ADVERTISEMENT

ವೀರೂ ಪಡೆಗೆ ಮಹಿ ಬಳಗದ ಸವಾಲು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ವೀರೇಂದ್ರ ಸೆಹ್ವಾಗ್ ನಾಯಕತ್ವದ ದೆಹಲಿ ಡೇರ್‌ಡೆವಿಲ್ಸ್ ಮತ್ತೆ ಗೆಲುವಿನ ಹಾದಿ ಹಿಡಿಯುವ ಕನಸು ಕಂಡಿದೆ. ಜಯ ಸಾಧ್ಯ ಎನ್ನುವ ವಿಶ್ವಾಸವೂ ಬಲಗೊಂಡಿದೆ. ಅದಕ್ಕೆ ಕಾರಣ ಕೆವಿನ್ ಪೀಟರ್ಸನ್ ಹಾಗೂ ಮಾಹೇಲ ಜಯವರ್ಧನೆ ಆಗಮನ.

ಮಂಗಳವಾರ ಇಲ್ಲಿನ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೋರಾಡಲಿರುವ ಡೇರ್‌ಡೆವಿಲ್ಸ್ ಎರಡು ಪಾಯಿಂಟುಗಳನ್ನು ತನ್ನ ಖಾತೆಗೆ ಸೇರಿಸಿಕೊಳ್ಳುವ ಗುರಿ ಹೊಂದಿದೆ.

`ವೀರೂ~ ಪಡೆಗೆ ಮೊದಲ ಎರಡು ಪಂದ್ಯಗಳಲ್ಲಿ ಪೀಟರ್ಸನ್ ಹಾಗೂ ಜಯವರ್ಧನೆ ನೆರವು ಸಿಕ್ಕಿರಲಿಲ್ಲ. ಅವರಿಬ್ಬರೂ ತಮ್ಮ ದೇಶದ ತಂಡಕ್ಕಾಗಿ ಆಡುತ್ತಿದ್ದರಿಂದ ಐಪಿಎಲ್‌ಗೆ ತಡವಾಗಿ ಆಗಮಿಸಿದ್ದಾರೆ. ಕೆವಿನ್ ಮತ್ತು ಮಾಹೇಲ ಬಂದಿದ್ದು ಡೇರ್‌ಡೆವಿಲ್ಸ್ ನಾಯಕ ಉತ್ಸಾಹಗೊಳ್ಳುವಂತೆ ಮಾಡಿದೆ.

`ಯಾವುದೇ ನಾಯಕ ಇಂಥ ಆಟಗಾರರು ತನ್ನ ತಂಡದಲ್ಲಿ ಇರಬೇಕೆಂದು ಇಷ್ಟಪಡುತ್ತಾನೆ~ ಎಂದು ಸೆಹ್ವಾಗ್ ಹೇಳಿದ್ದು ಗಮನ ಸೆಳೆದ ಮಾತು. ಕೋಲ್ಕತ್ತ ನೈಟ್ ರೈಡರ್ಸ್ ಎದುರು ಎಂಟು ವಿಕೆಟ್‌ಗಳಿಂದ ಗೆದ್ದು ಈ ಟ್ವೆಂಟಿ-20 ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದ್ದ ಡೇರ್‌ಡೆವಿಲ್ಸ್‌ಗೆ ಅದೇ ಗತಿಯನ್ನು ಕಾಯ್ದುಕೊಳ್ಳಲು ನಂತರದ ಪಂದ್ಯದಲ್ಲಿ ಸಾಧ್ಯವಾಗಿರಲಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಇಪ್ಪತ್ತು ರನ್‌ಗಳ ಅಂತರದ ಸೋಲು ಅದಕ್ಕೆ ಆಘಾತಕಾರಿ ಎನಿಸಿತ್ತು. ಆ ನಿರಾಸೆಯ ನಂತರ ಬ್ಯಾಟಿಂಗ್ ಶಕ್ತಿಯುತ ಆಗುವುದು ಅಗತ್ಯವೂ ಎನಿಸಿತು. ಈಗ ಶ್ರೀಲಂಕಾದ ಮಾಹೇಲ ಹಾಗೂ ಇಂಗ್ಲೆಂಡ್‌ನ ಕೆವಿನ್ ತಂಡಕ್ಕೆ ಬೇಕಾಗಿರುವ ಆಕ್ರಮಣಕಾರಿ ಬ್ಯಾಟಿಂಗ್ ಬಲ ನೀಡುತ್ತಾರೆನ್ನುವುದು ನಿರೀಕ್ಷೆ.

