ADVERTISEMENT

ಭಾರತಕ್ಕೆ ಸರಣಿ ಗೆಲುವಿನ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:30 IST
Last Updated 20 ಜನವರಿ 2012, 19:30 IST

ನವದೆಹಲಿ (ಪಿಟಿಐ): ಮಿಂಚಿನ ಆಟವಾಡಿದ ಭಾರತದ ಯುವ ಆಟಗಾರ ವಾಲ್ಮೀಕಿ ನಾಯಕ್ ಇಲ್ಲಿ ನಡೆಯುತ್ತಿರುವ ಕಾರ್ಬನ್ ಕಪ್ ಹಾಕಿ ಟೆಸ್ಟ್ ಸರಣಿಯ ದಕ್ಷಿಣ ವಿರುದ್ಧದ ನಾಲ್ಕನೇ ಪಂದ್ಯದಲ್ಲೂ ಗೆಲುವು ಪಡೆಯಲು ಕಾರಣರಾದರು.

ಇಲ್ಲಿನ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ 4-3ಗೋಲುಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು.

ಈ ಗೆಲುವಿನಲ್ಲಿ ವಾಲ್ಮೀಕಿ ಪ್ರಧಾನ ಪಾತ್ರ ವಹಿಸಿದರು. ಇದರಿಂದ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1ರಲ್ಲಿ ಮುನ್ನಡೆ ಸಾಧಿಸಿತು.

ಪ್ರವಾಸಿ ತಂಡದ ಜಸ್ಟಿನ್ ರೈಡ್ ರಸ್ 14ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದು ವಿರಾಮದ ವೇಳೆಗೆ 1-0ರಲ್ಲಿ ಮುನ್ನಡೆ ಸಾಧಿಸಿದರು. ದ್ವಿತೀಯಾರ್ಧದಲ್ಲಿ ಪ್ರಭಾವಿ ಆಟವಾಡಿದ ಆತಿಥೇಯ ತಂಡದ ಯುವರಾಜ್ 44ನೇ ನಿಮಿಷದಲ್ಲಿ ಗೋಲು ಗಳಿಸಿ 1-1ರಲ್ಲಿ ಸಮಬಲ ಸಾಧಿಸಿದರು.

ಇದಾದ ಒಂಬತ್ತು ನಿಮಿಷಗಳ ಅಂತರದಲ್ಲಿ ಇದೇ ಆಟಗಾರ ಇನ್ನೊಂದು ಗೋಲನ್ನು ತಂದಿಟ್ಟರು. ಆಗ ವಿ.ಆರ್. ರಘುನಾಥ್ ಹಾಗೂ ಎಸ್.ಕೆ. ಉತ್ತಪ್ಪ ಕ್ರಮವಾಗಿ 50 ಮತ್ತು 56ನೇ ನಿಮಿಷದಲ್ಲಿ ಗೋಲು ಗಳಿಸಿ ಸರಣಿ ಗೆಲುವಿನ ಮುನ್ನಡೆಗೆ ಕಾರಣರಾದರು.

ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಭಾನುವಾರ ನಡೆಯಲಿದೆ.

ರಾಜ್ಯ ಮಟ್ಟದ ಸೈಕಲ್ ಸ್ಪರ್ಧೆ 25ಕ್ಕೆ

ಚಿಕ್ಕಮಗಳೂರು: ಜಿಲ್ಲಾ ಗಣರಾಜ್ಯೋತ್ಸವ ಆಚರಣೆ ಸಮಿತಿ ಇದೇ 25ರಂದು ಪುರುಷರು ಹಾಗೂ ಮಹಿಳೆಯರಿಗೆ ರಾಜ್ಯ ಮಟ್ಟದ ಸೈಕಲ್ ಸ್ಪರ್ಧೆ ಏರ್ಪಡಿಸಿದೆ.

ಪುರುಷರಿಗೆ(ಗೇರ್ ಸಹಿತ 56 ಕಿ.ಮೀ.) ಕೊಟ್ಟಿಗೆಹಾರದಿಂದ ಚಿಕ್ಕಮಗಳೂರಿಗೆ, ಮಹಿಳೆಯರಿಗೆ (ಗೇರ್ ಸಹಿತ 30 ಕಿ.ಮೀ.) ಮೂಡಿಗೆರೆಯಿಂದ ಚಿಕ್ಕಮಗಳೂರುವರೆಗೆ ಅಂತರ ನಿಗದಿಪಡಿಸಲಾಗಿದೆ. ಪುರುಷರಿಗೆ (ಗೇರ್ ರಹಿತ 21 ಕಿ.ಮೀ) ಹಾಂದಿಯಿಂದ ಚಿಕ್ಕಮಗಳೂರುವರೆಗೆ ಸ್ಪರ್ಧೆ ನಡೆಯಲಿದೆ.

ಪ್ರಯಾಣ ಭತ್ಯೆ ನೀಡಲಾಗುವುದು. ಗೇರ್ ಸೈಕಲ್‌ವುಳ್ಳ ಪುರುಷ, ಮಹಿಳಾ ಸ್ಪರ್ಧಿಗಳು ಇದೇ 24ರ ಸಂಜೆ 4 ಗಂಟೆಗೆ ಕೊಟ್ಟಿಗೆಹಾರ ತರುವೆ ಏಕಲವ್ಯ ವಸತಿ ಶಾಲೆ ಹಾಗೂ 25ರ ಬೆಳಿಗ್ಗೆ 8.30ಕ್ಕೆ ಗೇರ್ ರಹಿತ ಸೈಕಲ್‌ನ ಪುರುಷ ಸ್ಪರ್ಧಿಗಳು ಹಾಂದಿಗೆ ಬರಬೇಕು. ಮಾಹಿತಿಗೆ ದೂ: 08262-220324 ಸಂಪರ್ಕಿಸಿ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.