ಕಾರ್ಡಿಫ್: ಇತ್ತೀಚಿನ ದಿನಗಳಲ್ಲಿ ಭಾರತ ಹಲವು ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದೆ. ಆದರೂ ಗುರುವಾರ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್ನಲ್ಲಿ ಲಂಕಾ ತಂಡವನ್ನು ಹಗುರವಾಗಿ ಕಾಣಲು ಭಾರತ ಸಿದ್ಧವಿಲ್ಲ.
ಯಾವುದೇ ಕ್ಷಣದಲ್ಲೂ ಪುಟಿದೆದ್ದು ನಿಲ್ಲುವ ಸಾಮರ್ಥ್ಯವನ್ನು ಲಂಕಾ ಹೊಂದಿದೆ ಎಂಬುದನ್ನು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅರಿತಿದ್ದಾರೆ. `ಲಂಕಾ ಅಪಾಯಕಾರಿ ತಂಡ' ಎಂದು ದೋನಿ ಬುಧವಾರ ಅಭ್ಯಾಸದ ಬಳಿಕ ತಿಳಿಸಿದರು.
`ಲಂಕಾ ತುಂಬಾ ಅಪಾಯಕಾರಿ ತಂಡ. ನಮ್ಮ ಗಮನ ಮಾಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಮೇಲೆ ಮಾತ್ರ ಸೀಮಿತವಾಗಿಲ್ಲ. ಎದುರಾಳಿ ತಂಡದ ಎಲ್ಲ ಆಟಗಾರರ ಮೇಲೆ ಗಮನ ಇಡುವುದು ಅಗತ್ಯ' ಎಂದು ಹೇಳಿದರು.
ಚಾಂಪಿಯನ್ಸ್ ಟ್ರೋಫಿ ಗೆಲ್ಲಲೇಬೇಕು ಎಂಬ ಒತ್ತಡ ತಂಡದ ಮೇಲೆ ಇಲ್ಲ ಎಂದು ದೋನಿ ಇದೇ ವೇಳೆ ಸ್ಪಷ್ಟಪಡಿಸಿದರು. `ಐಪಿಎಲ್ ಹಾಗೂ ಬಿಸಿಸಿಐಗೆ ಸಂಬಂಧಿಸಿದ ವಿವಾದದ ಕಹಿ ಮರೆಯಲು ಭಾರತ ಕಪ್ ಗೆಲ್ಲಬೇಕು' ಎಂಬುದು ಮಾಧ್ಯಮಗಳು ಮಾಡುತ್ತಿರುವ `ತಪ್ಪು ಪ್ರಚಾರ' ಎಂದಿದ್ದಾರೆ.
`ಭಾರತದ ಮಾಧ್ಯಮಗಳು ಈ ರೀತಿಯ ತಪ್ಪು ಪ್ರಚಾರ ಮಾಡುತ್ತಿವೆ. ಉತ್ತಮ ಕ್ರಿಕೆಟ್ ಆಡುವುದಷ್ಟೇ ನಮ್ಮ ಮುಂದಿರುವ ಗುರಿ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಪಾಯಕಾರಿ ಬೌಲರ್ ಲಸಿತ್ ಮಾಲಿಂಗ ಬಗ್ಗೆ ಹೆದರಿಕೆ ಇಲ್ಲ ಎಂದಿರುವ ದೋನಿ, `ಐಪಿಎಲ್ನಲ್ಲಿ ನಾವು ಹಲವು ಸಲ ಅವರನ್ನು ಎದುರಿಸಿದ್ದೇವೆ. ಉಪ ಭೂಖಂಡದ ಪಿಚ್ಗಳಲ್ಲಿ ಮಾಲಿಂಗ ಉತ್ತಮ ರೀತಿಯಲ್ಲಿ ರಿವರ್ಸ್ ಸ್ವಿಂಗ್ ಎಸೆತಗಳನ್ನು ಹಾಕುವರು. ಆದರೂ ಅವರನ್ನು ಸಮರ್ಥವಾಗಿ ಎದುರಿಸಿದ್ದೇವೆ. ಏನೇ ಆಗಲಿ, ಅವರೊಬ್ಬ ಅಪಾಯಕಾರಿ ಬೌಲರ್ ಹೌದು' ಎಂದು ರಾಂಚಿಯ ಬ್ಯಾಟ್ಸ್ಮನ್ ಹೇಳಿದರು.
ಇಂಗ್ಲೆಂಡ್ನ ನೆಲದಲ್ಲಿ ಉಭಯ ತಂಡಗಳು ಒಟ್ಟ ನಾಲ್ಕು ಸಲ ಎದುರಾಗಿವೆ. 1979ರ ವಿಶ್ವಕಪ್ನಲ್ಲಿ ಆಘಾತಕಾರಿ ಸೋಲು ಅನುಭವಿಸಿದ್ದನ್ನು ಬಿಟ್ಟರೆ, ಇನ್ನುಳಿದ ಎಲ್ಲ ಪಂದ್ಯಗಳಲ್ಲೂ ಭಾರತ ಗೆಲುವಿನ ನಗು ಬೀರಿದೆ.
ಮಳೆ ಭೀತಿ: ಕಾರ್ಡಿಫ್ನಲ್ಲಿ ನಡೆಯುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯೂ ಇದೆ. ಪಂದ್ಯ ರದ್ದುಕೊಂಡರೆ, ಭಾರತ ಫೈನಲ್ಗೆ ಮುನ್ನಡೆಯಲಿದೆ. ಏಕೆಂದರೆ ಮಹಿ ಬಳಗ `ಬಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್ಗೆ ಮುನ್ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.