ADVERTISEMENT

ರಾಜ್ ಕುಂದ್ರಾ ಬಂಧನ ಸಾಧ್ಯತೆ

ಸ್ಪಾಟ್ ಫಿಕ್ಸಿಂಗ್: ಸೋಮವಾರ ಬಿಸಿಸಿಐ ತುರ್ತು ಸಭೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST
ರಾಜ್ ಕುಂದ್ರಾ , ರಾಜಸ್ತಾನ ರಾಯಲ್ಸ್ ತಂಡದ ಮಾಲೀಕ
ರಾಜ್ ಕುಂದ್ರಾ , ರಾಜಸ್ತಾನ ರಾಯಲ್ಸ್ ತಂಡದ ಮಾಲೀಕ   

ನವದೆಹಲಿ(ಐಎಎನ್‌ಎಸ್/ಪಿಟಿಐ): `ನಾನೂ ಬೆಟ್ಟಿಂಗ್ ಆಡಿದ್ದೇನೆ' ಎಂದು ತನಿಖೆಯ ವೇಳೆ ಪೊಲೀಸರಿಗೆ ರಾಜಸ್ತಾನ ರಾಯಲ್ಸ್ ತಂಡದ ಮಾಲೀಕ ರಾಜ್ ಕುಂದ್ರಾ ಹೇಳಿದ್ದರಿಂದ ಸ್ಪಾಟ್ ಫಿಕ್ಸಿಂಗ್ ಹಗರಣ ಹೊಸ ಆಯಾಮ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಚೆನ್ನೈನಲ್ಲಿ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.
ಕುಂದ್ರಾ ಅವರು ನಟಿ ಹಾಗೂ ರಾಯಲ್ಸ್‌ನ ಒಡತಿಯೂ ಆದ ಶಿಲ್ಪಾ ಶೆಟ್ಟಿ ಅವರ ಪತಿ.

ಬುಧವಾರ 11 ಗಂಟೆ ಕಾಲ ಪೊಲೀಸರು ಕುಂದ್ರಾ ವಿಚಾರಣೆ ನಡೆಸಿದ್ದರು. `ಐಪಿಎಲ್‌ನಲ್ಲಿ ಬೆಟ್ಟಿಂಗ್ ನಡೆಸಿ ನಾನೂ ಸಾಕಷ್ಟು ಹಣ ಕಳೆದುಕೊಂಡಿದ್ದೇನೆ' ಎಂದೂ ಕುಂದ್ರಾ ಬಾಯಿ ಬಿಟ್ಟಿದ್ದಾರೆ.

`ಕುಂದ್ರಾ ಅವರ `ವ್ಯವಹಾರ'ದ ಪಾಲುದಾರ ಅಹಮದಾಬಾದ್ ಮೂಲದ ಉದ್ಯಮಿ ಉಮೇಶ್ ಗೋಯೆಂಕಾ ಕೂಡಾ ಕಳೆದ ಎರಡು ವರ್ಷಗಳಿಂದ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ' ಎಂಬುದೂ ವಿಚಾರಣೆ ವೇಳೆ ತಮಗೆ ಗೊತ್ತಾಗಿದೆ ಎಂದು ದೆಹಲಿ ಪೊಲೀಸ್ ಕಮೀಷನರ್ ನೀರಜ್ ಕುಮಾರ್ ತಿಳಿಸಿದ್ದಾರೆ.  ಉಕ್ಕು ಉದ್ಯಮದಲ್ಲಿ ಕುಂದ್ರಾ ಶೇ. 42ರಷ್ಟು ಮತ್ತು ಉಮೇಶ್ ಶೇ. 16ರಷ್ಟು ಷೇರುಗಳನ್ನು ಹೊಂದಿದ್ದಾರೆ. ಕುಂದ್ರಾ ಮೂರು ವರ್ಷಗಳಿಂದ ಬೆಟ್ಟಿಂಗ್ ಆಡಿ ಒಂದು ಕೋಟಿ ರೂ. ಹಣ  ಕಳೆದುಕೊಂಡಿರುವುದು ಗೊತ್ತಾಗಿದೆ.

