ಸಿಡ್ನಿ/ಮೆಲ್ಬರ್ನ್: ‘ಕಳೆದುಕೊಂಡ ವಿಶ್ವಾಸವನ್ನು ಮರಳಿ ಗಳಿಸಲು ಯತ್ನಿಸಲಾಗುವುದು’ ಎಂದು ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ವೀವ್ ಸ್ಮಿತ್ ಹೇಳಿದ್ದಾರೆ.
ಶಿಕ್ಷೆಗೆ ಒಳಗಾದ ನಂತರ ವಿದೇಶಕ್ಕೆ ತೆರಳಿದ್ದ ಅವರು ಶುಕ್ರವಾರ ತಾಯ್ನಾಡಿಗೆ ವಾಪಸಾಗಿದ್ದಾರೆ. ಇಲ್ಲಿಗೆ ಬಂದ ನಂತರ ಸಾಮಾಜಿಕ ತಾಣಗಳಿಗೆ ಚಿತ್ರವನ್ನು ಪೋಸ್ಟ್ ಮಾಡಿರುವ ಅವರು ‘ಜನರ ವಿಶ್ವಾಸವನ್ನು ಗಳಿಸಲು ಪ್ರಯತ್ನ ಮಾಡುತ್ತೇನೆ’ ಎಂದು ಬರೆದಿದ್ದಾರೆ.
‘ಪರಿಸ್ಥಿತಿ ತಿಳಿಗೊಳ್ಳುವ ವರೆಗೆ ಹೊರಗೆ ಇರುವುದೇ ಒಳಿತು ಎಂದು ತಿಳಿದುಕೊಂಡು ವಿದೇಶ ಪ್ರವಾಸದಲ್ಲಿದ್ದೆ. ತಾಯ್ನಾಡಿಗೆ ವಾಪಸಾಗಿರುವುದರಿಂದ ಮನಸ್ಸು ಉಲ್ಲಸಿತಗೊಂಡಿದೆ. ಆಸ್ಟ್ರೇಲಿಯಾದ ಜನರು ನನಗೆ ನೀಡಿರುವ ಬೆಂಬಲವನ್ನು ಮರೆಯಲು ಸಾಧ್ಯವೇ ಇಲ್ಲ. ಅವರು ಕಳುಹಿಸಿರುವ ಪತ್ರಗಳು ಮತ್ತು ಇ ಮೇಲ್ಗಳ ಸಂಖ್ಯೆ ಕಂಡು ನಾನು ಮೂಕವಿಸ್ಮಿತನಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ವೇಗದ ಬೌಲರ್ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಚೆಂಡು ವಿರೂಪಗೊಳಿಸಿದ್ದರು.
ತಂಡದ ನಾಯಕರಾಗಿದ್ದ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಇದಕ್ಕೆ ಕುಮ್ಮಕ್ಕು ನೀಡಿದ್ದರು. ಹೀಗಾಗಿ ಇವರಿಬ್ಬರನ್ನು ಆ ಸ್ಥಾನಗಳಿಂದ ವಜಾ ಮಾಡಲಾಗಿತ್ತು. ನಂತರ ಒಂದು ವರ್ಷದ ನಿಷೇಧ ಹೇರಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.