ಢಾಕಾ (ಪಿಟಿಐ): ಶ್ರೀಲಂಕಾದ ಅನುಭವಿ ಆಟಗಾರ ಮಹೇಲಾ ಜಯವರ್ಧನೆ ಬಾಂಗ್ಲಾದೇಶದಲ್ಲಿ ಆರಂಭವಾಗಿರುವ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಳಿಕ ಟಿ–20 ಕ್ರಿಕೆಟ್ಗೆ ವಿದಾಯ ಘೋಷಿಸಲು ನಿರ್ಧರಿಸಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಟ್ವಿಟರ್ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ. ‘ಶ್ರೀಲಂಕಾದ ಕ್ರಿಕೆಟ್ ದಿಗ್ಗಜ ಮಹೇಲಾ ಜಯವರ್ಧನೆ ಟ್ವೆಂಟಿ–20 ಕ್ರಿಕೆಟ್ಗೆ ನಿವೃತ್ತಿ ಪ್ರಕಟಿಸುವ ಮೂಲಕ ಭಾನುವಾರವಷ್ಟೇ ಈ ಪ್ರಕಾರಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದ ಸಂಗಕ್ಕಾರ ಅವರನ್ನು ಹಿಂಬಾಲಿಸಿದ್ದಾರೆ’ ಎಂದು ಐಸಿಸಿ ಟ್ವೀಟ್ ಮಾಡಿದೆ.
36ರ ಹರೆಯದ ಜಯವರ್ಧನೆ ಒಟ್ಟು ನಾಲ್ಕು ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ್ದು, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವಿಶ್ವಕಪ್ ಅವರ ಪಾಲಿಗೆ ಕಡೆಯದಾಗಲಿದೆ.
ಹೋದ ವರ್ಷ ತವರಿನಲ್ಲಿ ನಡೆದ ವಿಶ್ವಕಪ್ನಲ್ಲಿ ಜಯವರ್ಧನೆ ಶ್ರೀಲಂಕಾ ತಂಡವನ್ನು ಮುನ್ನಡೆಸಿದ್ದರು. ಆದರೆ ಫೈನಲ್ನಲ್ಲಿ ತಂಡ ವೆಸ್ಟ್ ಇಂಡೀಸ್ ಎದುರು ಸೋಲು ಕಂಡಿದ್ದರಿಂದ ಪ್ರಶಸ್ತಿ ಎತ್ತಿಹಿಡಿಯಲು ಸಾಧ್ಯವಾಗಿರಲಿಲ್ಲ.
ಶ್ರೀಲಂಕಾದ ಅನುಭವಿ ಆಟಗಾರ 49 ಟಿ–20 ಪಂದ್ಯಗಳನ್ನಾಡಿ 31.78ರ ಸರಾಸರಿಯಲ್ಲಿ ಒಟ್ಟು 1335ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 8 ಅರ್ಧ ಶತಕ ಸೇರಿದೆ.
ಏಕದಿನ ಕ್ರಿಕೆಟ್ಗೆ ಸಂಗಕ್ಕಾರ ನಿವೃತ್ತಿ: ಭಾನುವಾರವಷ್ಟೇ ಟಿ–20 ಕ್ರಿಕೆಟ್ಗೆ ವಿದಾಯ ಘೋಷಿಸಲು ನಿರ್ಧರಿಸಿದ್ದ ಶ್ರೀಲಂಕಾದ ಅನುಭವಿ ಆಟಗಾರ ಕುಮಾರ ಸಂಗಕ್ಕಾರ ಈಗ ಏಕದಿನ ಕ್ರಿಕೆಟ್ಗೂ ನಿವೃತ್ತಿ ಪ್ರಕಟಿಸಲು ಮುಂದಾಗಿದ್ದಾರೆ. 2015ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ನಲ್ಲಿ ನಡೆಯುವ ಏಕದಿನ ವಿಶ್ವಕಪ್ ನಂತರ ಅವರು ಏಕದಿನ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.