ADVERTISEMENT

ಸೆಮಿಗೆ ವಿಘ್ನೇಶ್‌

ಟೆನಿಸ್‌: ಡಬಲ್ಸ್‌ನಲ್ಲಿ ನಿಕ್ಷೇಪ್‌– ಯಶ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 19:30 IST
Last Updated 13 ಡಿಸೆಂಬರ್ 2013, 19:30 IST

ಬೆಂಗಳೂರು: ಎರಡೂ ಸೆಟ್‌ಗಳಲ್ಲಿ ಅಲ್ಪ  ಪ್ರತಿರೋಧ ಎದುರಿಸಿ ಗೆಲುವಿನ ನಗೆ ಬೀರಿದ ಕರ್ನಾಟಕದ ಎಸ್‌. ವಿಘ್ನೇಶ್‌, ಆರ್‌.ಟಿ. ನಾರಾಯಣ್‌ ಸ್ಮಾರಕ ಎಐಟಿಎ ರಾಷ್ಟ್ರೀಯ ಜೂನಿಯರ್‌ ಟೆನಿಸ್‌್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು.

ಕರ್ನಾಟಕ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಎಂಟರ ಘಟ್ಟದ ಹೋರಾಟದಲ್ಲಿ ವಿಘ್ನೇಶ್‌ 6–3,6–4ರಲ್ಲಿ ಮಹಾರಾಷ್ಟ್ರದ ಧ್ರುವ್‌ ಸುನೀಶ್‌ ಎದುರು ಗೆಲುವು ಸಾಧಿಸಿದರು.

ಇದೇ ವಿಭಾಗದ ಇನ್ನೊಂದು ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಮಹಾರಾಷ್ಟ್ರದ ಆರ್‌.ಡಿ. ಪಂಡೊಲೆ 6–0, 4–6, 6–1ರಲ್ಲಿ ಕರ್ನಾಟಕದ ರಿಷಿ ರೆಡ್ಡಿ ಎದುರು ಗೆಲುವಿನ ನಗೆ ಚೆಲ್ಲಿದರು.

ಬಾಲಕಿಯರ ವಿಭಾಗದ ಎಂಟರ ಘಟ್ಟದ ಪಂದ್ಯಗಳಲ್ಲಿ ಮಹಾರಾಷ್ಟ್ರದ ಸ್ನೇಹಲ್‌ ಮಾನೆ 6–3, 7–5ರಲ್ಲಿ ಆತಿಥೇಯ ರಾಜ್ಯದ ಎಸ್‌. ಸೋಹಾ ಮೇಲೂ, ಗುಜರಾತ್‌ನ ಸಿ. ವೈದೇಹಿ 6–3, 6–3ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರಿಂಕಲ್‌ ಸಿಂಗ್‌ ವಿರುದ್ಧವೂ ಜಯ ಸಾಧಿಸಿದರು.

ನಿಕ್ಷೇಪ್‌ ಜೋಡಿಗೆ ಗೆಲುವು
ಸಿಂಗಲ್ಸ್‌ನಲ್ಲಿ ಜಯದ ನಾಗಾಲೋಟ ಮುಂದುವರಿಸಿರುವ ಅಗ್ರ ಶ್ರೇಯಾಂಕದ ಬಿ.ಆರ್‌. ನಿಕ್ಷೇಪ್‌ ಡಬಲ್ಸ್‌ನಲ್ಲಿ ಚಾಂಪಿಯನ್‌ ಆದರು. ಮಧ್ಯ ಪ್ರದೇಶದ ಯಶ್‌ ಯಾದವ್‌ ಜೊತೆ ಆಡಿದ ನಿಕ್ಷೇಪ್‌ ಫೈನಲ್‌ ಹೋರಾಟದಲ್ಲಿ 6–1, 6–7, 10–6ರಲ್ಲಿ ಅಸ್ಸಾಂನ ಪರೀಕ್ಷಿತ್‌ ಸೋಮಾನಿ ಹಾಗೂ ಪಶ್ಚಿಮ ಬಂಗಾಳದ ಸನಿಲ್‌ ಜಗಿತಿಯಾನಿ ಅವರನ್ನು ಮಣಿಸಿದರು.

ಅಭಿನಿಕಾ ಜೋಡಿ ಚಾಂಪಿಯನ್‌
ಬಾಲಕಿಯರ ವಿಭಾಗದ ಡಬಲ್ಸ್‌ನಲ್ಲಿ ತಮಿಳುನಾಡಿನ ಆರ್‌. ಅಭಿನಿಕಾ ಮತ್ತು ಆರ್‌. ಸಾಯಿ ಆವಂತಿಕಾ ಚಾಂಪಿಯನ್‌ ಆದರು.
ಪ್ರಶಸ್ತಿ ಘಟ್ಟದ ಹೋರಾಟದಲ್ಲಿ ಈ ಜೋಡಿ 6–3, 6–1ರಲ್ಲಿ ಆಂಧ್ರಪ್ರದೇಶದ ಹರ್ಷಾ ಸಾಯಿಚಲ್ಲಾ ಹಾಗೂ ತಮಿಳುನಾಡಿನ ಸಿ.ಎಸ್‌. ಪ್ರಣೀತಾ ಎದುರು ಜಯ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.