ADVERTISEMENT

ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣ ಇಂದು ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಕ್ರೀಡಾಂಗಣದ ಒಳಗಿನ ನೋಟ
ಕ್ರೀಡಾಂಗಣದ ಒಳಗಿನ ನೋಟ   

ಬೆಂಗಳೂರು: ಬಿಬಿಎಂಪಿ ಹಣಕಾಸು ನೆರವಿನಿಂದ ಬೀಗಲ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್‌ ನಿರ್ಮಿಸಿರುವ ಸುಸಜ್ಜಿತ ಬ್ಯಾಸ್ಕೆಟ್‌ ಬಾಲ್‌ ಕ್ರೀಡಾಂಗಣದ ಉದ್ಘಾಟನೆ ಶನಿವಾರ ಉದ್ಘಾಟನೆಯಾಗಲಿದೆ.

‘ಮಲ್ಲೇಶ್ವರಂ ವೆಸ್ಟ್ ಪಾರ್ಕ್‌ ರಸ್ತೆಯ 15ನೇ ಕ್ರಾಸ್‌ನಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣಕ್ಕೆ ಬಿಬಿಎಂಪಿ ₹ 9.21 ಕೋಟಿ ಅನುದಾನ ನೀಡಿದೆ. 2009–10ರ ಸಾಲಿನಲ್ಲಿ ತಾಂತ್ರಿಕ ಅನುಮೋದನೆ ಲಭಿಸಿತ್ತು. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ನಿಗದಿತ ಅವಧಿಯಲ್ಲಿ (18 ತಿಂಗಳು) ಕಾಮಗಾರಿ ಪೂರ್ಣಗೊಳಿಸಲು ಆಗಲಿಲ್ಲ. ನಂತರ ಗುತ್ತಿಗೆದಾರರನ್ನು ಬದಲಿಸಿ ಕಾಮಗಾರಿ ಪೂರ್ಣಗೊಳಿಸಲಾಯಿತು’ ಎಂದು ಶಾಸಕ ಡಾ. ಸಿ. ಅಶ್ವತ್ಥನಾರಾಯಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕ್ರೀಡಾಂಗಣದ ಛಾವಣಿಗೆ ಕಾಲ್‌ಜಿಪ್‌ ಅವಳವಡಿಸಲಾಗಿದ್ದು ವಾಟರ್ ಪ್ರೂಫ್ ಆಗಿದೆ. ಅಂತರರಾಷ್ಟ್ರೀಯಮಟ್ಟದ ಪಂದ್ಯಗಳನ್ನು ಆಯೋಜಿಸಲು ಇಲ್ಲಿ ಸೌಲಭ್ಯ ಇದ್ದು ನೆಲಮಹಡಿಯಲ್ಲಿ ಆಟಗಾರರ ವಾರ್ಮ್‌ ಅಪ್‌ ಮತ್ತು ಜಾಗಿಂಗ್‌ಗೆ ಸೌಲಭ್ಯ ಇದೆ. ಜಿಮ್‌ ವ್ಯವಸ್ಥೆಯೂ ಇದೆ. ನೆಲ ಅಂತಸ್ತಿನಲ್ಲಿ ಆಟದ ಅಂಗಣ ಇದೆ. ಹಗಲಲ್ಲಿ ನೈಸರ್ಗಿಕ ಬೆಳಕು ಬರುವಂತೆ ವ್ಯವಸ್ಥೆ ಮಾಡಿದ್ದು ಕ್ಯಾಟ್‌ವಾಕ್ ಮೇಲೆ ವಿಶೇಷ ವಿನ್ಯಾಸದ ಎಲ್‌ಇಡಿ ಬೆಳಕಿನ ಸೌಲಭ್ಯ ಇದೆ’ ಎಂದು ವಿವರಿಸಿದರು.

ADVERTISEMENT

ಇಂದು ಆಟಗಾರರಿಂದ ಡ್ರಿಬ್ಲಥಾನ್‌
ಉದ್ಘಾಟನೆಯ ಅಂಗವಾಗಿ ಶನಿವಾರ ಬೆಳಿಗ್ಗೆ 9 ಗಂಟೆಗೆ ಮಲ್ಲೇಶ್ವರಂನ ಪಠಾಣಕರ್‌ ಬಡಾವಣೆಯಿಂದ 400 ಮಂದಿ ಬ್ಯಾಸ್ಕೆಟ್‌ಬಾಲ್ ಆಟಗಾರರು ಡ್ರಿಬ್ಲಥಾನ್‌ (ಚೆಂಡು ಡ್ರಿಬಲ್ ಮಾಡುತ್ತ ಸಾಗುವುದು) ಮೂಲಕ ಕ್ರೀಡಾಂಗಣಕ್ಕೆ ಬರಲಿದ್ದಾರೆ. ಸಂಜೆ ಆರು ಗಂಟೆಗೆ ಭಾರತ ತಂಡದ ಆಟಗಾರರ ಎರಡು ತಂಡಗಳು ಪ್ರದರ್ಶನ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಅವರು ಹೇಳಿದರು.

ಸರ್ಕಾರಿ ಶಾಲಾ ಮಕ್ಕಳಿಗೆ ವಿಶೇಷ ತರಬೇತಿ
ಕ್ರೀಡಾಂಗಣದಲ್ಲಿ ತರಬೇತಿಗೆ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು. ಮಲ್ಲೇಶ್ವರಂ ಭಾಗದ ಸರ್ಕಾರಿ ಶಾಲೆ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುವುದು. ಆನ್‌ಲೈನ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಕುರಿತು ವಿವರ ಪಡೆಯುವ ಸೌಲಭ್ಯಗಳನ್ನು ಕೂಡ ಮಾಡಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಭಾರತದಲ್ಲಿ ಗುಣಮಟ್ಟ ವೃದ್ಧಿಸುತ್ತಿದೆ
ಭಾರತದಲ್ಲಿ ಇತ್ತೀಚೆಗೆ ಬ್ಯಾಸ್ಕೆಟ್‌ಬಾಲ್ ಕ್ರೀಡೆಯ ಗುಣಮಟ್ಟ ವೃದ್ಧಿಸುತ್ತಿದೆ ಎಂದು ಒಲಿಂಪಿಯನ್‌ ದಿಲೀಪ್‌ ಅಭಿಪ್ರಾಯಪಟ್ಟರು.

ಏಷ್ಯಾದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ಬ್ಯಾಸ್ಕೆಟ್‌ಬಾಲ್ ಶಕ್ತಿ ಕಡಿಮೆ. ಹೀಗಾಗಿ ಏಷ್ಯಾ ಹಂತದ ವಿಶ್ವಕಪ್‌ ಅರ್ಹತಾ ಸುತ್ತಿನ ಎಲ್ಲ ನಾಲ್ಕು ಪಂದ್ಯಗಳಲ್ಲಿ ತಂಡ ಸೋತಿದೆ. ಆದರೂ ಬಲಿಷ್ಠ ತಂಡಗಳನ್ನು ನಮ್ಮವರು ಎದುರಿಸಿದ ರೀತಿ ಗಮನಾರ್ಹ. ಇದು ಶುಭ ಸೂಚನೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.