ADVERTISEMENT

ಭಾರತ ತಂಡದ ಮೊದಲ ಎದುರಾಳಿ ಐರ್ಲೆಂಡ್

ಇಂದಿನಿಂದ ವಿಶ್ವ ಹಾಕಿ ಲೀಗ್ ರೌಂಡ್-3: ಗೆಲುವಿನ ವಿಶ್ವಾಸದಲ್ಲಿ ಸರ್ದಾರ್ ಸಿಂಗ್ ಬಳಗ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST
ಭಾರತ ತಂಡ ಅನುಭವಿ ಆಟಗಾರರಾದ ಸರ್ದಾರ್ ಸಿಂಗ್ (ಎಡಬದಿ) ಮತ್ತು ಸಂದೀಪ್ ಸಿಂಗ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ 	-ಸಂಗ್ರಹ ಚಿತ್ರ
ಭಾರತ ತಂಡ ಅನುಭವಿ ಆಟಗಾರರಾದ ಸರ್ದಾರ್ ಸಿಂಗ್ (ಎಡಬದಿ) ಮತ್ತು ಸಂದೀಪ್ ಸಿಂಗ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ -ಸಂಗ್ರಹ ಚಿತ್ರ   

ರೋಟರ್‌ಡಮ್ (ಪಿಟಿಐ): ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಹಾಕಿ ಟೂರ್ನಿಗೆ ಅರ್ಹತೆ ಪಡೆಯಲು ವೇದಿಕೆಯಾಗಿರುವ ಎಫ್‌ಐಎಚ್ ವಿಶ್ವ ಲೀಗ್ ರೌಂಡ್-3 (ಸೆಮಿಫೈನಲ್) ಟೂರ್ನಿ ಗುರುವಾರ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಭಾರತ ಪುರುಷರ ತಂಡ ಐರ್ಲೆಂಡ್ ಎದುರು ಪೈಪೋಟಿ ನಡೆಸಲಿದೆ.

`ಬಿ' ಗುಂಪಿನಲ್ಲಿ ಭಾರತ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಆತಿಥೇಯ ಹಾಲೆಂಡ್, ನ್ಯೂಜಿಲೆಂಡ್ ತಂಡಗಳಿವೆ. `ಎ' ಗುಂಪಿನಲ್ಲಿ ಆಸ್ಟ್ರೇಲಿಯಾ, ಸ್ಪೇನ್, ಬೆಲ್ಜಿಯಂ ಮತ್ತು ಜರ್ಮನಿ ತಂಡಗಳಿವೆ. ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ನೆಚ್ಚಿನ ತಂಡ ಎನಿಸಿದೆ. ರ‍್ಯಾಂಕಿಂಗ್ ಪಟ್ಟಿಯಲ್ಲಿ ಎದುರಾಳಿ ಐರ್ಲೆಂಡ್ 15ನೇ ಸ್ಥಾನದಲ್ಲಿದ್ದರೆ, ಭಾರತ 11ನೇ ಸ್ಥಾನ ಹೊಂದಿದೆ.

ಕೆಲ ಯುವ ಮತ್ತು ಅನುಭವಿ ಆಟಗಾರರನ್ನು ಒಳಗೊಂಡಿರುವ ಭಾರತ ತಂಡಕ್ಕೆ ಹಿರಿಯ ಡ್ರ್ಯಾಗ್ ಫ್ಲಿಕ್ಕರ್ ಸಂದೀಪ್ ಸಿಂಗ್ ಮತ್ತು ಫಾರ್ವರ್ಡ್ ಆಟಗಾರ ಶಿವೇಂದ್ರ ಸಿಂಗ್ ಮರಳಿರುವುದು ತಂಡದ ಬಲ ಹೆಚ್ಚಿಸಿದೆ. ವಿಶ್ವ ಲೀಗ್ ರೌಂಡ್-2 ಟೂರ್ನಿಗೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಂದೀಪ್ ವಿಫಲರಾಗಿದ್ದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಶಿವೇಂದರ್ ಮತ್ತೆ ಈಗ ತಂಡಕ್ಕೆ ಮರಳಿದ್ದಾರೆ.

