ಮೈಸೂರು: ಇಲ್ಲಿಯ ಪೇರೆಂಟ್ಸ್ ಟೇಬಲ್ ಟೆನಿಸ್ ಸಂಸ್ಥೆಯ ಎಂ.ವಿ. ಸ್ಫೂರ್ತಿ ಮತ್ತು ಬೆಂಗಳೂರಿನ ಬಿಎನ್ಎಂ ಕ್ಲಬ್ನ ಶ್ರೇಯಲ್ ಕೆ. ತೇಲಂಗ್ ಪಿರಿಯಾಪಟ್ಟಣ ತಾಲ್ಲೂಕಿನ ಗುಡ್ಡೇನಹಳ್ಳಿಯ ನಳಂದ ಗುರುಕುಲದಲ್ಲಿ ನಡೆಯುತ್ತಿರುವ ರಾಜ್ಯ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಶನಿವಾರ ಕ್ರಮವಾಗಿ ಜೂನಿಯರ್ ಬಾಲಕಿಯರ ಮತ್ತು ಬಾಲಕರ ವಿಭಾಗದ ಪ್ರಶಸ್ತಿ ಗೆದ್ದರು.
ಮೈಸೂರು ಟೇಬಲ್ ಟೆನಿಸ್ ಸಂಸ್ಥೆ ಮತ್ತು ಕುಶಾಲನಗರದ ಎನ್ಜಿಐ ಪಬ್ಲಿಕ್ ಶಾಲೆಯ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ಸಬ್ ಜೂನಿಯರ್ ಬಾಲಕಿಯರ ಫೈನಲ್ನಲ್ಲಿ ತಮ್ಮನ್ನು ಸೋಲಿಸಿದ್ದ ಬೆಂಗಳೂರಿನ ಎಂಟಿಟಿಎದ ಅರ್ಚನಾ ಕಾಮತ್ ಅವರನ್ನು ಶನಿವಾರ ಜೂನಿಯರ್ ವಿಭಾಗದ ಫೈನಲ್ನಲ್ಲಿ ಸೋಲಿಸಿದ ಎಂ.ವಿ. ಸ್ಫೂರ್ತಿ ಸೇಡು ತೀರಿಸಿಕೊಂಡರು. ಸ್ಪೂರ್ತಿ 11-7, 11-7, 11-8, 8-11, 11-7ರಿಂದ ಅರ್ಚನಾಗೆ ಸೋಲಿನ ರುಚಿ ತೋರಿಸಿದರು.
ಸೆಮಿಫೈನಲ್ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಸ್ಫೂರ್ತಿ 11-4, 8-11, 11-9, 11-7, 11-6ರಿಂದ ಮೈಸೂರಿನ ಹರ್ಷ ಟೇಬಲ್ ಟೆನಿಸ್ ಸಂಸ್ಥೆಯ ರಿಧಿ ರೋಹಿತ್ ವಿರುದ್ಧ ಗೆಲುವು ಸಾಧಿಸಿದರು. ಇನ್ನೊಂದು ಪಂದ್ಯದಲ್ಲಿ ಅರ್ಚನಾ 11-2, 11-3, 11-8, 11-9ರಿಂದ ಜೆಟಿಟಿಎದ ರಕ್ಷಾ ರಾಮಕುಮಾರ್ ವಿರುದ್ಧ ಜಯಿಸಿದರು.
ಶ್ರೇಯಲ್ಗೆ ಜಯ: ಜೂನಿಯರ್ ಬಾಲಕರ ಫೈನಲ್ನಲ್ಲಿ ಶ್ರೇಯಲ್ ಕೆ. ತೇಲಂಗ್ 8-11, 11-7, 11-5, 11-8, 11-7ರಿಂದ ವೇದಾಂತ್ ಎಂ. ಅರಸ್ ವಿರುದ್ಧ ಜಯಶಾಲಿಯಾದರು.
ಸೆಮಿಫೈನಲ್ ಪಂದ್ಯಗಳಲ್ಲಿ ಶ್ರೇಯಲ್ ತೇಲಂಗ್ 11-8, 11-5, 11-4, 11-8ರಿಂದ ಹೊರೈಜನ್ ಕ್ಲಬ್ನ ಸುಚೇತ್ ಪಿ. ಶೆಣೈ ವಿರುದ್ಧ; ವೇದಾಂತ್ ಅರಸ್ 11-6, 9-11, 11-5, 11-9, 11-9ರಿಂದ ಮಲ್ಲೇಶ್ವರಂ ಟಿಟಿ ಕ್ಲಬ್ನ ಆರ್.ಬಿ. ರಕ್ಷಿತ್ ವಿರುದ್ಧ ಗೆದ್ದರು.
ನಾನ್ಮೆಡಲಿಸ್ಟ್ ಸಿಂಗಲ್ಸ್ ಫೈನಲ್ನಲ್ಲಿ ಎಂಟಿಟಿಎದ ನಾಗರ್ಜುನ 11-9, 8-11, 5-11, 11-7, 11-9ರಿಂದ ಅವರದೇ ಕ್ಲಬ್ನ ದಿನಕರ್ ನಾಯ್ಡು ವಿರುದ್ಧ ಗೆದ್ದರು.
ಸೆಮಿಫೈನಲ್ನಲ್ಲಿ ನಾಗರ್ಜುನ 11-8, 9-11, 10-12, 11-9, 11-5ರಿಂದ ಬಿಎನ್ಎಂಟಿಟಿಎದ ದಕ್ಷ ಕೆ. ತೇಲಂಗ್ ವಿರುದ್ಧ; ದಿನಕುರ್ ನಾಯ್ಡು 11-6, 11-4, 12-10ರಿಂದ ನಿತಿನ್ ತಿವಾರಿ ವಿರುದ್ಧ ಗೆಲುವು ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.