ನವದೆಹಲಿ: ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಪ್ರಾದೇಶಿಕ ಕೇಂದ್ರಗಳ ಮುಖ್ಯಸ್ಥರ ವಿರುದ್ಧ ಮಹಾನಿರ್ದೇಶಕಿ ನೀಲಂ ಕಪೂರ್ ಸಿಡಿದರು. ಸಾಯ್ ಬೆಂಗಳೂರು ಕೇಂದ್ರದಲ್ಲಿ ನೀಡಿದ ಆಹಾರದಲ್ಲಿ ಹುಳ ಮತ್ತು ತಿಗಣೆ ಇತ್ತು ಎಂದು ಭಾರತ ಹಾಕಿ ತಂಡದ ಕೋಚ್ ಹರೇಂದ್ರ ಸಿಂಗ್ ಇತ್ತೀಚೆಗೆ ದೂರಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಮಹಾ ನಿರ್ದೇಶಕಿ ಸಾಯ್ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಿ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರಗಳಲ್ಲಿ ನೀಡುವ ಆಹಾರದ ಗುಣಮಟ್ಟ, ತರಬೇತಿ ವಿಧಾನ ಮತ್ತು ಭದ್ರತೆಯ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಕ್ರೀಡೆಯ ಬೆಳವಣಿಗೆ ದೃಷ್ಟಿಯಿಂದ ಸಾಯ್ ಕೇಂದ್ರಗಳಲ್ಲಿ ಅತ್ಯಂತ ಉತ್ತಮ ಗುಣಮಟ್ಟವನ್ನು ಪಾಲಿಸಬೇಕು’ ಎಂದು ನೀಲಂ ಕಪೂರ್ ಅವರು ಮುಖ್ಯಸ್ಥರಿಗೆ ಸೂಚಿಸಿದರು.
ಕ್ಯಾಂಟೀನ್ನಲ್ಲಿ ಹೊಸತನ: ಪ್ರಾದೇಶಿಕ ಕೇಂದ್ರಗಳಲ್ಲಿನ ಕ್ಯಾಂಟೀನ್ ಗುಣಮಟ್ಟ ಹೆಚ್ಚಿಸಲು ಚಿಂತನೆ ನಡೆಸಿರುವ ಸಾಯ್, ಹೊಸ ಟೆಂಡರ್ ಕರೆದಿದೆ. ಇನ್ನು ಮುಂದೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಆಗಾಗ ಸಭೆ ನಡೆಸಲಿದೆ. ಭದ್ರತೆ ಮತ್ತು ತರಬೇತಿ ವಿಧಾನದ ಮೇಲೆಯೂ ನಿಗಾ ಇರಿಸಲಿದೆ. ಯಾವುದೇ ಲೋಪಕ್ಕೆ ಆಯಾ ಕಚೇರಿ ಗಳ ಮುಖ್ಯಸ್ಥರೇ ಜವಾಬ್ದಾರಿ ಆಗುತ್ತಾರೆ ಎಂದು ಎಚ್ಚರಿಸಲಾಗಿದೆ.
ಮಹಿಳಾ ಬಾಕ್ಸರ್ಗಳ ಭೇಟಿ: ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಕಾರಣ ಇಲ್ಲಿನ ಇಂದಿರಾ ಗಾಂಧಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ನೀಲಂ ಕಪೂರ್ ಮಹಿಳಾ ಬಾಕ್ಸರ್ಗಳ ಜೊತೆ ಮಾತನಾಡಿದರು.
ಲೈಂಗಿಕ ದೌರ್ಜನ್ಯ ಆರೋಪಗಳಿಗೆ ಸಂಬಂಧಿಸಿ ತನಿಖೆ ನಡೆಸಲು ಅಧಿಕಾರಿಗಳ ಸಮಿತಿಯೊಂದನ್ನು ರಚಿಸ ಲಾಗಿದೆ ಎಂದು ನೀಲಂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.