ಮಿಡ್‌ಫೀಲ್ಡರ್ ಸರ್ದಾರ್ ಸಿಂಗ್ ಭಾರತ ತಂಡವನ್ನು ಮುನ್ನಡೆಸಲಿದ್ದು, ಡ್ರ್ಯಾಗ್‌ಫ್ಲಿಕ್ಕರ್ ಕರ್ನಾಟಕದ ವಿ.ಆರ್. ರಘುನಾಥ್ ಉಪ ನಾಯಕರಾಗಿದ್ದಾರೆ. ಆದರೆ, ಪ್ರಮುಖ ಮಿಡ್‌ಫೀಲ್ಡರ್‌ಗಳಾದ ದಾನಿಶ್ ಮುಜ್ತಬಾ ಮತ್ತು  ಗುರ್ವಿಂದರ್ ಸಿಂಗ್ ಚಾಂಡಿ ಗಾಯದ ಕಾರಣ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇದು ಭಾರತಕ್ಕೆ ಕೊಂಚ ಹಿನ್ನಡೆ ಉಂಟು ಮಾಡಿದೆ.

ಗೆಲುವಿನೊಂದಿಗೆ ಆರಂಭ ಪಡೆದರೆ ಮುಂದಿನ ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ತೋರಬಹುದು ಎನ್ನುವ ಲೆಕ್ಕಾಚಾರ ಹೊಂದಿರುವ ಭಾರತ ತಂಡ ಕ್ರಮವಾಗಿ ಹಾಲೆಂಡ್ (ಜೂನ್ 15), ನ್ಯೂಜಿಲೆಂಡ್ (ಜೂನ್ 17) ಎದುರು ಪಂದ್ಯಗಳನ್ನಾಡಲಿದೆ. ಭರವಸೆಯ ಆಟಗಾರರೆನಿಸಿರುವ ಆಕಾಶ್‌ದೀಪ್ ಸಿಂಗ್, ಮನ್‌ದೀಪ್ ಸಿಂಗ್, ಪೆನಾಲ್ಟಿ ಕಾರ್ನರ್ ಪರಿಣತರಾದ ಸಂದೀಪ್ ಮತ್ತು ರಘುನಾಥ್ ಭಾರತದ ಶಕ್ತಿ ಎನಿಸಿದ್ದಾರೆ.

`ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಬೇಕೆನ್ನುವುದು ಎಲ್ಲ ತಂಡಗಳ ಗುರಿಯಾಗಿದೆ. ಆದ್ದರಿಂದ ಎಲ್ಲರೂ ಪ್ರಬಲ ಪೈಪೋಟಿ ನೀಡುತ್ತಾರೆ. ನಮ್ಮ ತಂಡವೂ ಉತ್ತಮ ಪ್ರದರ್ಶನ ತೋರಲಿದೆ' ಎಂದು ಭಾರತ ತಂಡದ ಮುಖ್ಯ ಕೋಚ್ ಮೈಕಲ್ ನಾಬ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

`ಎಲ್ಲ ಪಂದ್ಯಗಳನ್ನು ಸವಾಲಾಗಿ ಸ್ವೀಕರಿಸಿ ಆಡಬೇಕಿದೆ. ಮಾನಸಿಕ ಮತ್ತು ದೈಹಿಕವಾಗಿ ನಾವು ಫಿಟ್ ಅಗಿದ್ದೇವೆ' ಎಂದು ನಾಯಕ ಸರ್ದಾರ್ ನುಡಿದರು.

ಮಹಿಳಾ ತಂಡಕ್ಕೆ ನ್ಯೂಜಿಲೆಂಡ್ ಸವಾಲು: ರಿತು ರಾಣಿ ನೇತೃತ್ವದ ಭಾರತ ಮಹಿಳಾ ತಂಡ ಗುರುವಾರ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ.

ಭಾರತ ಮಹಿಳಾ ತಂಡ ಮುಂದಿನ ಪಂದ್ಯಗಳಲ್ಲಿ ಬೆಲ್ಜಿಯಂ (ಜೂನ್ 14) ಮತ್ತು ಜರ್ಮನಿ (ಜೂನ್ 16) ಎದುರು ಪೈಪೋಟಿ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.