ನವದೆಹಲಿ (ಪಿಟಿಐ): ಈ ಪ್ರಕರಣದ ತನಿಖೆ ಮಾಡಿದ್ದ ನಿವೃತ್ತ ನ್ಯಾಯಮೂರ್ತಿ ಸುಧೀಂದ್ರ ನಾನಾವತಿ ಅವರು ಶ್ರೀಶಾಂತ್ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
`ಹರಭಜನ್ ಅವರು ಶ್ರೀಶಾಂತ್ ಕೆನ್ನೆಗೆ ಹೊಡೆದಿದ್ದು ನಿಜ. ಎರಡನೇ ಬಾರಿಯೂ ಹೊಡೆಯಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ತಡೆದರು. ಹರಭಜನ್ ಅಂಗೈಯ ಹಿಂಬದಿಯಿಂದ ಶ್ರೀಶಾಂತ್ ಅವರ ಬಲ ಕೆನ್ನೆಗೆ ಹೊಡೆಯುವುದನ್ನು ವಿಡಿಯೊದಲ್ಲಿ ಸ್ಪಷ್ಟವಾಗಿ ನೋಡಿದ್ದೇನೆ' ಎಂದೂ ಅವರು ವಿವರಿಸಿದ್ದಾರೆ.
ಶುಕ್ರವಾರ ನವದೆಹಲಿಯಲ್ಲಿ ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿದ ಅವರು, `ಕೆನ್ನೆಗೆ ಹೊಡೆದಿದ್ದನ್ನು ಹರಭಜನ್ ನನ್ನ ಮುಂದೆ ಒಪ್ಪಿಕೊಂಡಿದ್ದಾರೆ. ಬಿಸಿಸಿಐ ಕಚೇರಿಯಲ್ಲಿ ಆ ವಿಡಿಯೊ ನೋಡಿ ಆಶ್ಚರ್ಯವಾಗಿತ್ತು. ಈ ಘಟನೆಗೆ ಶ್ರೀಶಾಂತ್ ಪ್ರಚೋದನೆ ಕಾರಣವಾಗಿತ್ತಾ ಎಂಬ ಬಗ್ಗೆಯೂ ತನಿಖೆ ಮಾಡಿದ್ದೆ. ಆದರೆ, ಆ ರೀತಿ ಏನೂ ಕಂಡುಬಂದಿರಲಿಲ್ಲ' ಎಂದು ಸುಧೀಂದ್ರ ನಾನಾವತಿ ನುಡಿದರು.
ಪ್ರತಿಕ್ರಿಯೆಗೆ ನಕಾರ: ಶ್ರೀಶಾಂತ್ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಲು ಹರಭಜನ್ ನಿರಾಕರಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ, `ಶ್ರೀಶಾಂತ್ ಹೇಳಿಕೆಗೆ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ. ಐಪಿಎಲ್ ಪಂದ್ಯಗಳತ್ತ ಮಾತ್ರ ನನ್ನ ಗಮನ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.