ADVERTISEMENT

ಬೆಟ್ಟಿಂಗ್ ಬಲೆಯಲ್ಲಿ ಕುಂದ್ರಾ ದಂಪತಿ

ಸ್ಪಾಟ್ ಫಿಕ್ಸಿಂಗ್: ಸೋಮವಾರ ಬಿಸಿಸಿಐ ತುರ್ತು ಸಭೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:58 IST
Last Updated 6 ಜೂನ್ 2013, 19:58 IST
ಬೆಟ್ಟಿಂಗ್ ಬಲೆಯಲ್ಲಿ ಕುಂದ್ರಾ ದಂಪತಿ
ಬೆಟ್ಟಿಂಗ್ ಬಲೆಯಲ್ಲಿ ಕುಂದ್ರಾ ದಂಪತಿ   

ನವದೆಹಲಿ: ರಾಜಸ್ತಾನ ರಾಯಲ್ಸ್ ತಂಡದ ಮಾಲೀಕ ರಾಜ್ ಕುಂದ್ರಾ ಹಾಗೂ ಅವರ ಪತ್ನಿ ಶಿಲ್ಪಾ ಶೆಟ್ಟಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದರು ಎನ್ನುವ ಆಘಾತಕಾರಿ ಅಂಶ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ. ಇದರಿಂದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಹೊಸ ಆಯಾಮ ಪಡೆದುಕೊಂಡಿದೆ. ಈಗ ಮತ್ತೆ ಇಕ್ಕಟ್ಟಿಗೆ ಸಿಲುಕಿರುವ ಬಿಸಿಸಿಐ ಸೋಮವಾರ ನವದೆಹಲಿಯಲ್ಲಿ ತುರ್ತು ಸಭೆ ನಡೆಸಲು ಮುಂದಾಗಿದೆ.

ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿರುವುದಾಗಿ ಕುಂದ್ರಾ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಬುಧವಾರ ಸುಮಾರು 11 ಗಂಟೆ ಪೊಲೀಸರು ಕುಂದ್ರಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. `ಐಪಿಎಲ್‌ನಲ್ಲಿ ಬೆಟ್ಟಿಂಗ್ ನಡೆಸಿ ಭಾರಿ ಹಣ ಕಳೆದುಕೊಂಡಿದ್ದೇನೆ' ಎಂಬ ಮಾಹಿತಿಯನ್ನೂ ಕುಂದ್ರಾ ಈ ಸಂದರ್ಭದಲ್ಲಿ ನೀಡಿದ್ದಾರೆ.

`ಕುಂದ್ರಾ ಅವರ ಉದ್ದಿಮೆ ವ್ಯವಹಾರದ ಪಾಲುದಾರ ಅಹಮದಾಬಾದ್ ಮೂಲದ ಉಮೇಶ್ ಗೋಯೆಂಕಾ ಕೂಡಾ ಎರಡು ವರ್ಷಗಳಿಂದ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ. ಕುಂದ್ರಾ ಅವರು ಉಮೇಶ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದರು ಎಂಬುದೂ ವಿಚಾರಣೆ ವೇಳೆ ನಮಗೆ ಗೊತ್ತಾಗಿದೆ' ಎಂದು ದೆಹಲಿ ಪೊಲೀಸ್ ಕಮೀಷನರ್ ನೀರಜ್ ಕುಮಾರ್ ತಿಳಿಸಿದ್ದಾರೆ.

ಬಾಲಿವುಡ್ ನಟಿ ಶಿಲ್ಪಾ ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

`ದೆಹಲಿಯಲ್ಲಿ ನಡೆದ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ನಡುವಿನ ಪಂದ್ಯದ ವೇಳೆ ಶಿಲ್ಪಾ ಬೆಟ್ಟಿಂಗ್‌ನಲ್ಲಿ ತೊಡಗಿದ್ದರು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

`ರಾಯಲ್ಸ್ ತಂಡದಲ್ಲಿ ಕುಂದ್ರಾ ಅವರ ಪಾತ್ರ ಅತ್ಯಂತ ಪ್ರಮುಖವಾದದ್ದು. ಅದ್ದರಿಂದ ಅವರನ್ನು ಬಂಧಿಸುವ ಬಗ್ಗೆ ನಾವಿನ್ನು ನಿರ್ಧರಿಸಬೇಕಿದೆ. ಆದರೆ, ಅದಕ್ಕೂ ಮುನ್ನ ಮತ್ತೊಮ್ಮೆ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಉಮೇಶ್ ಮತ್ತು ಕುಂದ್ರಾ  ಅವರಿಗೆ `ಆರೋಪ ಮುಕ್ತ' ಗೊಳಿಸಿಲ್ಲ ಎಂದೂ ಪೊಲೀಸರು ವಿವರಿಸಿದ್ದಾರೆ.

ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರು ಕುಂದ್ರಾ ಅವರ ಪಾಸ್‌ಪೋರ್ಟ್ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರನಾಗಿರುವ ರಾಯಲ್ಸ್ ತಂಡದ ಇನ್ನೊಬ್ಬ ಆಟಗಾರ ಸಿದ್ಧಾರ್ಥ್ ತ್ರಿವೇದಿ ಸಹ ಬುಧವಾರ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ `ಕುಂದ್ರಾ ಅವರ ಉದ್ದಿಮೆ ಪಾಲುದಾರ ಉಮೇಶ್ ತಂಡ ಮತ್ತು ಪಿಚ್‌ಗೆ ಸಂಬಂಧಿಸಿದಂತೆ ನನ್ನಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು' ಎನ್ನುವ ವಿಷಯಯನ್ನು ಸಿದ್ಧಾರ್ಥ್ ಬಹಿರಂಗಗೊಳಿಸಿದ್ದಾರೆ. 

ರಾಯಲ್ಸ್ ಫ್ರಾಂಚೈಸ್‌ನ ಮಾಲೀಕರ ವಿರುದ್ಧದ ಈ ಆರೋಪಗಳು ನಿಜ ಎಂದು ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬಿಸಿಸಿಐ ಹೇಳಿದೆ. ಸೋಮವಾರ ನಡೆಯುವ ತುರ್ತು ಸಭೆಯಲ್ಲಿ ರಾಯಲ್ಸ್ ತಂಡದೊಂದಿಗಿನ ಒಪ್ಪಂದವನ್ನು ರದ್ದು ಮಾಡುವ ಬಗ್ಗೆಯೂ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ಉಕ್ಕು ಉದ್ಯಮದಲ್ಲಿ ಕುಂದ್ರಾ ಶೇ. 42ರಷ್ಟು ಮತ್ತು ಉಮೇಶ್ ಶೇ. 16ರಷ್ಟು ಷೇರು ಹೊಂದಿದ್ದಾರೆ. ಕುಂದ್ರಾ ಮೂರು ವರ್ಷಗಳಿಂದ ಬೆಟ್ಟಿಂಗ್ ಆಡಿ ಒಂದು ಕೋಟಿ ರೂಪಾಯಿ ಹಣ  ಕಳೆದುಕೊಂಡಿರುವುದು ಗೊತ್ತಾಗಿದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.