ನವದೆಹಲಿ (ಪಿಟಿಐ): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಚೆನ್ನೈನಲ್ಲಿ ಕಾರ್ಯಕಾರಿ ಮಂಡಳಿಯ ತುರ್ತು ಸಭೆ ನಡೆಸಲು ನಿರ್ಧರಿದೆ. ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆ (ಆರ್ಸಿಎ) ಚುನಾವಣೆಗೆ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲು ಸಭೆ ಕರೆಯಲಾಗಿದೆ. ಆದ್ದರಿಂದ ಈ ಸಭೆ ಮಹತ್ವಪಡೆದುಕೊಂಡಿದೆ.
ಒಂದು ವೇಳೆ ಅವರು ಗೆಲುವು ಸಾಧಿಸಿ ಕ್ರಿಕೆಟ್ ಚಟುವ ಟಿಕೆಗಳಿಗೆ ಮರಳಿದರೆ ಎದುರಾಗಬಹುದಾದ ಪರಿಣಾಮಗಳ ಕುರಿತು ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಮಾನ್ಯತೆ ಪಡೆದಿರುವ ಎಲ್ಲಾ ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿಸಿಐ ಸುತ್ತೋಲೆ ಕಳುಹಿಸಿದೆ. ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಕ್ಕೆ ಬದ್ದರಾಗಿರಬೇಕೆಂದು ಸೂಚನೆ ನೀಡಲಾಗಿದೆ.
‘ಬಿಸಿಸಿಐ ಹೊರಡಿಸಿರುವ ಸುತ್ತೋಲೆ ನಮ್ಮ ಕೈ ಸೇರಿದೆ. ಇದರಲ್ಲಿ ಲಲಿತ್ ಮೋದಿ ವಿಚಾರವಾಗಿ ಚರ್ಚಿಸಲು ಡಿಸೆಂಬರ್ 28 ರಂದು ಕಾರ್ಯಕಾರಿ ಮಂಡಳಿಯ ತುರ್ತು ಸಭೆ ಕರೆದಿರುವ ಮಾಹಿತಿ ಇದೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಾಜಸ್ತಾನ ಕ್ರಿಕೆಟ್ ತಂಡಗಳ ಭವಿಷ್ಯ, ಐಪಿಎಲ್ ಪಂದ್ಯಗಳ ಆಯೋಜನೆ ಸೇರಿದಂತೆ ಇತರ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಮೋದಿ ಅವರ ಮೇಲೆ ಆಜೀವ ನಿಷೇಧ ಹೇರಲಾಗಿದ್ದು, ಒಂದು ವೇಳೆ ಅವರು ಆಯ್ಕೆಯಾದರೆ ಬಿಸಿಸಿಐ ಹಾಗೂ ಅದರ ಅಂಗ ಸಂಸ್ಥೆಗಳ ಸಭೆಯಲ್ಲಿ ಪಾಲ್ಗೊಳ್ಳದಂತೆ ತಡೆಯಲು ಯಾವ ಕ್ರಮಗಳನ್ನು ತೆಗೆದುಕೊಳ್ಳ ಬೇಕೆಂಬ ಬಗ್ಗೆಯೂ ಚರ್ಚೆ ಜರುಗಲಿದೆ. ಆರ್ಸಿಎ ಅಧ್ಯಕ್ಷ ಗಾದಿಗೆ ಸ್ಪರ್ಧಿಸದಂತೆ ಮೋದಿ ಅವರನ್ನು ತಡೆಯಲು ಬಿಸಿಸಿಐ ಸಾಕಷ್ಟು ಪ್ರಯತ್ನ ಮಾಡಿತ್ತು.
ಒಂದು ವೇಳೆ ಅವರು ಸ್ಪರ್ಧಿಸಿದರೆ ಆರ್ಸಿಎಗೆ ನೀಡಿರುವ ಮಾನ್ಯತೆಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಒಡ್ಡಿತ್ತು. ಆದರೆ ಸುಪ್ರೀಂ ಕೋರ್ಟ್ ಮೋದಿ ಸ್ಪರ್ಧೆಗೆ ಅನುಮತಿ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.