ADVERTISEMENT

ಭಾರತಕ್ಕೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2016, 19:30 IST
Last Updated 11 ಅಕ್ಟೋಬರ್ 2016, 19:30 IST
ಭಾರತಕ್ಕೆ ಭರ್ಜರಿ ಜಯ
ಭಾರತಕ್ಕೆ ಭರ್ಜರಿ ಜಯ   

ಅಹಮದಾಬಾದ್‌: ಭಾರತ ತಂಡ ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕಬಡ್ಡಿ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪುವ ಆಸೆಯನ್ನು ಜೀವಂತ ಉಳಿಸಿಕೊಂಡಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಭಾರತದ ಆಟಗಾರರು ಬಾಂಗ್ಲಾದೇಶ ತಂಡವನ್ನು 57–20ರಿಂದ ಸೋಲಿಸಿದರು. ಮೊದಲಾರ್ಧದಲ್ಲಿಯೇ ಗಮನಾರ್ಹ ಸಾಮರ್ಥ್ಯ ತೋರಿದ್ದ ಭಾರತದ ಆಟಗಾರರು 27–10ರಿಂದ ಮುನ್ನಡೆ ಸಾಧಿಸಿದ್ದರು.
ನಾಯಕನಿಗೆ ತಕ್ಕ ಆಟವಾಡಿದ ಅನೂಪ್‌ಕುಮಾರ್‌ಗೆ ಪ್ರದೀಪ್‌ ನರ್ವಾಲ್‌, ಮಂಜಿತ್‌ ಚಿಲಾರ್‌, ರಾಹುಲ್‌ ಚೌಧರಿ ಸಮರ್ಥ ಸಾಥ್‌ ನೀಡಿದರು.

ಆದರೆ ಬಾಂಗ್ಲಾ ತಂಡದಲ್ಲಿ ಅರುದುಜುಮಾನ್‌ ಒಬ್ಬರದೇ ಹೋರಾಟ ಗೆಲುವು ತರಲು ಸಾಧ್ಯವಾಗಲಿಲ್ಲ.

ಇರಾನ್‌ಗೆ ರೋಚಕ ಗೆಲುವು: ಇರಾನ್‌ ತಂಡದ ಅನುಭವಿ ಆಟಗಾರರು ಕೆನ್ಯಾದ ವಿರುದ್ಧ 33–28ರಿಂದ ಗೆಲ್ಲಲು ಸಾಕಷ್ಟು ಬೆವರು ಹರಿಸಬೇಕಾಯಿತು.

ADVERTISEMENT


ಇರಾನ್‌ಗೆ ಇದು ಸತತ ಮೂರನೇ ಗೆಲುವು. ಆದರೆ ಕೆನ್ಯಾದಿಂದ ಈ ಮಟ್ಟಿಗಿನ ಪ್ರತಿರೋಧವನ್ನು ಇರಾನ್‌ ನಿರೀಕ್ಷಿಸಿರಲಿಲ್ಲ. ಆರನೇ ನಿಮಿಷವಾಗಿದ್ದಾಗ ಇರಾನ್‌ 6–1ರಿಂದ ಮುಂದಿತ್ತು. 12ನೇ ನಿಮಿಷದಲ್ಲಿ 12–5ರಿಂದ ಮುನ್ನಡೆದಿತ್ತು. ಕೆನ್ಯಾದ ಅತ್ಯುತ್ತಮ ಆಟಗಾರ ಡೇವಿಡ್‌ ಮೊದಲಾರ್ಧದಲ್ಲಿ ಕೇವಲ ಒಂದು ಪಾಯಿಂಟನ್ನಷ್ಟೇ ಗಳಿಸಲು ಶಕ್ತರಾಗಿದ್ದರು.  24ನೇ ನಿಮಿಷವಾಗಿದ್ದಾಗ ಇರಾನ್‌ 22–13ರಿಂದ ಮುಂದಿತ್ತು.

ಆದರೆ ನಂತರದ 10 ನಿಮಿಷಗಳಲ್ಲಿ ಕೆನ್ಯಾ ಚೇತರಿಕೆಯ ಆಟವಾಡಿದ್ದು ಅಂತರವನ್ನು 18–23ಕ್ಕೆ ಇಳಿಸಿಕೊಂಡಿತು.
ಆಟ ಮುಗಿಯಲು 2 ನಿಮಿಷಗಳಿವೆ ಎನ್ನುವಾಗ ಕೆನ್ಯಾ 27–29ರಿಂದ ಹಿಂದಿತ್ತು. ಕೊನೆಯ ಕ್ಷಣಗಳಲ್ಲಿ ರೋಚಕ ಪೈಪೋಟಿ ಮೂಡಿಬಂದು ಇರಾನ್‌ ಪ್ರಯಾಸದಿಂದ ಗೆಲುವಿನ ನಗೆ ಚೆಲ್ಲತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.