23ರಿಂದ ಈಕ್ವೆಸ್ಟ್ರೀಯನ್ ಚಾಂಪಿಯನ್ಷಿಪ್
ಪ್ರಜಾವಾಣಿ ವಾರ್ತೆ Published 20 ಡಿಸೆಂಬರ್ 2012, 19:59 IST Last Updated 20 ಡಿಸೆಂಬರ್ 2012, 19:59 IST ಬೆಂಗಳೂರು: ಎಎಸ್ಸಿ ಸೆಂಟರ್ ಮತ್ತು ಕಾಲೇಜು ಆಶ್ರಯದಲ್ಲಿ ಡಿಸೆಂಬರ್ 23ರಿಂದ 30ರ ವರೆಗೆ ಉದ್ಯಾನನಗರಿಯಲ್ಲಿರುವ ಎಎಸ್ಸಿ ಅಗರಮ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಜೂನಿಯರ್ ಈಕ್ವೆಸ್ಟ್ರೀಯನ್ ಚಾಂಪಿಯನ್ಷಿಪ್ ಹಾಗೂ `ಬೆಂಗಳೂರು ಕುದುರೆ ಪ್ರದರ್ಶನ' ನಡೆಯಲಿದೆ. ಭಾರತ ಈಕ್ವೆಸ್ಟ್ರೀಯನ್ ಫೆಡರೇಷನ್ ಅನುಮತಿಯ ಮೇರೆಗೆ ಎಎಸ್ಸಿ ಸೆಂಟರ್ ಈ ಚಾಂಪಿಯನ್ಷಿಪ್ ಆಯೋಜಿಸಿದೆ.
`ಯುವಕರಲ್ಲಿ ಶಿಸ್ತು ಹಾಗೂ ಕೌಶಲ ಹೆಚ್ಚಿಸಲು ಈ ಚಾಂಪಿಯನ್ಷಿಪ್ ವೇದಿಕೆಯಾಗಲಿದೆ. ಷೋ ಜಂಪಿಂಗ್, ಡ್ರ್ರೆಸೇಜ್ ಮತ್ತು ಕ್ರಾಸ್ಕಂಟ್ರಿ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, 220 ಕುದುರೆಗಳು, 120 ಸವಾರರು ಪಾಲ್ಗೊಳ್ಳಲಿದ್ದಾರೆ' ಎಂದು ಚಾಂಪಿಯನ್ಷಿಪ್ ಸಂಘಟನಾ ಸಮಿತಿಯ ಉಪಾಧ್ಯಕ್ಷ ಕರ್ನಲ್ ಅಜಯ್ ದುಗ್ಗಾಲ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೇಶದ ವಿವಿಧ ಭಾಗಗಳಿಂದ ಹತ್ತು ಸೈನಿಕ ತಂಡಗಳು ಹಾಗೂ ಹತ್ತು ನಾಗರಿಕ ತಂಡಗಳು ಪಾಲ್ಗೊಳ್ಳಲಿವೆ. 23ರಂದು ಜಂಪಿಂಗ್ ವಿಭಾಗದ ಪ್ರಾಥಮಿಕ ಸುತ್ತಿನ ಸ್ಪರ್ಧೆಗಳು ನಡೆಯಲಿವೆ. ಪ್ರತಿ ಸ್ಪರ್ಧೆಗೆ 10ರಿಂದ 12 ಹರ್ಡಲ್ಗಳು ಇರುತ್ತವೆ. 22ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಲೆಫ್ಟಿನೆಂಟ್ ಜನರಲ್ ಆರ್.ಪಿ. ರಾಯ್ ಭಾಗವಹಿಸಲಿದ್ದಾರೆ.
`1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕರ್ನಲ್ ಜಿ.ಎಂ. ಖಾನ್ ಅವರು ಚಿನ್ನದ ಪದಕ ಜಯಿಸಿದ್ದರು. ಆ ವೇಳೆ ಕ್ರೀಡೆ ಹೆಚ್ಚು ಪ್ರಚಾರ ಪಡೆದುಕೊಂಡಿತ್ತು. ಖಾನ್ ಸಾಕಷ್ಟು ಯುವಕರನ್ನು ಈ ಕ್ರೀಡೆಗೆ ಪರಿಚಯಿಸಿದ್ದರು. ಈಗಲೂ ಹೆಚ್ಚೆಚ್ಚು ಯುವಕರು ಈ ಕ್ರೀಡೆಯತ್ತ ಮುಖ ಮಾಡುತ್ತಿರುವುದು ಖುಷಿಯ ವಿಚಾರ' ಎಂದು ಅಜಯ್ ಹೇಳಿದರು.