ADVERTISEMENT

‘ಆಮಿಷ ಒಡ್ಡಿದ್ದ ರಾಮಚಂದ್ರನ್’

​ಪ್ರಜಾವಾಣಿ ವಾರ್ತೆ
Published 20 ಜೂನ್ 2015, 19:30 IST
Last Updated 20 ಜೂನ್ 2015, 19:30 IST
‘ಆಮಿಷ ಒಡ್ಡಿದ್ದ ರಾಮಚಂದ್ರನ್’
‘ಆಮಿಷ ಒಡ್ಡಿದ್ದ ರಾಮಚಂದ್ರನ್’   

ನವದೆಹಲಿ:  ‘ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಅಧ್ಯಕ್ಷ ಸ್ಥಾನದ  ಚುನಾವಣೆಯಲ್ಲಿ ನಮ್ಮ ಬಣಕ್ಕೆ ಬೆಂಬಲ ನೀಡಬೇಕು. ಇದಕ್ಕಾಗಿ  ಪ್ರತಿ ವರ್ಷ ₨ 1 ಕೋಟಿ ಕೊಡುತ್ತೇನೆ ಎಂದು ರಾಮಚಂದ್ರನ್‌ ಆಮಿಷ ಒಡ್ಡಿದ್ದರು...’

–ಇದು ಹಾಕಿ ಇಂಡಿಯಾದ ಅಧ್ಯಕ್ಷ ನರೀಂದರ್‌ ಬಾತ್ರಾ ಶನಿವಾರ ಬಹಿರಂಗ ಪಡಿಸಿದ ಮಾಹಿತಿ. ಇದರಿಂದ ಐಒಎ ಅಧ್ಯಕ್ಷ ರಾಮಚಂದ್ರನ್‌ ಮತ್ತು ಬಾತ್ರಾ ನಡುವಿನ ವಾಕ್ಸಮರ ಮತ್ತಷ್ಟು ತಾರಕಕ್ಕೇರಿದೆ. ‘ಹೋದ ವರ್ಷ ನಡೆದ ಐಒಎ ಚುನಾವಣೆಯ ವೇಳೆ ನನಗೆ ಹಣದ ಆಮಿಷ ಒಡ್ಡಲಾಗಿತ್ತು. ನಾನು ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಬೇಕು ಎಂದು ರಾಮಚಂದ್ರನ್‌ ಕೋರಿದ್ದರು. ನನ್ನ ಕಛೇರಿಯಲ್ಲಿಯೇ ನನ್ನನ್ನು ಭೇಟಿಯಾಗಿದ್ದರು’ ಎನ್ನುವ ಮಾಹಿತಿಯನ್ನು ಬಾತ್ರಾ ಬಹಿರಂಗಪಡಿಸಿದ್ದಾರೆ.  ಈ ವಿಷಯವನ್ನು ಬಾತ್ರಾ  ಇ ಮೇಲ್‌ ಮೂಲಕ ರಾಮಚಂದ್ರನ್‌ಗೂ ತಿಳಿಸಿದ್ದಾರೆ.  ಜೊತೆಗೆ  ಇ ಮೇಲ್‌ ಮಾಹಿತಿಯನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದಾರೆ.

‘ನೀವು ನಡೆದುಕೊಳ್ಳುತ್ತಿರುವ ರೀತಿ ಐಒಎ ನಿಯಮಗಳಿಗೆ ವಿರುದ್ಧವಾದದ್ದು ಎಂದು ರಾಮಚಂದ್ರನ್‌ಗೆ ಹೇಳಿದ್ದೆ. ಆದರೆ, ಅವರು ನನ್ನ ಮಾತಿಗೆ ಕಿವಿಗೊಡಲಿಲ್ಲ. ಈ ಕುರಿತು ಅಂತರ ರಾಷ್ಟ್ರೀಯ ಒಲಿಂಪಿಕ್‌ ಸಮಿತಿಗೂ ಮಾಹಿತಿ ನೀಡಿದ್ದೆ. ಇಷ್ಟೆಲ್ಲಾ ಆವಾಂತರ ನಡೆದರೂ ಅವರು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ. ರಾಮಚಂದ್ರನ್‌ ಕೂಡಲೇ  ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು’ ಎಂದು ಬಾತ್ರಾ ಒತ್ತಾಯಿಸಿದ್ದಾರೆ.

‘ಬಾತ್ರಾ ಮಾಡಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಈ ಕುರಿತು ಕಾನೂನು ಹೋರಾಟ
ನಡೆಸುವ ಬಗ್ಗೆ ಯೋಚಿಸುತ್ತಿದ್ದೇನೆ. ನನ್ನ ವಕೀಲರ ಜೊತೆ ಚರ್ಚಿಸಿ ಮಾನನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆಯೂ ಚಿಂತಿಸುತ್ತಿದ್ದೇನೆ’ ಎಂದು ರಾಮಚಂದ್ರನ್ ತಿಳಿಸಿದ್ದಾರೆ. ಹೋದ ವರ್ಷದ ಫೆಬ್ರುವರಿಯಲ್ಲಿ ಐಒಎ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ರಾಮಚಂದ್ರನ್‌ ಅವಿರೋಧವಾಗಿ  ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.