ADVERTISEMENT

ಮೆಸ್ಸಿ, ರೊನಾಲ್ಡೊ ಜೊತೆ ಹೋಲಿಕೆ ಬೇಡ

ಭಾರತ ಫುಟ್‌ಬಾಲ್‌ ತಂಡದ ನಾಯಕ ಚೆಟ್ರಿ ಮನದಾಳ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST
ಸ್ಟಾರ್‌ ‍ಪಿಕ್‌ ಫ್ಯಾಂಟಸಿ ಗೇಮ್‌ನ ಪ್ರಚಾರ ರಾಯಭಾರಿ ಸುನಿಲ್‌ ಚೆಟ್ರಿ (ಬಲ) ಮತ್ತು ಸ್ಟಾರ್‌ ಪಿಕ್‌ ಸಂಸ್ಥೆಯ ಸಿಇಒ ತ್ರಿಗಮ್‌ ಮುಖರ್ಜಿ ಅವರು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ
ಸ್ಟಾರ್‌ ‍ಪಿಕ್‌ ಫ್ಯಾಂಟಸಿ ಗೇಮ್‌ನ ಪ್ರಚಾರ ರಾಯಭಾರಿ ಸುನಿಲ್‌ ಚೆಟ್ರಿ (ಬಲ) ಮತ್ತು ಸ್ಟಾರ್‌ ಪಿಕ್‌ ಸಂಸ್ಥೆಯ ಸಿಇಒ ತ್ರಿಗಮ್‌ ಮುಖರ್ಜಿ ಅವರು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಏಷ್ಯಾದ ಅಗ್ರ 10 ತಂಡಗಳಲ್ಲಿ ಸ್ಥಾನ ಪಡೆಯುವತ್ತ ನಾವು ಮೊದಲು ಚಿತ್ತ ಹರಿಸಬೇಕು. ಈ ನಿಟ್ಟಿನಲ್ಲಿ ಇರಾನ್‌, ಜಪಾನ್‌, ಸೌದಿ ಅರೇಬಿಯಾ, ಆಸ್ಟ್ರೇಲಿಯಾದಂತಹ ಪ್ರಬಲ ತಂಡಗಳ ಜೊತೆ ಸತತವಾಗಿ ಪಂದ್ಯಗಳನ್ನು ಆಡಬೇಕು. ಜೊತೆಗೆ ವಿದೇಶಗಳಲ್ಲೂ ಹೆಚ್ಚು ಪಂದ್ಯಗಳನ್ನು ಆಡಬೇಕು. ಇದರಿಂದ ಆಟಗಾರರ ಸಾಮರ್ಥ್ಯ ವೃದ್ಧಿಸಲಿದೆ’ ಎಂದು ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅಭಿಪ್ರಾಯ ಪಟ್ಟರು.

ಸ್ಟಾರ್‌ ಪಿಕ್‌ ಫ್ಯಾಂಟಸಿ ಗೇಮ್‌ನ ಪ್ರಚಾರ ರಾಯಭಾರಿಯಾಗಿ ನೇಮಕ ವಾಗಿರುವ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫಿಫಾ ವಿಶ್ವಕಪ್‌ನಲ್ಲಿ ಭಾರತ ಆಡುವುದು ಯಾವಾಗ ಎಂಬ ‍ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

‘ಭಾರತದಲ್ಲಿ ಫುಟ್‌ಬಾಲ್‌, ಪ್ರಗ ತಿಯ ಪಥದಲ್ಲಿ ಸಾಗುತ್ತಿದೆ.  ಆದರೆ ಕ್ರೀಡಾಂಗಣಕ್ಕೆ ಬಂದು ಪಂದ್ಯಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಮುಂಬೈ ಫುಟ್‌ಬಾಲ್‌ ಅರೆನಾದಲ್ಲಿ ನಡೆದ ಇಂಟರ್‌ ಕಾಂಟಿನೆಂಟಲ್‌ ಕಪ್‌ ಟೂರ್ನಿಯ ಪಂದ್ಯದ ವೇಳೆ ಮೈದಾನದ ಗ್ಯಾಲರಿಯಲ್ಲಿ ಬೆರಳೆಣಿಕೆಯಷ್ಟು ಪ್ರೇಕ್ಷಕರು ಇದ್ದರು.

ADVERTISEMENT

ಅದನ್ನು ನೋಡಿ ಬೇಸರವಾಗಿತ್ತು. ಹೀಗಾಗಿ, ಹೆಚ್ಚು ಸಂಖ್ಯೆಯಲ್ಲಿ ಮೈದಾ ನಕ್ಕೆ ಬಂದು ಪಂದ್ಯ ನೋಡುವಂತೆ ವಿಡಿಯೊ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದೆ ’ ಎಂದರು.

‘ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಈ ಬಾರಿಯ ಫಿಫಾ ವಿಶ್ವಕಪ್‌ನ ಆಕರ್ಷಣೆಯಾಗಿದ್ದಾರೆ. ಬೆಲ್ಜಿಯಮ್‌ನ ಕೆವಿನ್‌ ಡಿ ಬ್ರ್ಯೂನ್‌ ಮತ್ತು ಬ್ರೆಜಿಲ್‌ನ ನೇಮರ್‌ ಅವರ ಆಟ ನೋಡಲೂ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಬ್ರೆಜಿಲ್‌, ಇಂಗ್ಲೆಂಡ್‌ ಮತ್ತು ಅರ್ಜೆಂಟೀನಾ ಪ್ರಶಸ್ತಿ ಗೆಲ್ಲಬಹುದು. ಏಷ್ಯಾದ ತಂಡಗಳೂ ಪರಿಣಾಮಕಾರಿ ಸಾಮರ್ಥ್ಯ ತೋರುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

‘ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ ಒಂದು ತಿಂಗಳು ನಡೆಯುತ್ತದೆ. ಈ ಅವಧಿಯಲ್ಲಿ ಫುಟ್‌ಬಾಲ್‌ ಪ್ರೇಮಿಗಳು ಪ್ರತಿ ದಿನ ಸ್ಟಾರ್‌ ಪಿಕ್‌ನಲ್ಲಿ ತಮ್ಮ ಕನಸಿನ ತಂಡವನ್ನು ಆಯ್ಕೆ ಮಾಡಿ ಹೆಚ್ಚು ಪಾಯಿಂಟ್ಸ್‌ ಗಳಿಸಬಹುದು. ಈ ಮೂಲಕ ₹ 20 ಕೋಟಿವರೆಗೆ ಬಹುಮಾನ ಗೆಲ್ಲಬಹುದು’ ಎಂದು ಸ್ಟಾರ್‌ ಪಿಕ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ತ್ರಿಗಮ್‌ ಮುಖರ್ಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.