ADVERTISEMENT

ಹಾಕಿ: ಭಾರತಕ್ಕೆ ಆಘಾತ ನೀಡಿದ ಹಾಲೆಂಡ್

​ಪ್ರಜಾವಾಣಿ ವಾರ್ತೆ
Published 30 ಜುಲೈ 2012, 20:15 IST
Last Updated 30 ಜುಲೈ 2012, 20:15 IST
ಹಾಕಿ: ಭಾರತಕ್ಕೆ ಆಘಾತ ನೀಡಿದ ಹಾಲೆಂಡ್
ಹಾಕಿ: ಭಾರತಕ್ಕೆ ಆಘಾತ ನೀಡಿದ ಹಾಲೆಂಡ್   

ಲಂಡನ್: ರಕ್ಷಣೆಯಲ್ಲಿನ ದೌರ್ಬಲ್ಯದಿಂದಾಗಿ ಭಾರತ ಭಾರಿ ದಂಡ ತೆರಬೇಕಾಯಿತು. `ಆಕ್ರಮಣ~ ಶಕ್ತಿಯಿಂದ ಮಾತ್ರ ಪಂದ್ಯ ಗೆಲ್ಲುವ ಪ್ರಯತ್ನಕ್ಕೆ ಯಶಸ್ಸಿನ ಫಲ ಸಿಗಲಿಲ್ಲ. ಹಾಲೆಂಡ್‌ನ `ವಾನ್ ಡೇರ್~ ಜೋಡಿಯು ಭರತ್ ಚೆಟ್ರಿ ಬಳಗಕ್ಕೆ ಆಘಾತ ನೀಡಿತು.

ಹಾಲೆಂಡ್‌ಗೆ ತಿರುಗೇಟು ನೀಡಲು ಉತ್ತರಾರ್ಧದಲ್ಲಿ ಸಾಹಸ ಮಾಡಿದರೂ ಗೆಲುವಿನ ಆಸೆ ಮಾತ್ರ ಈಡೇರಲಿಲ್ಲ. ಫ್ಲೊರಿಸ್ ಎರ್ವೆರ್ಸ್ ನಾಯಕತ್ವದ ಹಾಲೆಂಡ್ 3-2 ಗೋಲುಗಳ ಅಂತರದಿಂದ ಭಾರತಕ್ಕೆ `ಬಿ~ ಗುಂಪಿನ ಮೊದಲ ಪಂದ್ಯದಲ್ಲಿಯೇ ಆಘಾತ ನೀಡಿತು.

ಗೋಲ್ ಕೀಪರ್ ಚೆಟ್ರಿ ಹಾಗೂ ರಕ್ಷಣಾ ಆಟಗಾರರು ಬಲವಾದ ಕೋಟೆಯಾಗಿ ನಿಂತಿದ್ದರೆ ಭಾರತವು ಈ ಆಘಾತದಿಂದ ತಪ್ಪಿಸಿಕೊಳ್ಳಲು ಖಂಡಿತ ಸಾಧ್ಯವಿತ್ತು.

ಎದುರಾಳಿ ಪಡೆಯ ವಾನ್ ಡೇರ್ ಹರ್ಸ್ಟ್ (20 ನೇ. ನಿಮಿಷ), ವೆವುಸ್ಥೋಫ್ ರಾಡೆರಿಕ್ (29ನೇ ನಿ.) ಹಾಗೂ ವಾನ್ ಡೇರ್ ವೀರ್ಡೆನ್ ಮಿಂಕ್ (52ನೇ ನಿ.) ಅವರು ಚೆಂಡನ್ನು ನಿರಾಯಾಸವಾಗಿ ಗುರಿ ಮುಟ್ಟಿಸಿದರು. ಡಿಫೆಂಡರ್‌ಗಳು ಚೆಟ್ರಿಗೆ ತಕ್ಕ ಬೆಂಬಲ ನೀಡಲಿಲ್ಲ ಎನ್ನುವುದೇ ಹಾಲೆಂಡ್ ಮೊದಲ ಗೋಲಿಗೆ ಕಾರಣ.