ದೆಹಲಿ ಡೇರ್‌ಡೆವಿಲ್ಸ್ ತಂಡದಲ್ಲಿರುವ ಅನೇಕ ಯುವ ಆಟಗಾರರು ಈ ಇಬ್ಬರೂ ವಿದೇಶಿ ಕ್ರಿಕೆಟಿಗರ ಜೊತೆಗೆ ಆಡಲು ಉತ್ಸುಕರಾಗಿದ್ದಾರೆ. `ಈ ಅನುಭವಿಗಳೊಂದಿಗೆ ಡ್ರೆಸಿಂಗ್ ಕೋಣೆಯಲ್ಲಿ ಇರುವುದೇ ಹೆಮ್ಮೆ ಎನ್ನುವುದು ಯವ ಕ್ರಿಕೆಟಿಗರ ಭಾವನೆ~ ಎಂದು ಸೆಹ್ವಾಗ್ ಪಂದ್ಯದ ಮುನ್ನಾದಿನವಾದ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಒಂದೆಡೆ `ವೀರೂ~ ಬಳಗಕ್ಕೆ ಸಂತಸದ ಕಳೆ. ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಡೆಕ್ಕನ್ ಚಾರ್ಜಸ್ ವಿರುದ್ಧದ 74 ರನ್‌ಗಳ ಅಂತರದ ಗೆಲುವಿನಿಂದ ಹುಮ್ಮಸ್ಸು ಪಡೆದಿದೆ. ಐಪಿಎಲ್ ಐದನೇ ಅವತರಣಿಕೆಯ ಉದ್ಘಾಟನಾ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದಿಂದ ಸೋಲುಂಡಿದ್ದ ಮಹೇಂದ್ರ ಸಿಂಗ್ ದೋನಿ ನೇತೃತ್ವದ ತಂಡವು ಪುಟಿದೆದ್ದಿದೆ. ಆದರೂ ಅದು ತನ್ನ ಬ್ಯಾಟಿಂಗ್ ಇನ್ನಷ್ಟು ಸತ್ವಯುತ ಆಗಬೇಕೆಂದು ಬಯಸುವುದು ಸಹಜ. ಅದರಲ್ಲಿಯೂ ಇನಿಂಗ್ಸ್ ಆರಂಭದಲ್ಲಿ ಆಘಾತ ಆಗದಂತೆ ಎಚ್ಚರ ವಹಿಸುವುದು ಅಗತ್ಯವಾಗಿದೆ.

ಬೌಲಿಂಗ್ ವಿಭಾಗದಲ್ಲಿ ಅದಕ್ಕೆ ಅಷ್ಟೇನು ಚಿಂತೆ ಇಲ್ಲ. ರವಿಂದ್ರ ಜಡೇಜಾ, ಡಗ್ ಬೌಲಿಂಜರ್ ಮತ್ತು ಶದಾಬ್ ಜಕಾತಿ ತಮ್ಮ ಹೊಣೆಯನ್ನು ಸಮರ್ಥವಾಗಿಯೇ ನಿಭಾಯಿಸುತ್ತಿದ್ದಾರೆ. ಆರ್.ಅಶ್ವಿನ್ ಕಳೆದ ಪಂದ್ಯದಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗದಿದ್ದರೂ ರನ್ ಗತಿಗೆ ಕಡಿವಾಣ ಹಾಕುವ ಸಾರ್ಥಕ ಪ್ರಯತ್ನ ಮಾಡಿದ್ದಾರೆ.

ಅಶ್ವಿನ್ ಅವರಂತೆಯೇ ಬಿಗುವಿನ ದಾಳಿ ನಡೆಸುವ ಜೊತೆಗೆ ವಿಕೆಟ್ ಕಬಳಿಸುವಂಥ ಪ್ರಭಾವಿ ಬೌಲಿಂಗ್ ಅನ್ನು ದೆಹಲಿ ಡೇರ್‌ಡೆವಿಲ್ಸ್ ನಾಯಕ ಸೆಹ್ವಾಗ್ ತಮ್ಮ ತಂಡದ ಸ್ಪಿನ್ನರ್‌ಗಳಾದ ರೊಲೆಫ್ ವಾನ್‌ಡೆರ್ ಮೆರ್ವ್ ಹಾಗೂ ಶಹ್ಬಾಜ್ ನದೀಮ್ ಅವರಿಂದ ನಿರೀಕ್ಷಿಸುತ್ತಿದ್ದಾರೆ.

