ADVERTISEMENT

ಬಿಸಿಸಿಐ ಮೇಲೆ ಕಿಡಿಕಾರಿದ ಒಮರ್

ಜಿಂಬಾಬ್ವೆ ಸರಣಿ : ಬೆಂಚ್ ಕಾದ ಪವ್ರೇಜ್ ರಸೂಲ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 12:10 IST
Last Updated 3 ಆಗಸ್ಟ್ 2013, 12:10 IST

ಶ್ರೀನಗರ (ಪಿಟಿಐ) : ಜಿಂಬಾಬ್ವೆ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಜಮ್ಮು-ಕಾಶ್ಮೀರದ ಆಲ್‌ರೌಂಡರ್ ಪವ್ರೇಜ್ ರಸೂಲ್ ಅವರಿಗೆ ಅವಕಾಶ ನೀಡದಿರುವುದಕ್ಕೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಬಿಸಿಸಿಐ ವಿರುದ್ಧ ಶನಿವಾರ ಕಿಡಿಕಾರಿದರು.

ನಿಜವಾಗಿಯೂ ರಸೂಲ್‌ಗೆ ಅವಮಾನ ಮಾಡುವ ಉದ್ದೇಶವೇ ಇದ್ದಿದ್ದರೆ ಸ್ವದೇಶದಲ್ಲೇ ಅಂತಹ ಹೀನ ಕೆಲಸ ಮಾಡಬಹುದಿತ್ತು. ಅದಕ್ಕೆಂದು ಜಿಂಬಾಬ್ವೆ ಸರಣಿಗೆ ಕರೆದುಕೊಂಡು ಹೋಗುವ ಅವಶ್ಯಕತೆಯಾದರೂ ಏನಿತ್ತು ಎಂದು ಜಿಂಬಾಬ್ವೆ ಎದುರಿನ ಕೊನೆಯ ಪಂದ್ಯದಲ್ಲೂ ರಸೂಲ್ ಅವರಿಗೆ ಆಡಲು ಅವಕಾಶ ಕಲ್ಪಿಸದೇ ಇರುವುದನ್ನು ಖಂಡಿಸಿ ಕ್ರಿಕೆಟ್ ಅಭಿಮಾನಿಯೂ ಆಗಿರುವ ಒಮರ್ ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾರತ ತಂಡದ 11 ಆಟಗಾರರಲ್ಲಿ ರಸೂಲ್ ಅವರಿಗೆ ಸ್ಥಾನ ನೀಡದ್ದಕ್ಕೆ ಅಸಮಾಧಾನಗೊಂಡ ಒಮರ್, ರಸೂಲ್ ಅವರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಒಂದು ಅವಕಾಶ ನೀಡುವಂತೆ ಶುಕ್ರವಾರ ಬಿಸಿಸಿಐಗೆ ಮನವಿ ಮಾಡುವಂತಹ ರೀತಿಯಲ್ಲಿ ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದರು. ಆದರೆ ಶನಿವಾರ ನಡೆಯುತ್ತಿರುವ ಅಂತಿಮ ಪಂದ್ಯದಲ್ಲೂ ರಸೂಲ್ ಅವರಿಗೆ ಅವಕಾಶ ನೀಡದಿರುವುದು ತೀವ್ರ ಅಸಮಾಧಾನ ತಂದಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.