ADVERTISEMENT

ಬ್ಯಾಡ್ಮಿಂಟನ್: ಪ್ರಜಕ್ತಾಗೆ ಅವಕಾಶ ನೀಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST

ಮುಂಬೈ (ಪಿಟಿಐ): ಬ್ಯಾಡ್ಮಿಂಟನ್ ಆಟಗಾರ್ತಿ ಪ್ರಜಕ್ತಾ ಸಾವಂತ್ ಗೆ ಮುಂಬರುವ ರಾಷ್ಟ್ರೀಯ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಗೆ (ಬಿಎಐ) ಬಾಂಬೆ ಹೈಕೋರ್ಟ್ ಆದೇಶಿಸಿದೆ.

ಪ್ರಜಕ್ತಾ ಅವರ ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಮೋಹಿತ್ ಷಾ ಮತ್ತು ನ್ಯಾಯ ಮೂರ್ತಿ ಎಮ್‌.ಎಸ್ ಸಂಕ್ಲೇಚಾ ಅವರನ್ನೊಳಗೊಂಡ ವಿಭಾಗೀಯ ಪೀಠ ಮಿಶ್ರ ಡಬಲ್ಸ್‌ನಲ್ಲಿ ಕಮಲ್‌ ದೀಪ್ ಸಿಂಗ್ ಜೊತೆಗೂಡಿ ಆಡಲು ಅವಕಾಶ ನೀಡುವಂತೆ ಬಿಎಐಗೆ ತಾಕೀತು ಮಾಡಿದೆ.

ಒಂದು ವೇಳೆ ಬಿಎಐ ಪ್ರಜಕ್ತಾಗೆ ಅವಕಾಶ ನೀಡಲು ಸಿದ್ಧವಿಲ್ಲವೆಂದಾ ದರೆ, ಟೂರ್ನಿಗೆ ಆಟಗಾರರನ್ನು ಮರು ಆಯ್ಕೆ ಮಾಡಬೇಕು ಎಂದು
ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 24ಕ್ಕೆ ಮುಂದೂಡಿದೆ.

ರ್‍ಯಾಂಕಿಂಗ್‌ನಲ್ಲಿ ತಮಗಿಂತಲೂ ಕೆಳಗಿರುವ ಆಟಗಾರರನ್ನು ಟೂರ್ನಿಗೆ ಆಯ್ಕೆ ಮಾಡಲಾಗಿದ್ದು, ತಮ್ಮನ್ನು ಮಾತ್ರ ಕಡೆಗಣಿಸಲಾಗಿದೆ ಎಂದು ಪ್ರಜಕ್ತಾ ಆರೋಪಿಸಿದ್ದರು.

ಬಿಎಐ ಆಯ್ಕೆ ಸಮಿತಿ ಸದಸ್ಯ ಹಾಗೂ ರಾಷ್ಟ್ರೀಯ ಮುಖ್ಯ ಕೋಚ್ ಕೂಡಾ ಆಗಿರುವ ಪುಲ್ಲೇಲ ಗೋಪಿ ಚಂದ್ ತಮ್ಮ ಸ್ವಂತ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ  ಆಟಗಾರರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ. 

‘ನಾನು ಅವರ ಅಕಾಡೆಮಿಯನ್ನು ತೊರೆದ ಕಾರಣ ನನ್ನನ್ನು  ಗುರಿ ಯಾಗಿಸಿಕೊಂಡು ಈ ರೀತಿ ಅನ್ಯಾಯ ಎಸಗುತ್ತಿದ್ದಾರೆ’ ಎಂದು ಪ್ರಜಕ್ತಾ  ಆರೋಪಿಸಿದ್ದಾರೆ.

ಈ ಕಾರಣದಿಂದ ಪ್ರಜಕ್ತಾ ಹೈದರಾಬಾದ್‌ನಲ್ಲಿ ಅಖಿಲ ಭಾರತ ರಾಷ್ಟ್ರೀಯ ತರಬೇತಿ ಶಿಬಿರ ನಡೆಯುವ ವೇಳೆ ಶಿಬಿರದಿಂದ ಹೊರ ನಡೆದಿದ್ದರು. ಕೋರ್ಟ್‌ ಈಗ ಅನುಮತಿ ನೀಡಿರುವುದರಿಂದ ಮಿಶ್ರ ಡಬಲ್ಸ್‌ನಲ್ಲಿ ಅವರು ಕಮಲದೀಪ್‌ ಸಿಂಗ್‌ ಜೊತೆಗೂಡಿ ಆಡುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.