ಚೆಸ್ಟರ್ ಲೀ-ಸ್ಟ್ರೀಟ್ (ಪಿಟಿಐ): ಇಂಗ್ಲೆಂಡ್ ಎದುರು ನಡೆಯುತ್ತಿರುವ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡದ ರಾಹುಲ್ ದ್ರಾವಿಡ್ ಮತ್ತೊಂದು ವಿವಾದಾತ್ಮಕ ತೀರ್ಪಿಗೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. ಸರಣಿಯಲ್ಲಿ ಮೂರನೇ ಬಾರಿಗೆ ಅವರಿಗೆ ಈ ರೀತಿ ಆಗುತ್ತಿದೆ.
ಶನಿವಾರ ಇಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಅವರ ಎಸೆತದಲ್ಲಿ ಚೆಂಡು ದ್ರಾವಿಡ್ ಅವರ ಬ್ಯಾಟ್ ಸನಿಹ ಹಾದು ವಿಕೆಟ್ ಕೀಪರ್ ಕ್ರೇಗ್ ಕೀಸ್ವೆಟರ್ ಕೈ ಸೇರಿತ್ತು. ಆಗ ಕ್ಯಾಚ್ ಔಟ್ಗಾಗಿ ಇಂಗ್ಲೆಂಡ್ ಆಟಗಾರರು ಮಾಡಿದ ಮನವಿಗೆ ಫೀಲ್ಡ್ ಅಂಪೈರ್ ಬಿಲಿ ಡಾಕ್ಟ್ರೋವ್ ಔಟ್ ನೀಡಲಿಲ್ಲ.
ಆದರೆ ಆತಿಥೇಯ ತಂಡದವರು ಅಂಪೈರ್ ಪುನರ್ ಪರಿಶೀಲನೆ ಪದ್ಧತಿ (ಯುಡಿಆರ್ಎಸ್) ಮೊರೆ ಹೋದರು. ಆಗ ಮೂರನೇ ಅಂಪೈರ್ ಮರಾಯಸ್ ಎರಾಸ್ಮಾಸ್ ಅವರು ಯುಡಿಆರ್ಎಸ್ನ ಹಾಟ್ ಸ್ಪಾಟ್ ತಂತ್ರಜ್ಞಾನದ ನೆರವು ಪಡೆದರು.
ಚೆಂಡು ಬ್ಯಾಟ್ಗೆ ತಾಗಿರುವುದನ್ನು ಗುರುತಿಸುವಲ್ಲಿ ಹಾಟ್ ಸ್ಪಾಟ್ ವಿಫಲವಾಯಿತು. ಹಲವು ಬಾರಿ ರಿಪ್ಲೇ ಮಾಡಿ ನೋಡಿದರು. ಒಂದು ರೀತಿಯ ಶಬ್ದ ಬರುತ್ತಿತ್ತಾದರೂ ಚೆಂಡು ಬ್ಯಾಟ್ಗೆ ಸ್ಪರ್ಷಿಸಿರುವುದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಆದರೂ ದ್ರಾವಿಡ್ ಔಟೆಂದು ಮೂರನೇ ಅಂಪೈರ್ ಎರಾಸ್ಮಾಸ್ ತೀರ್ಪು ನೀಡಿದ್ದು ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಿತು.
ಬ್ಯಾಟ್ಗೆ ಚೆಂಡು ತಾಗಿರುವುದು ಸ್ನಿಕೊ ಮೀಟರ್ನಲ್ಲಿ ಗೊತ್ತಾಗಿದೆ. ಆದರೆ ಈ ಸರಣಿಯಲ್ಲಿ ಸ್ನಿಕೊ ಮೀಟರ್ಅನ್ನು ಯುಡಿಆರ್ಎಸ್ ನಿಯಮದಲ್ಲಿ ಸೇರಿಸಿಲ್ಲ.
ಈ ಕಾರಣ ಯುಡಿಆರ್ಎಸ್ನಲ್ಲಿ ಬಳಸುವ ಹಾಟ್-ಸ್ಪಾಟ್ ತಂತ್ರಜ್ಞಾನ ಈಗ ವಿವಾದಕ್ಕೆ ಕಾರಣವಾಗಿದೆ. ಕೆಲವೊಮ್ಮೆ ಸೂಕ್ಷ್ಮ ಸ್ಪರ್ಷವನ್ನು ಹಾಟ್-ಸ್ಪಾಟ್ ತಂತ್ರಜ್ಞಾನಕ್ಕೆ ಗುರುತಿಸಲು ಸಾಧ್ಯವಾಗುತ್ತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.