ತಂಡಗಳು:
ದೆಹಲಿ ಡೇರ್‌ಡೆವಿಲ್ಸ್: ವೀರೇಂದ್ರ ಸೆಹ್ವಾಗ್ (ನಾಯಕ), ಮನ್‌ಪ್ರೀತ್ ಜುನೇಜಾ, ವರುಣ್ ಆ್ಯರೊನ್, ಅಜಿತ್ ಅಗರ್ಕರ್, ಪುನೀತ್ ಬಿಸ್ತ್, ರಾಬಿನ್ ಬಿಸ್ತ್, ಗುಲಾಮ್ ಬೋದಿ, ಡಗ್ ಬ್ರೇಸ್‌ವೆಲ್, ಉನ್ಮುಕ್ತ್ ಚಾಂದ್, ಆ್ಯರೊನ್ ಫಿಂಚ್, ಮಾಹೇಲ ಜಯವರ್ಧನೆ, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ನ್ ಮಾರ್ಕೆಲ್, ಶಹ್ಬಾಜ್ ನದೀಮ್, ಯೋಗೇಶ್ ನಗರ್, ಪ್ರಶಾಂತ್ ನಾಯಕ್, ಪವನ್ ನೇಗಿ, ನಮನ್ ಓಜಾ, ಇರ್ಫಾನ್ ಪಠಾಣ್, ಕೆವಿನ್ ಪೀಟರ್ಸನ್, ಕುಲ್ದೀಪ್ ರವಾಲ್, ಆ್ಯಂಡ್ರೆ ರಸೆಲ್, ಆವಿಷ್ಕಾರ್ ಸಾಳ್ವಿ, ರಾಸ್ ಟೇಲರ್, ರೊಲೊಫ್ ವಾನ್‌ಡೆರ್ ಮೆರ್ವ್, ವೇಣುಗೋಪಾಲ್ ರಾವ್, ವಿಕಾಸ್ ಮಿಶ್ರಾ, ಡೇವಿಡ್ ವಾರ್ನರ್, ತೇಜಸ್ವಿ ಯಾದವ್, ಉಮೇಶ್ ಯಾದವ್, ಜಫೀರ್ ಪಟೇಲ್, ಟ್ರಾವಿಸ್ ಬ್ರೈಟ್ ಮತ್ತು ಕಾಲಿನ್ ಇನ್‌ಗ್ರಾಮ್.

ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ದೋನಿ (ನಾಯಕ), ಶ್ರೀಕಾಂತ್ ಅನಿರುಧ್, ರವಿಚಂದ್ರನ್ ಅಶ್ವಿನ್, ಸುಬ್ರಮಣ್ಯಮ್ ಬದರೀನಾಥ್, ಜಾರ್ಜ್ ಬೈಲಿ, ಡಗ್ ಬೌಲಿಂಜರ್, ಡ್ವೇನ್ ಬ್ರಾವೊ, ಫಾಫ್ ಡು ಪ್ಲೆಸ್ಸಿಸ್, ಬೆನ್ ಹಿಲ್ಫೆನ್ಹಾಸ್, ಮೈಕಲ್ ಹಸ್ಸಿ, ರವೀಂದ್ರ ಜಡೇಜಾ, ಶದಾಬ್ ಜಕಾತಿ, ಜೋಗಿಂದರ್ ಶರ್ಮ, ಸೂರಜ್ ರಂದೀವ್, ನುವಾನ್ ಕುಲಶೇಖರ, ಯೋ ಮಹೇಶ್, ಅಲ್ಬಿ ಮಾರ್ಕೆಲ್, ಅಭಿನವ್ ಮುಕುಂದ್, ಸುರೇಶ್ ರೈನಾ, ವೃದ್ಧಿಮಾನ್ ಸಹಾ, ಸ್ಕಾಟ್ ಸ್ಟೈರಿಸ್, ಸುದೀಪ್ ತ್ಯಾಗಿ, ಕೆ.ವಾಸುದೇವದಾಸ್, ಗಣಪತಿ ವಿಘ್ನೇಶ್ ಮತ್ತು ಮುರಳಿ ವಿಜಯ್.
ಪಂದ್ಯ ಆರಂಭ: ರಾತ್ರಿ 8.00ಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.