`ರಾಜಸ್ತಾನ ರಾಯಲ್ಸ್ ತಂಡದಲ್ಲಿ ಕುಂದ್ರಾ ಅವರ ಪಾತ್ರ ಅತ್ಯಂತ ಪ್ರಮುಖವಾದದ್ದು. ಅದ್ದರಿಂದ ಅವರನ್ನು ಬಂಧಿಸಲು ನಿರ್ಧರಿಸಿದ್ದೇವೆ. ಆದರೆ, ಅದಕ್ಕೂ ಮುನ್ನ ಮತ್ತೊಮ್ಮೆ ಅವರನ್ನು ವಿಚಾರಣೆಗೆ ಒಳಪಡಿಸುತ್ತೇವೆ. ಉಮೇಶ್ ಮತ್ತು ಕುಂದ್ರಾ ಅವರಿಗೆ ದೋಷ ಮುಕ್ತಗೊಳಿಸಿಲ್ಲ ಎಂದೂ ಅವರು ವಿವರಿಸಿದರು.

ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರು ಕುಂದ್ರಾ ಅವರ ಪಾಸ್‌ಪೋರ್ಟ್ ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವಿಷಯ ಕುರಿತು ಚರ್ಚೆ ನಡೆಸಲು ಜೂನ್ 10ರಂದು ತುರ್ತು ಸಭೆ ಕರೆದಿದೆ.

`ಯಾವುದೇ ಸಾಕ್ಷಿಗಳಿಲ್ಲದೇ ಮಾಧ್ಯಮಗಳು ವರದಿ ಪ್ರಕಟಿಸುತ್ತಿವೆ. ವಾಸ್ತವಾಂಶ ಏನಿದೆ ಎಂಬುದುನ್ನು ತಿಳಿದುಕೊಳ್ಳದೇ ವರದಿ ಪ್ರಸಾರ ಮಾಡುತ್ತಿವೆ' ಎಂದು ಶಿಲ್ಪಾ ಶೆಟ್ಟಿ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರನಾಗಿರುವ ರಾಯಲ್ಸ್ ತಂಡದ ಇನ್ನೊಬ್ಬ ಆಟಗಾರ ಸಿದ್ಧಾರ್ಥ್ ತ್ರಿವೇದಿ ಸಹ ಬುಧವಾರ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ `ಕುಂದ್ರಾ ಅವರ ಉದ್ದಿಮೆ ಪಾಲುದಾರ ಉಮೇಶ್ ಅವರು ತಂಡ ಮತ್ತು ಪಿಚ್‌ಗೆ ಸಂಬಂಧಿಸಿದಂತೆ ನನ್ನಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು' ಎನ್ನುವ ಆಘಾತಕಾರಿ ಮಾಹಿತಿಯನ್ನು ಅವರು ಬಹಿರಂಗಗೊಳಿಸಿದ್ದಾರೆ. ಇದರಿಂದ ಸ್ಪಾಟ್ ಫಿಕ್ಸಿಂಗ್ ಪ್ರಕರಣ ನಿಧಾನವಾಗಿ ಇನ್ನಷ್ಟು  ಒಳಸುಳಿಗಳನ್ನು ಬಿಚ್ಚಿಕೊಳ್ಳುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು `ತ್ರಿವೇದಿ ನೀಡಿದ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗಿದೆ. ತಂಡ ಹಾಗೂ ಪಿಚ್‌ಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕಲಾಗುವುದು' ಎಂದು ನುಡಿದರು.

ವಿಸ್ತರಣೆ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಬುಕ್ಕಿಗಳಾದ ಅಶ್ವಿನ್ ತಲವಾರ್, ಟಿಂಕು ಸೇರಿದಂತೆ ಇನ್ನಿಬ್ಬರ  ಪೊಲೀಸ್ ಕಸ್ಟಡಿ ಅವಧಿಯನ್ನು ಸ್ಥಳೀಯ ನ್ಯಾಯಾಲಯ ಸೋಮವಾರದವರೆಗೆ ವಿಸ್ತರಿಸಿದೆ.

