ADVERTISEMENT

ರಾಜ್ಯಮಟ್ಟದ ಸೈಕಲ್ ರ‌್ಯಾಲಿ: ಬಿಜಾಪುರ ಸ್ಪರ್ಧಿಗಳ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 19:30 IST
Last Updated 25 ಜನವರಿ 2012, 19:30 IST
ರಾಜ್ಯಮಟ್ಟದ ಸೈಕಲ್ ರ‌್ಯಾಲಿ: ಬಿಜಾಪುರ ಸ್ಪರ್ಧಿಗಳ ಪಾರಮ್ಯ
ರಾಜ್ಯಮಟ್ಟದ ಸೈಕಲ್ ರ‌್ಯಾಲಿ: ಬಿಜಾಪುರ ಸ್ಪರ್ಧಿಗಳ ಪಾರಮ್ಯ   

ಚಿಕ್ಕಮಗಳೂರು: ಜಿಲ್ಲಾ ಗಣರಾಜ್ಯೋತ್ಸವ ಆಚರಣಾ ಸಮಿತಿ 62ನೇ ಗಣರಾಜ್ಯೋತ್ಸವ ಅಂಗವಾಗಿ ಮಲೆನಾಡಿನ ತಿರುವು ರಸ್ತೆಗಳಲ್ಲಿ ಆಯೋಜಿಸಿದ್ದ 45ನೇ ರಾಜ್ಯಮಟ್ಟದ ಸೈಕಲ್ ಸ್ಪರ್ಧೆಯಲ್ಲಿ ಬಿಜಾಪುರ ಜಿಲ್ಲೆಯ ಸೈಕಲ್ ಸ್ಪರ್ಧಿಗಳು ಮೇಲುಗೈ ಸಾಧಿಸಿದರು.

ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರದಿಂದ ಚಿಕ್ಕಮಗಳೂರುವರೆಗೆ 56 ಕಿ.ಮೀ. ದೂರದ ಸೈಕಲ್ ಸ್ಪರ್ಧೆಯ ಪುರುಷರ ವಿಭಾಗ (ಗೇರು ಸಹಿತ)ದಲ್ಲಿ ಬಾಗಲಕೋಟೆಯ ಸಾಖು ಪಿ.ಗಾಣಿಗೇರ್ 1:15.51 ಸೆಕೆಂಡುಗಳಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದುಕೊಂಡರು.

ಇದೇ ಜಿಲ್ಲೆಯ ಲಕ್ಕಪ್ಪ ಬಿ.ಕುರುಣಿ 1:15.72 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಇದೇ ಜಿಲ್ಲೆಯ ಮಾದೇಶ ಎಸ್.ರೊಳ್ಳಿ 1:16.51 ಸೆಕೆಂಡುಗಳಲ್ಲಿ ಕ್ರಮಿಸಿ ತೃತೀಯ ಸ್ಥಾನ ಪಡೆದರು.
ಬಾಗಲಕೋಟೆಯ ಬಸಪ್ಪ ಬಿ.ಕಡಪಟ್ಟಿ 1:16.75 ನಾಲ್ಕನೇಯ ಹಾಗೂ ಬಿಜಾಪುರ ಜಿಲ್ಲೆಯ ಲಕ್ಷ್ಮಣ್ ಸಿ.ಕುರುಣಿ 1:16.80 ಸೆಕೆಂಡುಗಳಲ್ಲಿ ಗುರಿ ತಲುಪಿ 5ನೇ ಸ್ಥಾನ ಪಡೆದರು.

ಮಹಿಳಾ ವಿಭಾಗ: ಮೂಡಿಗೆರೆಯಿಂದ ಚಿಕ್ಕಮಗಳೂರುವರೆಗೆ ನಡೆದ 30 ಕಿ.ಮೀ. ಸ್ಪರ್ಧೆಯಲ್ಲಿ (ಗೇರು ಸಹಿತ) ಬಿಜಾಪುರದ ಗೀತಾಂಜಲಿ ಜೋತಪ್ಪನವರ್ 1:10.15 ಸೆಕೆಂಡುಗಳಲ್ಲಿ ನಿಗದಿತ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು.

ಇದೇ ಜಿಲ್ಲೆಯ ಶಾಹಿರಾ ಪಿ.ಅತ್ತಾರ್ 1:11.12 ಸೆಕೆಂಡುಗಳಲ್ಲಿ ದ್ವಿತೀಯ ಸ್ಥಾನ, ಇದೇ ಜಿಲ್ಲೆಯ ಪರಿಯಾಲ ಜಿ.ಜಮಾದಾರ್ 1:12.16ಕ್ಕೆ ತೃತೀಯ ಸ್ಥಾನ, ಬಿಜಾಪುರದ ಸೀಮಾ ಪಿ.ಅಡಗದ್ 1:12.30 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ನಾಲ್ಕನೇಯ ಹಾಗೂ ವಿಜಾ ಪುರದ ಶಾಹಿರಾಬಾನು 1:13 ನಿಮಿಷದಲ್ಲಿ ಐದನೇ ಸ್ಥಾನ ಪಡೆದರು.
ಗೇರು ರಹಿತ ಸ್ಪರ್ಧೆ ಪುರುಷರ ವಿಭಾಗ: ಹಾಂದಿಯಿಂದ ಚಿಕ್ಕಮಗಳೂರುವರೆಗೆ ನಡೆದ 21 ಕಿ.ಮೀ. ಸ್ಪರ್ಧೆಯಲ್ಲಿ ಮೂರು ಸ್ಥಾನಗಳು ಬಿಜಾಪುರದ ಪಾಲಾದವು.

ಬಿ.ಎಂ.ಸಂಗಮೇಶ್ ಪ್ರಥಮ ((39.53 ಸೆ.), ಯಲಗುರೇಶ್ ಐ.ಗಡ್ಡಿ ದ್ವಿತೀಯ (39.58 ಸೆ), ರಾಮಪ್ಪ ಎಂ.ಅಂಬಿ ತೃತೀಯ (39.80 ಸೆ.), ಚಿಕ್ಕಮಗಳೂರಿನ ರಾಂಪುರದ ರಮೇಶ್ ನಾಲ್ಕನೇಯ ಸ್ಥಾನ (40.26 ಸೆ.) ಪಡೆದರು.

ಸೈಕಲ್ ಸ್ಪರ್ಧೆಗೆ  ಶಾಸಕ ಎಂ.ಪಿ.ಕುಮಾರಸ್ವಾಮಿ ಚಾಲನೆ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸುತ್ತಮುತ್ತಲಿನ ನಾಗರಿಕರು ಸ್ಪರ್ಧೆ ವೀಕ್ಷಿಸಲು ರಸ್ತೆಯುದ್ದಕ್ಕೂ ಅಲ್ಲಲ್ಲಿ ಸಾಲುಗಟ್ಟಿ ನಿಂತಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.