ಬೆಂಗಳೂರು: ಸ್ಯಾಮ್ಯೂಯೆಲ್ ನಿರಂಜನ್ ತಂದಿತ್ತ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪೋಸ್ಟಲ್ ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ ಡಿ.ಎಸ್.ಮೂರ್ತಿ ಮತ್ತು ವಿ.ಕರುಣಾಕರನ್ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿ ಪಂದ್ಯದಲ್ಲಿ ಭರ್ಜರಿ ಗೆಲುವು ಗಳಿಸಿದ್ದಾರೆ.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪೋಸ್ಟಲ್ ತಂಡದವರು 6-0 ಗೋಲುಗಳಿಂದ ಫ್ಲೈಯಿಂಗ್ ಹಾಕಿ ಕ್ಲಬ್ ತಂಡವನ್ನು ಪರಾಭವಗೊಳಿಸಿದರು.
ಪೋಸ್ಟಲ್ ವಿರಾಮದ ವೇಳೆಗೆ ಎರಡು ಗೋಲು ಗಳಿಸಿತ್ತು. ಆ ಗೋಲನ್ನು ಪ್ರಕಾಶ್ ಸಾಳ್ಕೆ (6ನೇ ನಿಮಿಷ) ಹಾಗೂ ಪೃಥ್ವಿ (24ನೇ ನಿಮಿಷ) ತಂದಿತ್ತರು.ಪಂದ್ಯದ ದ್ವಿತೀಯಾರ್ಧದಲ್ಲಿ ಪ್ರಕಾಶ್ (38ನೇ ನಿ.) ಮತ್ತೊಂದು ಗೋಲು ಗಳಿಸಿದರು. ಇದು ತಂಡದ ಮುನ್ನಡೆಯನ್ನು 3-0 ಗೋಲುಗಳಿಗೆ ಹೆಚ್ಚಿಸಿತು. ಬಳಿಕದ ಆಟವೆಲ್ಲಾ ನಿರಂಜನ್ಗೆ ಸೇರಿದ್ದು. ಕಾರಣ ಅವರು ಹ್ಯಾಟ್ರಿಕ್ ಗೋಲು ತಂದಿತ್ತರು. 40ನೇ, 45ನೇ ಹಾಗೂ 55ನೇ ನಿಮಿಷದಲ್ಲಿ ಅವರು ಚೆಂಡನ್ನು ಗುರಿ ಸೇರಿಸಿದರು.
ಇನ್ನೊಂದು ಪಂದ್ಯದಲ್ಲಿ ಡಿವೈಎಸ್ಎಸ್ 4-1 ಗೋಲುಗಳಿಂದ ರೈನ್ಬೋ ಹಾಕಿ ಕ್ಲಬ್ ತಂಡವನ್ನು ಸೋಲಿಸಿತು.
ವಿರಾಮದ ವೇಳೆಗೆ 2-1 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಡಿವೈಎಸ್ಎಸ್ ತಂಡದ ಮೈಲಾರ್ (17ನೇ ಹಾಗೂ 54ನೇ ನಿ.), ನರಸಿಂಹ (26ನೇ ನಿ.), ಪ್ರತೀಕ್ (36ನೇ ನಿ.) ಗೋಲು ಗಳಿಸಿದರು. ಸೋಲುಕಂಡ ರೈನ್ಬೋ ತಂಡದ ಬೋಪಣ್ಣ 6ನೇ ನಿಮಿಷದಲ್ಲಿ ಗೋಲು ತಂದಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.