ಬೆಂಗಳೂರು (ಪಿಟಿಐ): ಆಸ್ಟ್ರೇಲಿಯಾ ವಿರುದ್ಧ ಫೆ. 22ರಿಂದ ಆರಂಭವಾಗಲಿರುವ ಟೆಸ್ಟ್ ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ಭಾರತ ತಂಡದ ಮೂರು ದಿನಗಳ ತರಬೇತಿ ಶಿಬಿರವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡಿದ್ದು, ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇದೇ ಮೊದಲ ಬಾರಿಗೆ ತಂಡದೊಂದಿಗೆ ಅಭ್ಯಾಸ ನಡೆಸಿದರು.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಸಚಿನ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಜತೆಗೂಡಿ 45 ನಿಮಿಷಗಳ ಕಾಲ ಅಶೋಕ್ ದಿಂಡಾ, ಭುವನೇಶ್ವರ್ ಕುಮಾರ್, ಪ್ರಜ್ಯಾನ್ ಓಜಾ ಮತ್ತು ಆರ್. ಆಶ್ವಿನ್ ಅವರ ಎಸೆತಗಳನ್ನು ಎದುರಿಸಿ ಬ್ಯಾಟಿಂಗ್ ನಡೆಸಿದರು.
ಎರಡು ತಿಂಗಳ ಕಾಲ ಭಾರತ ತಂಡದಿಂದ ದೂರ ಉಳಿದಿದ್ದ ಸಚಿನ್ ತರಬೇತಿ ಶಿಬಿರದಲ್ಲಿ ಸಹಜವಾಗಿಯೇ ಅಭ್ಯಾಸದಲ್ಲಿ ಪಾಲ್ಗೊಂಡರು. ಅಲ್ಲದೆ, ಕಳೆದ ರಣಜಿ ಟ್ರೋಫಿಯಲ್ಲಿ ಎರಡು ಶತಕಗಳನ್ನು ಬಾರಿಸುವ ಮೂಲಕ ಮರಳಿ ಆತ್ಮವಿಶ್ವಾಸವನ್ನು ಗಳಿಸಿರುವ ಅವರು ಎಂದಿನಂತೆಯೇ ಬ್ಯಾಟಿಂಗ್ ನಡೆಸಿದರು.
ಇನ್ನು ಹೊಸ ಮುಖ ಶಿಖರ್ ಧವನ್ ಮತ್ತು ಮುರಳಿ ವಿಜಯ್ ಸಹ ಕ್ರೀಡಾಂಗಣದಲ್ಲಿ ಕೆಲವೊಂದು ಮಾನಸಿಕ ಮತ್ತು ದೈಹಿಕ ಕಸರತ್ತುಗಳನ್ನು ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.