ADVERTISEMENT

ಭಾರತದ ಆಯ್ಕೆ ಸಮಿತಿ ಮಾದರಿ

ಏಜೆನ್ಸೀಸ್
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST
ಸಲ್ಮಾನ್ ಬಟ್‌
ಸಲ್ಮಾನ್ ಬಟ್‌   

ಕರಾಚಿ: ಉತ್ತಮ ತಂಡ ಕಟ್ಟಬೇಕಾದರೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ಅನುಸರಿಸುವ ಮಾರ್ಗವನ್ನು ಹಿಡಿಯಬೇಕು, ಆಟಗಾರರನ್ನು ಆಯ್ಕೆ ಮಾಡುವಾಗ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು...

ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಹಿರಿಯ ಕ್ರಿಕೆಟಿಗ ಸಲ್ಮಾನ್ ಬಟ್‌ ಮತ್ತು ವಜಾ ಮಾಡಲಾದ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ನೀಡಿದ ಸಲಹೆ ಇದು. ಪಾಕಿಸ್ತಾನದ ಆಯ್ಕೆದಾದರರಿಗೆ ಹೋಲಿಸಿದರೆ ಭಾರತದಲ್ಲಿ ಆಟಗಾರರಿಗೆ ಸಾಮರ್ಥ್ಯ ತೋರಲು ಮತ್ತೆ ಅವಕಾಶಗಳನ್ನು ನೀಡಲಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

‘ರೋಹಿತ್ ಶರ್ಮಾ ರನ್‌ ಗಳಿಕೆ ಸರಾಸರಿ ಒಂದು ಹಂತದಲ್ಲಿ 30ರ ಒಳಗೆ ಇತ್ತು. ಆದರೂ ಆಯ್ಕೆ ಮಂಡಳಿ ಅವರಿಗೆ ಮತ್ತಷ್ಟು ಅವಕಾಶಗಳನ್ನು ನೀಡಿತು. ಹೀಗಾಗಿ ಈಗ ವಿಶ್ವದ ಅಪ್ರತಿಮ ಬ್ಯಾಟ್ಸ್‌ಮನ್ ಆಗಿ ಬೆಳೆದಿದ್ದಾರೆ’ ಎಂದು ಹೇಳಿದ ಅವರು ‘ಪಾಕಿಸ್ತಾನದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಬಳಸುವ ಪಿಚ್‌ಗಳು ಕೂಡ ಉತ್ತಮ ಬ್ಯಾಟ್ಸ್‌ಮನ್‌ಗಳ ಉದಯಕ್ಕೆ ಅಡ್ಡಿಯಾಗುತ್ತಿವೆ’ ಎಂದರು.

ADVERTISEMENT

‘ಬ್ಯಾಟ್ಸ್‌ಮನ್ ಉತ್ತಮ ಇನಿಂಗ್ಸ್ ಕಟ್ಟಲು ಮತ್ತು ಸುದೀರ್ಘ ಅವಧಿಗೆ ತಳವೂರಲು ನೆರವಾಗುವ ಪಿಚ್‌ಗಳನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬಳಸಬೇಕು. ಇದು ಆಟಗಾರರಲ್ಲಿ ಭರವಸೆಯನ್ನು ಮೂಡಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ಅಣಿಯಾಗುವಂತೆ ಮಾಡುತ್ತದೆ. ಪಾಕಿಸ್ತಾನದಲ್ಲಿ ಇಂಥ ವಾತಾವರಣ ಇಲ್ಲ’ ಎಂದು ಬಟ್‌ ಮತ್ತು ಅಕ್ಮಲ್ ಅಭಿಪ್ರಾಯಪಟ್ಟರು.

‘ಇತ್ತೀಚೆಗೆ ಮುಕ್ತಾಯಗೊಂಡ ಪ್ರಮುಖ ಪ್ರಥಮ ದರ್ಜೆ ಟೂರ್ನಿಯಾದ ಕ್ವೈದ್ ಎ ಆಜಮ್ ಟ್ರೋಫಿಯಲ್ಲಿ 20ಕ್ಕೂ ಹೆಚ್ಚು ಬಾರಿ 100 ರನ್‌ ದಾಟದೆ ಇನಿಂಗ್ಸ್ ಮುಕ್ತಾಯಗೊಂಡಿದೆ. ಇದಕ್ಕೆ ಇಲ್ಲಿನ ಪಿಚ್‌ಗಳೇ ಕಾರಣ’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.