ADVERTISEMENT

ರಾಷ್ಟ್ರೀಯ ಟೆನಿಸ್ : ನಿಕ್ಷೇಪ್ ಮಡಿಲಿಗೆ ಚೊಚ್ಚಲ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:30 IST
Last Updated 20 ಅಕ್ಟೋಬರ್ 2012, 19:30 IST

ಬೆಂಗಳೂರು: `ವರ್ಷದಲ್ಲಿ ಎರಡು ಸಲ ಮಾತ್ರ ನಡೆಯುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲಬೇಕೆಂದು ಕನಸು ಕಂಡಿದ್ದೆ. ಈಗ ಕನಸು ನನಸಾದ ಖುಷಿ ಇದೆ...~

- ನವದೆಹಲಿಯಲ್ಲಿ ನಡೆದ ಫೆನೆಸ್ತಾ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನ 14 ವರ್ಷದೊಳಗಿನವರ ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದ ಕರ್ನಾಟಕದ ಬಿ.ಆರ್. ನಿಕ್ಷೇಪ್ ಅವರ ಮನದಾಳದ ಮಾತಿದು.

 ಶನಿವಾರ ನಡೆದ ಫೈನಲ್‌ನಲ್ಲಿ ನಿಕ್ಷೇಪ್ 6-1, 6-0ರಲ್ಲಿ ಪಶ್ಚಿಮ ಬಂಗಾಳದ ಸನಿಲ್ ಜಗ್ತೈನಿ ಅವರನ್ನು ಮಣಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡರು. `ಈ ವರ್ಷ ಚೆನ್ನೈಯಲ್ಲಿ ನಡೆದ ವರ್ಷದ ಮೊದಲ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಕಂಡಿದ್ದೆ. ಆದ್ದರಿಂದ ಈ ಸಲವಾದರೂ ಪ್ರಶಸ್ತಿ ಜಯಿಸಬೇಕೆಂದು ದೃಢವಾಗಿ ನಿರ್ಧರಿಸಿದ್ದೆ. ಅದಕ್ಕಾಗಿ ಕೆಎಸ್‌ಎಲ್‌ಟಿಎಯಲ್ಲಿರುವ ಎಚ್‌ಪಿಟಿಸಿಯಲ್ಲಿ ಪ್ರತಿದಿನವೂ ಮೂರು ಗಂಟೆಗೂ ಹೆಚ್ಚು ಕಾಲ ಅಭ್ಯಾಸ ನಡೆಸುತ್ತಿದ್ದೆ. ಈ ಸಾಧನೆಯ ಶ್ರೇಯ ಪಾಲಕರು ಹಾಗೂ ರಾಜ್ಯ ಟೆನಿಸ್ ಸಂಸ್ಥೆಗೆ ಸಲ್ಲಬೇಕು~ ಎಂದು ನಿಕ್ಷೇಪ್ `ಪ್ರಜಾವಾಣಿ~ ಜೊತೆ ಸಂತಸ ಹಂಚಿಕೊಂಡರು.

`ಎಚ್‌ಪಿಟಿಸಿಯಲ್ಲಿ ತರಬೇತಿ ನೀಡಿದ ಸುಭಾಷ್‌ದಾಸ್, ಆರ್ಮುಗಮ್ ಫಿಟ್‌ನೆಸ್ ಕಾಪಾಡಿಕೊಳ್ಳಲು ನೆರವಾದ ಅಯ್ಯಪ್ಪ ಅವರ ನೆರವಿನಿಂದ ಈ ಸಾಧನೆ ಸಾಧ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಶಸ್ತಿ ಸ್ವೀಕರಿಸುವಾಗ ಕಪಿಲ್ ದೇವ್ ಇದ್ದರು. ಇದು ತುಂಬಾ ಖುಷಿ ನೀಡಿದೆ~ ಎಂದು ಅವರು ಹೇಳಿದರು.

ಕಳೆದ ವರ್ಷದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಡಬಲ್ಸ್‌ನಲ್ಲಿ ನಿಕ್ಷೇಪ್ ಪ್ರಶಸ್ತಿ ಜಯಿಸಿದ್ದರು. 2012ರಲ್ಲಿ ಮುಂಬೈಯಲ್ಲಿ ನಡೆದ ಸೂಪರ್ ಸರಣಿ ಟೆನಿಸ್ ಟೂರ್ನಿಯ 14 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು.  ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಟ್ಯಾಲೆಂಟ್ ಸೀರಿಸ್ ಟೂರ್ನಿಯ 16 ಹಾಗೂ 18 ವರ್ಷದೊಳಗಿನವರ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲೂ ಪ್ರಶಸ್ತಿ ಜಯಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.