ಕೋಲ್ಕತ್ತ (ಪಿಟಿಐ): ಹರಾಜು ಪ್ರಕ್ರಿಯೆಯಲ್ಲಿ ಅನಾಥರಾಗಿದ್ದ ಸೌರವ್ ಗಂಗೂಲಿ ಮತ್ತೆ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಹಿಂತಿರುಗುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲ್ಕತ್ತ ನೈಟ್ ರೈಡರ್ಸ್ನ ಮಾಜಿ ನಾಯಕ ಗಂಗೂಲಿ ಈ ಬಾರಿ ಪುಣೆ ವಾರಿಯರ್ಸ್ ಇಂಡಿಯಾ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಗಾಯಗೊಂಡ ವೇಗಿ ಆಶೀಶ್ ನೆಹ್ರಾ ಬದಲಿಗೆ ದಾದಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ‘ಸೋಮವಾರ ಪುಣೆ ತಂಡದ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿದ್ದರು. ತಂಡ ಸೇರುವಂತೆ ಅವರು ನನ್ನನ್ನು ಕೋರಿದರು. ಅದಕ್ಕೆ ನಾನು ಒಪ್ಪಿಗೆ ಸೂಚಿಸಿದ್ದೇನೆ.
ಶೀಘ್ರವೇ ತಂಡ ಸೇರಿಕೊಳ್ಳಲಿದ್ದೇನೆ’ ಎಂದು ಗಂಗೂಲಿ ನುಡಿದಿದ್ದಾರೆ. ಪುಣೆ ವಾರಿಯರ್ಸ್ ಬುಧವಾರ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಆದರೆ ಈ ಪಂದ್ಯದಲ್ಲಿ ಗಂಗೂಲಿ ಆಡುವ ಸಾಧ್ಯತೆ ಕಡಿಮೆ.
ಯುವರಾಜ್ ಸಿಂಗ್ ಸಾರಥ್ಯದ ಪುಣೆ ತಂಡ ಸತತ ಆರು ಪಂದ್ಯಗಳಲ್ಲಿ ಸೋಲು ಕಂಡು ಶೋಚನೀಯ ಸ್ಥಿತಿಯಲ್ಲಿದೆ. ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಹೊಂದಿದೆ. ಈ ತಂಡಕ್ಕೆ ಗಂಗೂಲಿ ಸ್ಫೂರ್ತಿ ನೀಡುವರೇ ಕಾದು ನೋಡಬೇಕು.
ಗಂಗೂಲಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದನ್ನು ಪುಣೆ ವಾರಿಯರ್ಸ್ ನಿರ್ದೇಶಕ ಅಭಿಜಿತ್ ಸರ್ಕಾರ್ ದೃಢಪಡಿಸಿದ್ದಾರೆ.‘ಗಂಗೂಲಿಗೆ ದುಡ್ಡಿಗಾಗಿ ಐಪಿಎಲ್ ಆಡುತ್ತಿಲ್ಲ. ಬದಲಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಕಾತರರಾಗಿದ್ದಾರೆ’ ಎಂದು ಸರ್ಕಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.