ADVERTISEMENT

ಭಾರತ-ಇಂಗ್ಲೆಂಡ್ ಏಕದಿನ ಸರಣಿ: ಎರಡನೇ ಪಂದ್ಯಕ್ಕೂ ಮಳೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಸೌಥ್ಯಾಂಪ್ಟನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದೆ.

ಹೊನಲು ಬೆಳಕಿನ ಈ ಪಂದ್ಯ ಆರಂಭಕ್ಕೆ ಮುನ್ನವೇ ಮಳೆ ಸುರಿಯುತಿತ್ತು. ಹಾಗಾಗಿ ಒಂದು ಎಸೆತದ ಆಟ ಕೂಡ ನಡೆದಿರಲಿಲ್ಲ. ಭಾರತೀಯ ಕಾಲಮಾನ 10 ಗಂಟೆಯವರೆಗೆ ಪಂದ್ಯ ಶುರುವಾಗಿರಲಿಲ್ಲ. ಆಕಸ್ಮಾತ್ ಮತ್ತೆ ಮಳೆ ಅಡಚಣೆಯಾಗದಿದ್ದರೆ 23 ಓವರ್‌ಗಳ ಪಂದ್ಯ ನಡೆಯಲಿದೆ.

ಒಮ್ಮೆ ಅಂಪೈರ್‌ಗಳು ಪಿಚ್ ಪರಿಶೀಲನೆ ನಡೆಸಿ ಪಂದ್ಯ ಆರಂಭಕ್ಕೆ ಸಮಯ ನಿಗದಿ ಮಾಡಿದ್ದರು. ಆದರೆ ಮತ್ತೆ ಮಳೆ ಸರಿಯಿತು. ಮಳೆ ನಿಂತ ಮೇಲೆ ಕ್ರೀಡಾಂಗಣದಲ್ಲಿ ನೀರು ತೆಗೆಯಲು ಒಂದೂವರೆ ಗಂಟೆ ಬೇಕು. ಹಾಗಾಗಿ ಈ ಪಂದ್ಯ ನಡೆಯುವುದು ಅನುಮಾನ.

ಈ ಪಂದ್ಯಕ್ಕೆ ಒಂದು ವಾರ ಮೊದಲೇ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಆದರೆ ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದ ಕಾರಣ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಕಡಿಮೆ ಸಂಖ್ಯೆ ಪ್ರೇಕ್ಷಕರು ಕಂಡು ಬಂದರು.

ಆಟಗಾರರು ಪೆವಿಲಿುನ್‌ನಲ್ಲಿ ಕುಳಿತು ಕಾಫಿ ಹೀರುತ್ತಾ ಸಮಯ ಕಳೆದರು.
ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ಕೂಡ ಮಳೆಗೆ ಆಹುತಿಯಾಗಿತ್ತು. ಆ ಪಂದ್ಯದಲ್ಲಿ ಭಾರತಕ್ಕೆ ಗೆಲುವಿನ ಅವಕಾಶವಿತ್ತು.

ಮಾರ್ಗನ್‌ಗೆ ಗಾಯ: ಭುಜದ ನೋವಿನ ಕಾರಣ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಎಯೋನ್ ಮಾರ್ಗನ್ ಈ ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.