು ಸ್ವೀಕರಿಸಬೇಕು. ಸಂಸ್ಥೆಗೆ ಮಾನ್ಯತೆ ನೀಡುವ ಅವಕಾಶಗಳ ಕುರಿತು ಕೂಲಂಕಷವಾಗಿ ವಿಚಾರಣೆ ನಡೆಸಬೇಕೆಂದು ಈಚೆಗೆ ಮುಂಬೈ ಹೈಕೋರ್ಟ್ ಬಿಸಿಸಿಐ ಆಡಳಿತ ಸಮಿತಿಗೆ (ಸಿಒಎ) ನಿರ್ದೇಶನ ನೀಡಿತ್ತು. ಇದರಿಂದಾಗಿ ನಮಗೆ ಹೊಸ ಭರವಸೆ ಮೂಡಿದೆ. ಆದ್ದರಿಂದ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಟಿಸಿಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
‘ಸಿಒಎ ನಮ್ಮ ಪ್ರಸ್ತಾವನ್ನು ಸ್ವೀಕರಿಸಿದೆ. ಮೇ 15ರೊಳಗೆ ವಿವರಣೆ ಸಲ್ಲಿಸಬೇಕೆಂದು ನಮಗೆ ತಿಳಿಸಿದೆ’ ಎಂದು ಟಿಸಿಎದ ಸ್ವಘೋಷಿತ ಪ್ರಧಾನ ಕಾರ್ಯದರ್ಶಿ ಧರಮ್ ಗುರುವ ರೆಡ್ಡಿ ತಿಳಿಸಿದ್ದಾರೆ.
2014ರಲ್ಲಿ ಆಂಧ್ರಪ್ರದೇಶದಿಂದ ವಿಭಜನೆಗೊಂಡು ತೆಲಂಗಾಣ ರಾಜ್ಯವು ಅಸ್ತಿತ್ವಕ್ಕೆ ಬಂದಿತ್ತು. 2015ರಲ್ಲಿ ಟಿಸಿಎ ಸ್ಥಾಪನೆಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.