ರಾಜ್ ಕುಂದ್ರಾ ಸಿಡಿಮಿಡಿ
ನವದೆಹಲಿ (ಪಿಟಿಐ):
ಪೊಲೀಸರ ಎದುರು ತನಿಖೆಗೆ ಹಾಜರಾಗಿ ಬಂದ ನಂತರ ರಾಜ್ ಕುಂದ್ರಾ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

`ಪೊಲೀಸರು ನನ್ನಿಂದ ಕೆಲ ವಿಷಯಗಳನ್ನು ತಿಳಿದುಕೊಳ್ಳುವ ಕಾರಣಕ್ಕಾಗಿ ಬರ ಹೇಳಿದ್ದರು.  ವಿಚಾರಣೆಗೆ ಹಾಜರಾಗಿ ನನಗೆ ಗೊತ್ತಿದ್ದ ಮಾಹಿತಿ ನೀಡಿದೆ. ಇದನ್ನೇ ಮಾಧ್ಯಮಗಳು ಅತಿರಂಜಕವಾಗಿ ವರದಿ ಮಾಡಿ ಇಲ್ಲಸಲ್ಲದ ಸುದ್ದಿಗಳನ್ನು ನೀಡುತ್ತಿವೆ' ಎಂದು ಕುಂದ್ರಾ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪತ್ನಿ ಶಿಲ್ಪಾ ಶೆಟ್ಟಿ ಕೂಡಾ ದನಿಗೂಡಿಸಿದ್ದಾರೆ.

`ಪೊಲೀಸರು ನನಗೇನು ಬಂಧನದ ವಾರೆಂಟ್ ಕಳುಹಿಸಿದ್ದರೇ' ಎಂದು ಖಾರವಾಗಿ ಪ್ರಶ್ನಿಸಿರುವ ರಾಯಲ್ಸ್ ಮಾಲೀಕ `ಮಾಧ್ಯಮಗಳು ಇಲ್ಲಸಲ್ಲದ ಸುದ್ದಿಗಳನ್ನು ನೀಡುವುದನ್ನು ಮೊದಲು ನಿಲ್ಲಿಸಬೇಕು' ಎಂದು ಬರೆದಿದ್ದಾರೆ.

*  ಬೆಟ್ಟಿಂಗ್ ಆಡಿ ನಾನು ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ಐಪಿಎಲ್‌ನಲ್ಲಿ ಬೆಟ್ಟಿಂಗ್ ನಡೆಯುತ್ತಿದೆ ಎಂದು ರಾಜ್ ಕುಂದ್ರಾ ವಿಚಾರಣೆ ವೇಳೆ ಹೇಳಿದ್ದಾರೆ   - ನೀರಜ್ ಕುಮಾರ್, ದೆಹಲಿ ಪೊಲೀಸ್ ಕಮೀಷನರ್

ADVERTISEMENT

* ಕುಂದ್ರಾ ಬೆಟ್ಟಿಂಗ್ ನಡೆಸುತ್ತಿದ್ದರು ಎನ್ನುವ ವಿಷಯವೇ ನಾಚಿಕೆಗೇಡು. ಬೆಟ್ಟಿಂಗ್ ಕಾನೂನು ಬದ್ಧ ಮಾಡಲು ಇದು ಸೂಕ್ತ ಸಮಯ  -ಜಯವಂತ ಲೇಲೆ, ಬಿಸಿಸಿಐ ಮಾಜಿ ಕಾರ್ಯದರ್ಶಿ

* ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ಇಬ್ಬರು ನಿವೃತ್ತ ನ್ಯಾಯಮೂರ್ತಿಗಳನ್ನೊಳಗೊಂಡ ಸಮಿತಿಯೇ ತನಿಖೆ ನಡೆಸಲಿದೆ. ಸಮಿತಿಯಲ್ಲಿ ಬಿಸಿಸಿಐ ಸದಸ್ಯರು ಇರುವುದಿಲ್ಲ  - ಜಗಮೋಹನ್ ದಾಲ್ಮಿಯ, ಬಿಸಿಸಿಐ ಹಂಗಾಮಿ ಅಧ್ಯಕ್ಷ

*ಉಮೇಶ್ ಗೊಯಂಕಾ ಅವರು ತಂಡ ಹಾಗೂ ಪಿಚ್‌ಗೆ ಸಂಬಂಧಿಸಿದಂತೆ ನನ್ನ ಬಳಿ ಮಾಹಿತಿ ಕೇಳುತ್ತಿದ್ದರು  -ಸಿದ್ಧಾರ್ಥ್ ತ್ರಿವೇದಿ, ರಾಜಸ್ತಾನ ರಾಯಲ್ಸ್ ವೇಗಿ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.