ನವದೆಹಲಿ: ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿದ್ದ ವೇಗದ ಬೌಲರ್ ಮಹಮ್ಮದ್ ಶಮಿ ನಿಟ್ಟುಸಿರು ಬಿಟ್ಟಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಭ್ರಷ್ಟಾಚಾರ ನಿಗ್ರಹ ಘಟಕ ಗುರುವಾರ ಅವರನ್ನು ಆರೋಪಮುಕ್ತಗೊಳಿಸಿದೆ. ಹೀಗಾಗಿ ಅವರ ಕೇಂದ್ರೀಯ ಗುತ್ತಿಗೆಯನ್ನು ಬಿಸಿಸಿಐ ಮುಂದುವರಿಸಲಿದೆ.
ಶಮಿ ವಿರುದ್ಧ ದೌರ್ಜನ್ಯ ಆರೋಪ ಮಾಡಿದ್ದ ಆವರ ಪತ್ನಿ ಹಸೀನ್ ಜಹಾನ್ ಕೋಲ್ಕತ್ತ ಪೊಲೀಸರಿಗೆ ದೂರು ನೀಡಿದ್ದರು. ‘ಪಾಕಿಸ್ತಾನದ ಯುವತಿಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿರುವ ಶಮಿ ಪಂದ್ಯ ಫಿಕ್ಸಿಂಗ್ ಮಾಡಿದ್ದಾರೆ’ ಎಂದೂ ಆರೋಪಿಸಿದ್ದರು. ಆದರಿಂದಾಗಿ ಶಮಿ ಅವರ ಗುತ್ತಿಗೆ ನವೀಕರಿಸಲು ಬಿಸಿಸಿಐ ಹಿಂದೇಟು ಹಾಕಿತ್ತು. ಈಗ ‘ಬಿ’ ಹಂತದ ಗುತ್ತಿಗೆಯಡಿ ಅವರನ್ನು ಮುಂದುವರಿಸಲಾಗಿದೆ. ಶಮಿ ₹ 3 ಕೋಟಿ ಪಡೆಯಲಿದ್ದಾರೆ. ಅವರು ಐಪಿಎಲ್ನಲ್ಲಿ ಆಡುವುದು ಕೂಡ ಖಚಿತವಾಗಿದೆ. ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ಫ್ರಾಂಚೈಸ್ ಹರಾಜಿನಲ್ಲಿ ಖರೀದಿ ಮಾಡಿತ್ತು. ದುಬೈನಲ್ಲಿ ಶಮಿ ಅವರನ್ನು ಭೇಟಿಯಾಗಿದ್ದದ್ದು ನಿಜ ಎಂದು ಅಲಿಶ್ಬಾ ಹೇಳಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ನೀರಜ್ ಕುಮಾರ್ ಅವರನ್ನು ತನಿಖಾಧಿಕಾರಿಯಾಗಿ ಬಿಸಿಸಿಐ ನೇಮಕ ಮಾಡಿತ್ತು.
‘ತನಿಖೆ ನಡೆಸಿದ ನೀರಜ್ ಕುಮಾರ್ ಅವರು ವರದಿಯನ್ನು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಗೆ ಒಪ್ಪಿಸಿದ್ದರು. ಈ ವರದಿಯ ಆಧಾರದಲ್ಲಿ ಶಮಿ ಅವರನ್ನು ತಪ್ಪಿತಸ್ಥ ಅಲ್ಲ ಎಂದು ಪರಿಗಣಿಸಲು ಮಂಡಳಿಯು ನಿರ್ಧರಿಸಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.