ADVERTISEMENT

ರಣಜಿ ಕ್ರಿಕೆಟ್: ಉತ್ತಮ ಮೊತ್ತ ದಾಖಲಿಸಿದ ರಾಜಸ್ತಾನ ತಂಡ

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 14:20 IST
Last Updated 13 ಜನವರಿ 2011, 14:20 IST

ವಡೋದರಾ: ರಾಜಸ್ತಾನ ತಂಡದವರು ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಎರಡನೇ ದಿನವಾದ ಬುಧವಾರ ಉತ್ತಮ ಮೊತ್ತವನ್ನು ದಾಖಲಿಸಿದರು.

ನಾಯಕ ಹೃಷಿಕೇಶ್ ಕಾನಿಟ್ಕರ್ ಮತ್ತು ರಾಬಿನ್ ಬಿಸ್ತ್ ಅವರು ಮೊದಲ ದಿನ ಗಳಿಸಿದ್ದ ಆರ್ಧ ಶತಕದ ನೆರವಿನಿಂದ ಉತ್ತಮ ಮೊತ್ತದತ್ತ ದಾಪುಗಾಲು ಹಾಕಿದ್ದ ರಾಜಸ್ತಾನ ತಂಡಕ್ಕೆ ಮಧ್ಯಮ ಕ್ರಮಾಂಕದ ಆಟಗಾರರು ನೆರವಾದರು. ಪರಿಣಾಮವಾಗಿ ಎರಡನೇ ದಿನದಾಟದ ಅಂತ್ಯಕ್ಕೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಳ್ಳುವ ಹೊತ್ತಿಗೆ ಅದು 394 ರನ್ ಕಲೆಹಾಕಿತು.
ಇದಕ್ಕೆ ಪ್ರತ್ಯುತ್ತರವಾಗಿ ಬರೋಡಾ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 30 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿತು.

ಮೊದಲ ದಿನ ಮೂರು ವಿಕೆಟ್ ಕಳೆದುಕೊಂಡು 198 ರನ್ ಗಳಿಸಿದ್ದ ರಾಜಸ್ತಾನ ತಂಡಕ್ಕೆ ರಶ್ಮಿ ಪರೀದಾ (56) ಹಾಗೂ ಅಶೋಕ್ ಮನೇರಿಯಾ (45) ಬಲ ನೀಡಿದರು. ಅವರ ಸಮಯೋಚಿತ ಬ್ಯಾಟಿಂಗ್ ಫಲವಾಗಿ ತಂಡದ ಮೊತ್ತವು 350 ರನ್ ಗಡಿ ದಾಟಿತು. ಎದುರಾಳಿ ಬರೋಡಾ ತಂಡದ ಭಾರ್ಗವ್ ಭಟ್ ಐದು ವಿಕೆಟ್ ಕಬಳಿಸಿ ಗಮನ ಸೆಳೆದರು.

ಭಾರ್ಗವ್ ಅವರು ತಮ್ಮ ಕರಾರುವಕ್ಕಾದ ಎಸೆತಗಳ ಮೂಲಕ ರಾಜಸ್ತಾನ ತಂಡದ ಕೊನೆಯ ಕ್ರಮಾಂಕದಲ್ಲಿ ಬಂದ ಆಟಗಾರರು ಎರಡಂಕಿಯ ಮೊತ್ತ ದಾಟದಂತೆ ನೋಡಿಕೊಂಡರು. ಇಲ್ಲವಾದರೆ ರಾಜಸ್ತಾನ 400 ಗಡಿ ದಾಟುತ್ತಿತ್ತು. ಭಾರ್ಗವ್‌ಗೆ ಸಾಥ್ ನೀಡಿದ ಇನ್ನೊಬ್ಬ ಬೌಲರ್ ಸ್ವಪ್ನಿಲ್ ಸಿಂಗ್ ಕೂಡ ರಾಜಸ್ತಾನ ತಂಡದ ಮೊತ್ತವನ್ನು ಕಟ್ಟಿಹಾಕಲು ನೆರವಾದರು. ಇವರು ಸೆಮಿಫೈನಲ್ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರು.

ಸಂಕ್ಷಿಪ್ತ ಸ್ಕೋರ್: ರಾಜಸ್ತಾನ ಮೊದಲ ಇನಿಂಗ್ಸ್  147.1 ಓವರ್‌ಗಳಲ್ಲಿ 394 (ರಾಬಿನ್ ಬಿಸ್ತ್ 77, ವಿವೇಕ್ ಯಾದವ್ 27, ರಶ್ಮಿ ಪರೀದಾ 56, ಅಶೋಕ್ ಮನೇರಿಯಾ 45, ರೋಹಿತ್ ಜಲಾನಿ 9, ದೀಪಕ್ ಚಹರ್ 8, ಪಂಕಜ್ ಸಿಂಗ್ 6: ಭಾರ್ಗವ್ ಬಟ್ 103ಕ್ಕೆ5, ಸ್ವಪ್ನಿಲ್ ಸಿಂಗ್ 54ಕ್ಕೆ2, ಆದಿತ್ಯ ವಾಘ್ಮೋಡೆ 33ಕ್ಕೆ1).

ಬರೋಡಾ: ಮೊದಲ ಇನಿಂಗ್ಸ್ 30 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 73 (ಕಾನರ್ ವಿಲಿಯಮ್ಸ್ 17, ಜಯಕೃಷ್ಣ ಕೊಲ್ಸವಾಲಾ 46 ಬ್ಯಾಟಿಂಗ್, ಕೇದಾರ್ ದೇವ್ಧರ್ ಬ್ಯಾಟಿಂಗ್ 6; ವಿವೇಕ್ ಯಾದವ್ 7ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.