ಸಿಡ್ನಿ (ಪಿಟಿಐ): ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಹರಭಜನ್ ಸಿಂಗ್ ಅನುಪಸ್ಥಿತಿ ಕಾಡುತ್ತಿದೆ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸೀಮ್ ಅಕ್ರಮ್ ಹೇಳಿದ್ದಾರೆ. ಆಸೀಸ್ ಪಿಚ್ಗಳಲ್ಲಿ ರವಿಚಂದ್ರನ್ ಅಶ್ವಿನ್ಗಿಂತ ಹರಭಜನ್ ಹೆಚ್ಚು ಪ್ರಭಾವಿ ಎನಿಸುತ್ತಿದ್ದರು ಎಂಬುದು ಅವರ ಹೇಳಿಕೆ.
`ಹರಭಜನ್ ಇಲ್ಲದೇ ಇರುವುದು ಭಾರತ ತಂಡವನ್ನು ಕಾಡುತ್ತಿದೆ. ವೇಗ ಹಾಗೂ ಬೌನ್ಸ್ಗೆ ನೆರವು ನೀಡುವ ಆಸ್ಟ್ರೇಲಿಯಾದ ಪಿಚ್ಗಳಲ್ಲಿ ಬ್ಯಾಟ್ಸ್ ಮನ್ಗಳ ಮೇಲೆ ಒತ್ತಡ ಹೇರುವುದು ಸ್ಪಿನ್ನರ್ಗಳ ಕೆಲಸ. ಅದಕ್ಕೆ ಬದಲು ಚೆಂಡು ತಿರುವು ಪಡೆಯುವಂತೆ ಮಾಡಲು ಪ್ರಯತ್ನಿಸಬಾರದು. ಬ್ಯಾಟ್ಸ್ಮನ್ಗಳು ದೊಡ್ಡ ಹೊಡೆತಕ್ಕೆ ಮುಂದಾಗುವಂತೆ ಪ್ರಚೋದಿಸಬೇಕು~ ಎಂದು ಅಕ್ರಮ್ ತಿಳಿಸಿದ್ದಾರೆ.
`ಹರಭಜನ್ ಅವರಂತಹ ಅನುಭವಿ ಬೌಲರ್ ಭಾರತಕ್ಕೆ ಅಗತ್ಯ. ಬ್ಯಾಟ್ಸ್ ಮನ್ಗಳು ಒಂದು ಅಥವಾ ಎರಡು ರನ್ ತೆಗೆಯುವುದನ್ನು ತಡೆದು ಒತ್ತಡ ಹೇರುವುದು ಹೇಗೆ ಎಂಬುದು ಅವರಿಗೆ ತಿಳಿದಿದೆ. ಆಸೀಸ್ ಬ್ಯಾಟ್ಸ್ಮನ್ಗಳು ಅಶ್ವಿನ್ ಬೌಲಿಂಗ್ ದಾಳಿಯನ್ನು ಅನಾಯಾಸದಿಂದ ಎದುರಿಸುತ್ತಿದ್ದು, ಸ್ಟ್ರೈಕ್ ಬದಲಿಸುವಲ್ಲಿ ಹೆಚ್ಚಿನ ಸಮಸ್ಯೆ ಅನುಭವಿಸುತ್ತಿಲ್ಲ~ ಎಂದಿದ್ದಾರೆ.
ಅಶ್ವಿನ್ ಹೊಂದಿರುವ ಇತಿಮಿತಿಗಳು ಏನು ಎಂಬುದನ್ನು ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳು ಎರಡನೇ ಟೆಸ್ಟ್ನಲ್ಲಿ ಬಹಿರಂಗಪಡಿಸಿದ್ದಾರೆ ಎಂದು ನುಡಿದಿದ್ದಾರೆ. ಸಿಡ್ನಿಯಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಭಾರತ ಇನಿಂಗ್ಸ್ ಹಾಗೂ 68 ರನ್ಗಳ ಸೋಲು ಅನುಭವಿಸಿತ್ತು.
`ಆಸೀಸ್ ನೆಲದಲ್ಲಿ ಚೆಂಡು ತಿರುವು ಪಡೆಯುವಂತಹ ಪಿಚ್ಗಳು ಇಲ್ಲ. ಆತಿಥೇಯ ತಂಡದ ಸ್ಪಿನ್ನರ್ ನಥಾನ್ ಲಿನ್ ಕೂಡಾ ವಿಫಲರಾಗಿದ್ದಾರೆ. ಬೌನ್ಸ್ಗೆ ನೆರವು ನೀಡುವ ಪಿಚ್ಗಳಲ್ಲಿ ಬೌಲಿಂಗ್ ಮಾಡುವ ಕಲೆಯನ್ನು ಅಶ್ವಿನ್ ಕರಗತಮಾಡಿಕೊಂಡಿಲ್ಲ. ಭಾರತದ ಪಿಚ್ಗಳಲ್ಲಿ ಚೆಂಡನ್ನು ಹೇಗೆ ತಿರುಗಿಸಬಹುದು ಎಂಬುದು ಮಾತ್ರ ಅವರಿಗೆ ತಿಳಿದಿದೆ~ ಎಂದು ಪಾಕ್ ಕಂಡಂತಹ ಶ್ರೇಷ್ಠ ಬೌಲರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.