ADVERTISEMENT

2007 ಪರಿವರ್ತನೆಯ ಕಾಲ: ಸೆಹ್ವಾಗ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 18:40 IST
Last Updated 18 ಫೆಬ್ರುವರಿ 2011, 18:40 IST

ಮುಂಬೈ (ಪಿಟಿಐ): ವೀರೇಂದ್ರ ಸೆಹ್ವಾಗ್ ಆಟದ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದು ವರ್ಷಗಳ ಹಿಂದೆ ಭಾರತ ತಂಡದಿಂದ ತಮ್ಮನ್ನು ಕೈಬಿಟ್ಟಾಗ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ‘2007 ಪರಿವರ್ತನೆಯ ಕಾಲ’ ಆಗಿತ್ತೆಂದು ಕೂಡ ತಿಳಿಸಿದ್ದಾರೆ.

ಸಹಜವಾಗಿಯೇ ಆಕ್ರಮಣಕಾರಿ ಆಟವಾಡುತ್ತಾ ಬಂದಿರುವ ‘ವೀರೂ’ ತಮ್ಮ ಕ್ರಿಕೆಟ್ ಜೀವನದ ಒಂದು ಹಂತದಲ್ಲಿ ಎದುರಾಳಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ತಮ್ಮ ಬ್ಯಾಟಿಂಗ್ ತಂತ್ರದಲ್ಲಿ ಕೆಲವು ಸೂಕ್ಷ್ಮವಾದ ಬದಲಾವಣೆ ಮಾಡಿಕೊಂಡ ನಂತರ ಅವರಿಗೆ ಉತ್ತಮ ಫಲ ಸಿಕ್ಕಿದೆ.

ಇದೇ ಸಂದರ್ಭದಲ್ಲಿ ಸೆಹ್ವಾಗ್ ತಮ್ಮ ಬ್ಯಾಟಿಂಗ್ ಬದಲಾವಣೆಯು ಅಗತ್ಯವಾಗಿದ್ದು ಏಕೆನ್ನುವುದನ್ನು ಬಹಿರಂಗಪಡಿಸಿದ್ದಾರೆ. ‘2007ರಲ್ಲಿ ನನ್ನನ್ನು ತಂಡದಿಂದ ಕೈಬಿಡಲಾಯಿತು. ಆ ಸಂದರ್ಭದಲ್ಲಿ ಆಯ್ಕೆಗಾರರು ನನ್ನನ್ನು ಹಾಗೆ ತಂಡದಿಂದ ಹೊರಗೆ ಇಡುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಆಗ ಅವಕಾಶ ತಪ್ಪಿದ್ದು ನನಗೆ ಅಚ್ಚರಿಯಾಗಿರಲಿಲ್ಲ. ಏಕೆಂದರೆ ಪ್ರದರ್ಶನ ಮಟ್ಟದಲ್ಲಿ ಕುಸಿತವಾಗಿತ್ತು’ ಎಂದಿರುವ ಸೆಹ್ವಾಗ್ ‘ಅದೇ ಕಾಲದಲ್ಲಿ ನನ್ನ ಆಟದ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ, ಶೈಲಿಯನ್ನು ಬದಲಾಯಿಸಿಕೊಂಡೆ. ಅಷ್ಟೇ ಅಲ್ಲ ಪ್ರತಿಯೊಂದು ಬಾರಿ ಚೆಂಡನ್ನು ಎದುರಿಸುವಾಗಿನ ನನ್ನ ಯೋಚನೆಯಲ್ಲಿಯೂ ವ್ಯತ್ಯಾಸ ಮಾಡಿಕೊಂಡೆ. ತಂಡಕ್ಕೆ ಹಿಂದಿರುಗಲು ಅಗತ್ಯವಿರುವ ಆಟವಾಡುವುದು ಹೇಗೆಂದು ಮಾತ್ರ ಯೋಚಿಸುತ್ತಿದ್ದೆ’ ಎಂದು ತಿಳಿಸಿದ್ದಾರೆ.

‘ನನಗೆ ಮತ್ತೆ ಒಂದು ಅವಕಾಶ ಸಿಕ್ಕಿತು. ಆಗ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಟೆಸ್ಟ್‌ನಲ್ಲಿ ಅಜೇಯ 150 ರನ್‌ಗಳ ಸಾಧನೆಯ ಮೂಲಕ ಭಾರತ ತಂಡವನ್ನು ಸೋಲಿನ ಅಪಾಯದಿಂದ ಪಾರು ಮಾಡಿದೆ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.