ADVERTISEMENT

ವಿನಯ್ ಬೌಲಿಂಗ್: ಪ್ರಸಾದ್ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:57 IST
Last Updated 8 ಏಪ್ರಿಲ್ 2013, 19:57 IST

ಬೆಂಗಳೂರು: ಐಪಿಎಲ್‌ನ ಮೊದಲ ಎರಡೂ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಮಾಡಿದ ವಿನಯ್ ಕುಮಾರ್ ಬಗ್ಗೆ ಆರ್‌ಸಿಬಿ ತಂಡದ ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

`ಎಡಗೈ ವೇಗಿ ಜಹೀರ್‌ಖಾನ್ ಅನುಪಸ್ಥಿತಿಯಲ್ಲಿ ವಿನಯ್ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಲು ವಿನಯ್ ಕಾರಣರಾದರು. ಪ್ರತಿ ಪಂದ್ಯದಲ್ಲೂ ಅವರು ಇದೇ ರೀತಿಯ ಬೌಲಿಂಗ್ ಮಾಡಬೇಕೆಂದು ನಿರೀಕ್ಷೆ ಮಾಡುತ್ತೇವೆ' ಎಂದು ಭಾರತ ತಂಡದ ಮಾಜಿ ವೇಗಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಸನ್‌ರೈಸರ್ಸ್ ವಿರುದ್ಧದ ಪಂದ್ಯದ ಕೊನೆಯ ಓವರ್‌ನಲ್ಲಿ ವಿನಯ್ ಅತ್ಯುತ್ತಮ ಬೌಲಿಂಗ್ ಮಾಡಿದರು. ಸೂಪರ್ ಓವರ್‌ನಲ್ಲಿ 20 ರನ್‌ಗಳನ್ನು ಬಿಟ್ಟುಕೊಟ್ಟಿದ್ದರಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ವಿನಯ್ ಇನ್ನೂ ಹೆಚ್ಚೆಚ್ಚು ಯಾರ್ಕರ್ ಎಸೆತಗಳನ್ನು ಹಾಕಬೇಕು. ಮಂಗಳವಾರದ ಪಂದ್ಯದಲ್ಲಿ ಆ ತಂಡವನ್ನು ಸೋಲಿಸುತ್ತೇವೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿನಯ್ ಹಿಂದಿನ ಪಂದ್ಯದಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದು ಸೋಲಿಗೆ ಕಾರಣವಾಯಿತೇ ಎನ್ನುವ ಪ್ರಶ್ನೆಯನ್ನು ಪ್ರಸಾದ್ ಮುಂದಿಟ್ಟಾಗ, `ಯಾವುದೇ ಆಟಗಾರನ ಬಗ್ಗೆ ನಕಾರಾತ್ಮಕವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಒಂದು ತಂಡದ ಸೋಲು ಅಥವಾ ಗೆಲುವಿಗೆ ಎಲ್ಲಾ ಆಟಗಾರರು ಕಾರಣರಾಗುತ್ತಾರೆ. ವೈಯಕ್ತಿಕ ಟೀಕೆ ಸರಿಯಲ್ಲ' ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.