ADVERTISEMENT

ಹಾಕಿ: ಕರ್ನಾಟಕಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ಚೆನ್ನೈ (ಪಿಟಿಐ): ಸತತ ಸೋಲಿನ ಸಂಕಷ್ಟದಲ್ಲಿದ್ದ ಕರ್ನಾಟಕ ಲಯನ್ಸ್ ತಂಡಕ್ಕೆ ಈಗ ಸಂಭ್ರಮ. ಅದಕ್ಕೆ ಕಾರಣ ಶನಿವಾರ ನಡೆದ ವಿಶ್ವ ಹಾಕಿ ಸರಣಿಯ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಲಭಿಸಿದ ಭರ್ಜರಿ ಗೆಲುವು.

ಆರು ಪಂದ್ಯಗಳನ್ನುಆಡಿದ್ದರೂ, ಎರಡು ಪಂದ್ಯದಲ್ಲಿ (ಈ ಪಂದ್ಯವೂ ಸೇರಿ) ಮಾತ್ರ ಕರ್ನಾಟಕಕ್ಕೆ ಗೆಲುವು ಒಲಿದಿದೆ. ಪ್ರಬಲ ಪೈಪೋಟಿ ಕಂಡು ಬಂದ ಈ ಪಂದ್ಯದಲ್ಲಿ ರವಿ ಪಾಲ್‌ಸಿಂಗ್ ನೇತೃತ್ವದ ಕರ್ನಾಟಕ 5-3ಗೋಲುಗಳಿಂದ ಚೆನ್ನೈ ಚೀತಾಸ್ ಎದುರು ಗೆಲುವು ಸಾಧಿಸಿತು.

ವಿಜಯಿ ತಂಡದ ರವಿಪಾಲ್ 26ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ 63ನೇ ನಿಮಿಷದಲ್ಲಿ ಮತ್ತೊಂದು ಗೋಲು ತಂದಿಟ್ಟರು. ವಿನಾಯಕ ಬಿಜ್ವಾಡ್ (32 ಹಾಗೂ 57ನೇ ನಿಮಿಷ) ಚೆಂಡನ್ನು ಗುರಿ ಸೇರಿಸಿ ಲಯನ್ಸ್ ತಂಡಕ್ಕೆ ಎರಡನೇ ಗೆಲುವು ತಂದು ಕೊಟ್ಟರು.

ಇದಕ್ಕೆ ಚೆನ್ನೈ ಪ್ರಬಲ ಪೈಪೋಟಿ ಒಡ್ಡಿತು. ಈ ತಂಡದ ಮೂರು ಗೋಲುಗಳು ಪೆನಾಲ್ಟಿ ಕಾರ್ನರ್ ಮೂಲಕ ಬಂದಿದ್ದು ವಿಶೇಷ. ಇಮ್ರಾನ್ ವಾರ್ಸಿ ಗಳಿಸಿದ ಮೂರು ಗೋಲುಗಳ ಬಲದಿಂದಲೇ ಚೆನ್ನೈ ತಂಡ ಲಯನ್ಸ್‌ಗೆ ಪ್ರಬಲ ಪೈಪೋಟಿ ಒಡ್ಡಲು ಸಾಧ್ಯವಾಯಿತು. ಇಮ್ರಾನ್ 38, 68 ಹಾಗೂ 69ನೇ ನಿಮಿಷದಲ್ಲಿ ಗೋಲು ಗಳಿಸಿ ಗಮನ ಸೆಳೆದರು. ಕರ್ನಾಟಕ ಆರು ಪಾಯಿಂಟ್‌ಗಳಿಂದ ಕೊನೆಯ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.