ಭಾರತದವರು ತಮ್ಮ ಆವರಣದಲ್ಲಿ ಚದುರಿಕೊಂಡು ಆಡಿದ್ದು ಅಪಾಯ ಹೆಚ್ಚುವಂತೆ ಮಾಡಿತು. ಆದ್ದರಿಂದಲೇ ಹರ್ಸ್ಟ್ ಚೆಂಡನ್ನು ಲಾಲಿತ್ಯಪೂರ್ಣವಾಗಿ ಸ್ಟಿಕ್ ಬೀಸಿ ಗೋಲು ಪೆಟ್ಟಿಗೆಯೊಳಗೆ ಕಳುಹಿಸಿದರು. ಹಾಲೆಂಡ್ ತನಗೆ ಸಿಕ್ಕ ಎರಡೂ ಪೆನಾಲ್ಟಿಕ್ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದ್ದು ವಿಶೇಷ. ಆದರೆ ಚೆಟ್ರಿ ಬಳಗದವರು ಈ ವಿಭಾಗದಲ್ಲಿ ವಿಫಲರಾದರು. ಎರಡೂ ಸಲ ಡ್ರ್ಯಾಗ್ ಫ್ಲಿಕ್ ಪರಿಣತ ಸಂದೀಪ್ ಸಿಂಗ್ ಗುರಿ ತಪ್ಪಿದರು.

ವಿರಾಮದ ಹೊತ್ತಿಗೆ ಎರಡು ಗೋಲುಗಳಿಂದ ಹಿಂದಿದ್ದ ಭಾರತ ತಂಡವು ಉತ್ತರಾರ್ಧದಲ್ಲಿ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದನ್ನು ಮೆಚ್ಚಲೇಬೇಕು. ಹಾಲೆಂಡ್ ಪ್ರಥಮಾರ್ಧದಲ್ಲಿ ದೂರದ ಪಾಸ್‌ಗಳನ್ನು ನೀಡುತ್ತಾ ಆಡಿದ್ದರು. ಅದಕ್ಕೆ ತಿರುಮಂತ್ರ ಹಾಕುವ ರೀತಿಯಲ್ಲಿ ಭಾರತದ ಕೋಚ್ ಮೈಕಲ್ ನಾಬ್ಸ್ ಅವರು ಚೆಂಡನ್ನು ಹೆಚ್ಚು ೂತ್ತು ನಿಯಂತ್ರಿಸುವಂಥ ತಂತ್ರದ ಬಲೆಯನ್ನು ಹೆಣೆದರು. ಅದು ಪ್ರಯೋಜನಕಾರಿಯೂ ಆಯಿತು.

ಬದಲಾದ ಈ ಆಟದ ಯೋಜನೆಯ ಫಲವಾಗಿ ಧರ್ಮವೀರ್ ಸಿಂಗ್ (45 ನಿ.) ಹಾಗೂ ಶಿವೇಂದ್ರ ಸಿಂಗ್ (48ನೇ ನಿ.) ಅವರು ಚೆಂಡನ್ನು ಗುರಿ ಮುಟ್ಟಿಸಲು ಸಾಧ್ಯವಾಯಿತು. ಹಾಲೆಂಡ್‌ನಂತೆ ತನಗೆ ಸಿಕ್ಕ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿಸಿದ್ದರೆ ಫಲಿತಾಂಶವು ಭಾರತ ಪರವಾಗಿ ತಿರುಗುತಿತ್ತು ಎನ್ನುವುದಂತೂ ಸ್ಪಷ್ಟ. ಆದರೆ ಹಾಗೆ ಆಗಲಿಲ್ಲ. ಆದ್ದರಿಂದಲೇ ಈಗ ಸೋಲಿನ ನೋವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.