ADVERTISEMENT

ಬ್ಯಾಡ್ಮಿಂಟನ್: ಅಭಿಷೇಕ್ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಆರಂಭದಲ್ಲಿ ಭಾರಿ ಪ್ರತಿರೋಧ ಎದುರಾದರೂ ಎಚ್ಚರಿಕೆಯ ಆಟವಾಡಿದ ಏಳನೇ ಶ್ರೇಯಾಂಕದ ಅಭಿಷೇಕ್ ಯಲಿಗಾರ್ ಇಲ್ಲಿ ಕೊನೆಗೊಂಡ ಎಂ.ಎಸ್. ರಾಮಯ್ಯ ಆನಂದ ಶರ್ಮ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದರು.

ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಪಿಪಿಬಿಎನ ಅಭಿಷೇಕ್ 21-14, 21-12ರಲ್ಲಿ ತಮ್ಮದೇ ಕ್ಲಬ್‌ನ ಆದಿತ್ಯ ಆರ್. ಪ್ರಕಾಶ್ ಅವರನ್ನು ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪುರುಷರ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಆದಿತ್ಯ ಆರ್. ಪ್ರಕಾಶ್-ಕೃಷ್ಣಾ ಜೋಡಿ 21-16, 21-19ರಲ್ಲಿ ಆದರ್ಶ ಕುಮಾರ್-ವೆಂಕಟೇಶ್ ಪ್ರಸಾದ್ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದರು.

ವಿನಯ್ ಸಿದ್ದರಾಜ್ ಇದೇ ಟೂರ್ನಿಯ ವೆಟರನ್ಸ್ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಈ ಆಟಗಾರ 21-18, 21-10ರಲ್ಲಿ ಜಯರಾಮ್ ಪೈ ಎದುರು ಗೆಲುವು ಸಾಧಿಸಿ ಚಾಂಪಿಯನ್ ಆದರು.

ಇದೇ ವಿಭಾಗದ ಡಬಲ್ಸ್‌ನ ಅಂತಿಮ ಘಟ್ಟದ ಪಂದ್ಯದಲ್ಲಿ ಸಾಗರದ ಜಯರಾಮ್ ಪೈ-ವಸಂತ್ ಕುಮಾರ್ ಜೋಡಿ 21-12, 14-21, 21-16ರಲ್ಲಿ ಕೇದಾರನಾಥ್-ವಿನಯ್ ಸಿದ್ದರಾಜು ಜೋಡಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.